ಅಕ್ಕ ಮಹಾದೇವಿಯವರು ಮೊದಲ ಸ್ತ್ರೀವಾದಿ: ಪ್ರೊ. ಶಾಂತಾದೇವಿ ಟಿ
ವಿಜಯಪುರ 12: ಅಕ್ಕ ಮಹಾದೇವಿಯವರು ರಾಜಪ್ರಭುತ್ವ ಮತ್ತು ಪುರುಷಪ್ರಧಾನ ವ್ಯವಸ್ಥೆಯನ್ನು ತಿರಸ್ಕರಿಸಿ, ಮಹಿಳಾ ಹಕ್ಕುಗಳ ಪರವಾಗಿ ಧ್ವನಿಯೆತ್ತಿದ ಮೊದಲ ಸ್ತ್ರೀವಾದಿ ಹಾಗೂ ಪ್ರಗತಿಪರ ಚಿಂತಕಿ ಎಂದು ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ ಟಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಶನಿವಾರ ಆಯೋಜಿಸಿದ್ದ ಶಿವಶರಣೆ ಅಕ್ಕಮಹಾದೇವಿ ಜಯಂತಿಯನ್ನು ಆಚರಿಸಿ ಅವರು ಮಾತನಾಡಿದರು.
ಅಕ್ಕಮಹಾದೇವಿಯವರು 12ನೇ ಶತಮಾನದ ಶರಣ ಚಿಂತಕಿಯಾಗಿ, ರಾಜಪ್ರಭುತ್ವ ಹಾಗೂ ಪುರುಷ ಪ್ರಧಾನ ವ್ಯವಸ್ಥೆಯನ್ನು ತಿರಸ್ಕರಿಸಿ, ಮಹಿಳಾ ಪರವಾಗಿ ಧ್ವನಿ ಎತ್ತಿದ ಪ್ರಥಮ ಸ್ತ್ರೀವಾದಿ ಹಾಗೂ ಪ್ರಗತಿಪರ ಚಿಂತಕಿ ಎನಿಸಿಕೊಂಡವರು. ತಮ್ಮ ವಚನಗಳ ಮೂಲಕ ಮಹಿಳೆಯ ಆತ್ಮಸ್ವಾತಂತ್ರ್ಯ, ವ್ಯಕ್ತಿತ್ವ, ಹಾಗೂ ಮಾನವೀಯ ಮೌಲ್ಯಗಳಿಗೆ ಪ್ರಾಮುಖ್ಯತೆ ನೀಡಿದರು ಎಂದರು.
ಇದೇ ಸಂದರ್ಭದಲ್ಲಿ ಮಹಿಳಾ ವಿವಿ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಅಕ್ಕಮಹಾದೇವಿಯವರು ಹಲವು ವಚನಗಳನ್ನು ರಚಿಸುವ ಮೂಲಕ ಸಮಾಜದಲ್ಲಿ ಪ್ರಮುಖ ಬದಲಾವಣೆಗಳಿಗೆ ಕಾರಣರಾಗಿದ್ದಾರೆ. ಅವರು ಸ್ತ್ರೀ-ಪುರುಷ ಭೇದವೆನ್ನುವ ಜಾತ್ಯತೀತ ಮನೋಭಾವನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು ಮತ್ತು ಅಂತಹ ಭೇದಭಾವನೆಗಳನ್ನು ಹೊಡೆದು ಹಾಕಲು ಶ್ರಮಿಸಿದರು. ಅವರ ವಚನಗಳು ಮಹಿಳೆಯರ ಆತ್ಮಬಲ, ಸ್ವಾತಂತ್ರ್ಯ ಹಾಗೂ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದಿವೆ. ಅಂತಹ ಮಹಾನ್ ವ್ಯಕ್ತಿತ್ವದ ಆದರ್ಶವನ್ನು ಎಲ್ಲ ವಿದ್ಯಾರ್ಥಿಯು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ವಿಶ್ವವಿದ್ಯಾನಿಲಯ ಆವರಣದ ಅಕ್ಕಮಹಾದೇವಿ ಮೂರ್ತಿಗೆ ಕುಲಪತಿ ಪ್ರೊ. ಶಾಂತಾದೇವಿ ಟಿ ರುದ್ರಾಕ್ಷಿ ಮಾಲೆ ಹಾಕಿ ಮತ್ತು ಉದ್ಯಾನದಲ್ಲಿ ಕದಳಿಯ ಸಸಿಗಳನ್ನು ನೆಡುವ ಮೂಲಕ ಗೌರವ ಸಲ್ಲಿಸಿದರು.
ಅತಿಥಿ ಉಪನ್ಯಾಸಕಿ ಡಾ.ಸುಧಾರಾಣಿ ಮಣೂರ, ಪ್ರಾಧ್ಯಾಪಕರು, ವಿದ್ಯಾರ್ಥಿನಿಯರು ಹಾಗೂ ಮತ್ತಿತರು ಉಪಸ್ಥಿತರಿದ್ದರು. ಪ್ರೊ. ಎಂ.ಪಿ ಬಳಿಗಾರ ಪ್ರಾರ್ಥಿಸಿದರು. ನಾರಾಯಣ ಪವಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಜಯಕುಮಾರ್ ಹಿರೇಮಠ ವಂದಿಸಿದರು.