ಮಾರುತಿ ನಗರದಲ್ಲಿ ಜ್ಞಾನ ವಿಕಾಸ ಕೇಂದ್ರ ಕೌಶಲ್ಯ ತರಬೇತಿ
ರಾಣೇಬೆನ್ನೂರು 18: ಇಲ್ಲಿನ ಮಾರುತಿ ನಗರ ವಲಯದ ಬೆಳಕು ಜ್ಞಾನ ವಿಕಾಸ ಕೇಂದ್ರ ಯೋಜನೆಯಲ್ಲಿ ಮಹಿಳೆಯರಿಗಾಗಿ ಧಾರವಾಡ ಜ್ಞಾನ ವಿಕಾಸ ತರಬೇತಿ ಸಂಸ್ಥೆಯ ಕೌಶಲ್ಯಕಲೆಗಳ ತರಬೇತಿಗಾರರು ಆಯೋಜಿಸಿತ್ತು. 6 ದಿವಸಗಳ ಕಾಲ ನಡೆದ ಸೀರೆ ಗುಚ್ಛ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭವು, ಮಂಗಳವಾರ ನಡೆಯಿತು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಜಗದೀಶ ಆಲ್ಸ್ ಅವರು, ಮಹಿಳೆಯರ ಆರ್ಥಿಕ ಸಮಾನತೆಗೆ ಕರಕುಶಲ ಕಲೆಗಳ ತರಬೇತಿ ಅತ್ಯಂತ ಸಹಕಾರಿಯಾಗಿದೆ. ಕೌಶಲ್ಯ ಕಲೆಗಳು ಸ್ತ್ರೀಯರಿಗೆ ದೈವದತ್ತ ಕೊಡುಗೆ, ನಿತ್ಯದ ಬದುಕಿನಲ್ಲಿ ಅವುಗಳನ್ನು ಕೌಶಲ್ಯ ಪೂರ್ಣವಾಗಿ ಅಳವಡಿಸಿಕೊಂಡರೆ, ಕುಟುಂಬದ ನಿರ್ವಹಣೆಯ ಜೊತೆಗೆ ದೇಶದ ಆರ್ಥಿಕ ಸಮಾನತೆಗೆ ಪ್ರಮುಖ ಕಾರಣವಾಗುತ್ತದೆ ಎಂದರು. ತರಬೇತಿ ಪಡೆದ 35 ಮಹಿಳೆಯರಿಗೆ ಸಂಸ್ಥೆ ಕೂಡಮಾಡುವ ತರಬೇತಿ ಪ್ರಮಾಣ ಪತ್ರವನ್ನು ವಿತರಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶೋಭಾ,ಸೇವಾ ಪ್ರತಿನಿಧಿ ಭೂಮಿಕಾ, ತರಬೇತಿ ಶಿಕ್ಷಕಿ ಸುಮಾ ಮತ್ತು ಸದಸ್ಯರು ಹಾಗೂ ಯೋಜನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.