ಲೋಕದರ್ಶನ ವರದಿ
ಚಿಕ್ಕಾಂಶಿ ಹೊಸೂರು ಹಾಗೂ ಕ್ಯಾಸನೂರು ಗ್ರಾಮಗಳ ಅಂಗನವಾಡಿ ಕೇಂದ್ರಗಳಿಗೆ ಶಾಸಕ ಶ್ರೀನಿವಾಸ ಮಾನೆ ದಿಢೀರ್ ಭೇಟಿ
ಹಾನಗಲ್ 21: ಚಿಕ್ಕಾಂಶಿ ಹೊಸೂರು ಹಾಗೂ ಕ್ಯಾಸನೂರು ಗ್ರಾಮಗಳ ಅಂಗನವಾಡಿ ಕೇಂದ್ರಗಳಿಗೆ ಶಾಸಕ ಶ್ರೀನಿವಾಸ ಮಾನೆ ದಿಢೀರ್ ಭೇಟಿ ನೀಡಿ, ಕಾರ್ಯ ನಿರ್ವಹಣೆ ಪರೀಶೀಲಿಸಿ ಅಗತ್ಯ ಮಾಹಿತಿ ಪಡೆದರು. ಚಿಕ್ಕಾಂಶಿ ಹೊಸೂರಿನ 2ನೇ ನಂ. ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕಾರ್ಯಕರ್ತೆ ನೇಮಕ ಆದರೂ ಕೂಡ ಸೇವೆಗೆ ಹಾಜರಾಗದೇ ಇರುವುದನ್ನು ತಿಳಿದು ಕೂಡಲೇ ಸೂಕ್ತ ಕ್ರಮಕ್ಕೆ ಸಿಡಿಪಿಒ ಅವರಿಗೆ ಕರೆ ಮಾಡಿ ಸೂಚಿಸಿದರು. ಕಾರ್ಯಕರ್ತೆ ನೇಮಕ ಪ್ರಕ್ರಿಯೆ ನಡೆದು ಹಲವು ದಿನಗಳು ಕಳೆದರೂ ಸೇವೆಗೆ ಹಾಜರಾಗಿಲ್ಲ. ಈ ಬಗ್ಗೆ ಏಕೆ ಗಮನ ಹರಿಸಿಲ್ಲ. ಮೇಲ್ವಿಚಾರಕರು ಮಾಹಿತಿ ನೀಡಿಲ್ಲವೇ ಎಂದು ಸಿಡಿಪಿಒ ಅವರಿಗೆ ಪ್ರಶ್ನಿಸಿ, ತಕ್ಷಣ ಕ್ರಮ ವಹಿಸಿ ಎಂದು ಸೂಚಿಸಿದರು. ಕೇಂದ್ರದಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಿದ್ದರೂ ಸಹ ಹಾಜರಾತಿ ಕಡಿಮೆ ಇರುವುದನ್ನು ಗಮನಿಸಿ ಮಕ್ಕಳ ಹಾಜರಾತಿ ಹೆಚ್ಚಬೇಕು. ಈ ನಿಟ್ಟಿನಲ್ಲಿ ಕಾಳಜಿ ವಹಿಸುವಂತೆ ಸಹಾಯಕರಿಗೆ ಸೂಚಿಸಿದರು.ಬಳಿಕ ಕ್ಯಾಸನೂರು ಗ್ರಾಮದ ಕೇಂದ್ರಕ್ಕೆ ಭೇಟಿ ನೀಡಿ, ಸ್ಟಾಕ್ ರೂಂ ವೀಕ್ಷಿಸಿ, ದಾಖಲೆ ಪುಸ್ತಕಗಳ ಮೇಲೆ ಕಣ್ಣಾಡಿಸಿದರು. ಪೌಷ್ಟಿಕಾಂಶವುಳ್ಳ ಆಹಾರ ಪದಾರ್ಥಗಳ ಪೂರೈಕೆ ಕುರಿತು ಮಾಹಿತಿ ಪಡೆದರು. ಸಮರ್ಕವಾಗಿ ಕರ್ತವ್ಯ ನಿರ್ವಹಿಸುವಂತೆ ಹೇಳಿದರು.