ಶಾಲಾ ಮಕ್ಕಳ ಆಧಾರ್ ಬಯೋಮೆಟ್ರಿಕ್ ಅಪ್ ಡೇಟ್ ಮಾಡಿಸಿ : ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ

ಕಾರವಾರ:  ಜಿಲ್ಲೆಯಲ್ಲಿನ 5 ವರ್ಷ ಮೇಲ್ಪಟ್ಟ ಮತ್ತು 15 ವರ್ಷ ಮೇಲ್ಪಟ್ಟ ಎಲ್ಲಾ ವಿದ್ಯಾರ್ಥಿಗಳ ಆಧಾರ್ ಕಾರ್ಡ್‌ಗಳಿಗೆ ಕಡ್ಡಾಯವಾಗಿ ಬಯೋಮೆಟ್ರಿಕ್ ಅಪ್ ಡೇಟ್ ಮಾಡಿಸುವ ಕುರಿತಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಂಡು, ಯಾವುದೇ ವಿದ್ಯಾರ್ಥಿ ಇದರಿಂದ ಹೊರಗುಳಿಯದಂತೆ ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಹೇಳಿದರು. 

ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಜಿಲ್ಲಾ ಮಟ್ಟದ ಆಧಾರ್ ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

5 ವರ್ಷ ಮೇಲ್ಪಟ್ಟ ಮತ್ತು 15 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ತಮ್ಮ ಆಧಾರ್ ಕಾರ್ಡ್‌ಗಳಿಗೆ ತಮ್ಮ ಬಯೋಮೆಟ್ರಿಕ್ ಅಪ್‌ಡೇಟ್ ಮಾಡಿಸುವುದು ಕಡ್ಡಾಯವಾಗಿರುವುದರಿಂದ ಜಿಲ್ಲೆಯ ಎಲ್ಲಾ ಶಾಲಾ ವಿದ್ಯಾರ್ಥಿಗಳ ಆಧಾರ್ ಕಾರ್ಡ್‌ಗಳಿಗೆ ಬಯೋಮೆಟ್ರಿಕ್ ಮಾಡಿಸುವ ಕುರಿತಂತೆ, ಎಲ್ಲಾ ತಾಲೂಕುಗಳಲ್ಲಿ ಬಯೋಮೆಟ್ರಿಕ್ ಮಾಡಸಿಲು ಬಾಕಿ ಇರುವ ವಿದ್ಯಾರ್ಥಿಗಳು ನಿಖರವಾದ ಸಂಖ್ಯೆಯನ್ನು ಸಂಗ್ರಹಿಸಿ ಆ ತಾಲೂಕಿನಲ್ಲಿ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಶಿಬಿರ ಆಯೋಜಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.  

ಶಾಲಾ ವಿದ್ಯಾರ್ಥಿಗಳ ಬಯೋಮೆಟ್ರಿಕ್ ಅಪ್‌ಡೇಟ್ ಆಗದೇ ಇದ್ದಲ್ಲಿ ಸರ್ಕಾರದಿಂದ ಅವರಿಗೆ ದೊರೆಯಬೇಕಾದ ಸೌಲಭ್ಯಗಳಿಗೆ ತೊಂದರೆಯಾಗುವುದರಿಂದ ಆದ್ಯತೆಯ ಮೇಲೆ ಇದನ್ನು ಪೂರ್ಣಗೊಳಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಶಾಲಾ ಮಕ್ಕಳ ಹೆಸರುಗಳಲ್ಲಿ ತಪ್ಪುಗಳಿದ್ದಲ್ಲಿ ಅದನ್ನು ಸರಿಪಡಿಸುವ ಕುರಿತಂತೆ ಡಿಡಿಪಿಐ ಅಥವಾ ಬಿ.ಇ.ಓ ಗಳು ತಮಗೆ ಈಗಾಗಲೇ ನೀಡಿರುವ ಅರ್ಜಿ ನಮೂನೆಯಲ್ಲಿ ಸರಿಯಾದ ಹೆಸರನ್ನು ಭರ್ತಿ ಮಾಡಿ, ದೃಢೀಕರಿಸಿ ಸಲ್ಲಿಸಿದ್ದಲ್ಲಿ ತಿದ್ದುಪಡಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು. 

ಜಿಲ್ಲೆಯ ಆಂಚೆ ಕಚೇರಿಗಳಲ್ಲಿ ತೆರೆಯಲಾಗಿರುವ ಆಧಾರ್ ತಿದ್ದುಪಡಿ ಕೇಂದ್ರ್ರಗಳಲ್ಲಿ ಸಾರ್ವಜನಿಕರಿಗೆ ಇನ್ನೂ ಉತ್ತಮ ರೀತಿಯಲ್ಲಿ ಸೇವೆ ಒದಗಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಯ ಹಲವು ಫಲಾನುಭವಿಗಳು ಆಧಾರ್ ಸಮಸ್ಯೆಯ ಕಾರಣ ಸರ್ಕಾರದ ಯೋಜನೆಯ ಪ್ರಯೋಜನ ಪಡೆಯದೇ ವಂಚಿತರಾಗುತ್ತಿದ್ದು, ಇವರ ಆಧಾರ್ ಸಂಬಂಧಿತ ಸಮಸ್ಯೆಗಳನ್ನು ಶೀಘ್ರದಲ್ಲಿ ಬಗೆಹರಿಸುವಂತೆ ಆಧಾರ್ ನೋಂದಣಿಯ ಜಿಲ್ಲಾ ನೋಡಲ್ ಅಧಿಕಾರಿಗೆ ತಿಳಿಸಿದರು. 

ಜಿಲ್ಲೆಯಲ್ಲಿ ಒಟ್ಟು 16,43,471 ಆಧಾರ್ ಸಂಖ್ಯೆ ಜನರೇಟ್ ಆಗಿದ್ದು, ಇದರಲ್ಲಿ 5 ವರ್ಷದೊಳಗಿನವರು 49,985 ಮತ್ತು 5 ವರ್ಷ ಮೇಲ್ಪಟ್ಟ ಮತ್ತು 18 ವರ್ಷದೊಳಗಿನ 2,82,909 ಮತ್ತು 18 ವರ್ಷ ಮೇಲ್ಪಟ್ಟ 13,10,577 ಜನರಿದ್ದಾರೆ.  5 ವರ್ಷ ಮೇಲ್ಪಟ್ಟ 57,065 ಮತ್ತು 15 ವರ್ಷ ಮೇಲ್ಪಟ್ಟ 53,540 ಸೇರಿದಂತೆ ಒಟ್ಟು 1,10,605 ಆಧಾರ್ ಕಾರ್ಡ್‌ಗಳಿಗೆ ಬಯೋಮೆಟ್ರಿಕ್ ಮಾಡಿಸುವುದು ಇದುವರೆಗೆ ಬಾಕಿ ಇದೆ ಎಂದರು. 

ಜಿಲ್ಲೆಯಲ್ಲಿ ಜನರೇಟ್ ಆಗಿರುವ ಆಧಾರ್ ಕಾರ್ಡ್‌ಗಳಲ್ಲಿ 15,38,406 ಕಾರ್ಡ್‌ ಗಳಿಗೆ ಮೊಬೈಲ್ ಸೀಡ್ ಆಗಿದ್ದು, 1,05,065 ಬಾಕಿ ಇದೆ. ಸ್ಯಾಟ್ಸ್‌ ತಂತ್ರಾಂಶದ ಮೂಲಕ ಜಿಲ್ಲೆಯಲ್ಲಿರುವ 1,01,230 ವಿದ್ಯಾರ್ಥಿಗಳ ಆಧಾರ್ ಕಾರ್ಡ್‌ಗಳಲ್ಲಿ, 91,303 ವಿದ್ಯಾರ್ಥಿಗಳ ಆಧಾರ್ ಪರೀಶೀಲನೆ ಆಗಿದ್ದು, 88,147 ವಿದ್ಯಾರ್ಥಿಗಳ ಆಧಾರ್ ಯಶಸ್ವಿಯಾಗಿದ್ದು, 77,453 ವಿದ್ಯಾರ್ಥಿಗಳ ಹೆಸರು ಶೇ.100 ರಷ್ಟು ತಾಳೆಯಾಗಿದ್ದು, 13,083 ವಿದ್ಯಾರ್ಥಿಗಳ ಪರೀಶೀಲನೆ ಬಾಕಿ ಇದ್ದು, ಶೇ 87 ರಷ್ಟು ಪ್ರಗತಿಯಾಗಿದೆ ಎಂದರು. 

ಜಿಲ್ಲೆಯಲ್ಲಿನ ವಿಕಲಚೇತನರು ಮತ್ತು ಹಾಸಿಗೆ ಪೀಡಿತರಿಗೆ ಅವರ ಮನೆಗಳಿಗೆ ತೆರಳಿ ಆಧಾರ್ ಸಂಬಂಧಿತ ಸಮಸ್ಯೆಗಳನ್ನು ಬಗೆರಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಇದಕ್ಕಾಗಿ ಜಿಲ್ಲೆಯ ಎಲ್ಲಾ ವಿಭಾಗಾಧಿಕಾರಿಗಳ ವ್ಯಾಪ್ತಿಗೆ ಪ್ರತ್ಯೇಕ ಕಿಟ್‌ಗಳನ್ನು ಸರಬರಾಜು ಮಾಡುವಂತೆ ಸೂಚಿಸಿದರು. 

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ಯು.ಐ.ಡಿ ಎ. ಐ ನ ಸೆಂಟ್ರಲ್ ಮ್ಯಾನೇಜರ್ ಮೆಹಬೂಬು, ಡಿಡಿಪಿಐ ಲತಾ ನಾಯಕ ಮತ್ತಿತರರು ಉಪಸ್ಥಿತರಿದ್ದರು.