ಲೋಕದರ್ಶನ ವರದಿ
ಶಿಕ್ಷಣದಿಂದ ಮಾತ್ರ ದೇವದಾಸಿ ಪದ್ಧತಿ ನಿರ್ಮೂಲನೆ ಸಾಧ್ಯ - ನ್ಯಾ.ಮಹಾಂತೇಶ ದರಗದ್
ಕೊಪ್ಪಳ 17: ದೇವದಾಸಿ ಪದ್ಧತಿ ಸಂಪೂರ್ಣವಾಗಿ ನಿರ್ಮೂಲನೆಯಾಗಬೇಕೆಂದರೆ ಶಿಕ್ಷಣ ಅತ್ಯಗತ್ಯ. ನಿಮಗೆ ಸಾಧ್ಯವಾದರೆ ಮಕ್ಕಳನ್ನು ಓದಿಸಿ ಇಲ್ಲದಿದ್ದರೇ ಸರ್ಕಾರ ನಡೆಸುವ ವಸತಿ ಶಾಲೆಗಳಿಗೆ ಸೇರಿಸಿಯಾದರು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣವನ್ನು ಕೊಡಿಸಿ. ಅಂದಾಗ ಮಾತ್ರ ಈ ಸಮಾಜಕ್ಕೆ ಅಂಟಿಕೊಂಡಿರುವ ಅನಿಷ್ಠ ಪದ್ಧತಿಯನ್ನು ಹೋಗಲಾಡಿಸಲು ಸಾಧ್ಯವಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ಸಂಗಪ್ಪ ದರಗದ್ ಹೇಳಿದರು.
ಅವರು ಶನಿವಾರ ಕೊಪ್ಪಳ ತಾಲೂಕಿನ ಶಿವಪೂರ ಗ್ರಾಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕೊಪ್ಪಳ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಪ್ಪಳ. ದೇವದಾಸಿ ಪುನರ್ವಸತಿ ಯೋಜನೆ, ಕೊಪ್ಪಳ ಹಾಗೂ ಗ್ರಾಮ ಪಂಚಾಯತಿ ಶಿವಪೂರ ಇವರ ಸಂಯುಕ್ತ ಆಶ್ರಯದಲ್ಲಿ ಮಾಜಿ ದೇವದಾಸಿ ಮಹಿಳೆಯರಿಗೆ ಏರಿ್ಡಸಿದ್ದ ಕಾನೂನು ಅರಿವು ನೇರವು ಕಾರ್ಯಕ್ರಮ ಉದ್ಧಾಟಿಸಿ ಮಾತನಾಡಿದರು.
ದೇವದಾಸಿ ಮಹಿಳೆಯರು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಿದ್ದರೇ ಆದರೆ ಸರ್ಕಾರದಿಂದ ಸೌಲಭ್ಯ ಕೊಡುವಂತೆ ಬೇರೆಯವರನ್ನು ಕೇಳುವ ಅಗತ್ಯವಿರುವುದಿಲ್ಲ. ನಿಮ್ಮ ಮಕ್ಕಳು ಶಿಕ್ಷಣವನ್ನು ಪಡೆದುಕೊಂಡು ಸುಂದರ ಬದುಕನ್ನು ಕಟ್ಟಿಕೊಳ್ಳುತ್ತಾರೆ. ನೀವು ಯಾರಿಗೂ ತಲೆಬಾಗದಂತೆ ನಿಮ್ಮ ಮಕ್ಕಳು ನಿಮ್ಮನ್ನು ನೋಡಿಕೊಳ್ಳುತ್ತಾರೆ ಎಂದು ನೆರದಿದ್ದ ಮಹಿಳೆಯರಿಗೆ ಕಿವಿ ಮಾತು ಹೇಳಿದರು.
ಉಪನ್ಯಾಸಕರಾಗಿ ವಕೀಲರಾದ ರವಿಚಂದ್ರ ಆರ್. ಮಾಟಲದಿನ್ನಿ ಅವರು ಉಪನ್ಯಾಸ ನೀಡಿ, ದೇವದಾಸಿ ಬಿಡುವ ಪದ್ಧತಿ ನಿಷೇಧ ಮಾಡಿ 43 ವರ್ಷವಾದರು ನಾವು ಇನ್ನು ದೇವದಾಸಿ ಪದ್ಧತಿ ಬಗ್ಗೆ ಮಾತನಾಡುತ್ತಿದ್ದೇವೆ. ಇಂತಹ ಅನಿಷ್ಠ ಪದ್ಧತಿಗೆ ಹೆಣ್ಣು ಮಕ್ಕಳನ್ನು ದೂಡಿದಲ್ಲಿ 2 ರಿಂದ 5 ವರ್ಷ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಈ ಪದ್ಧತಿಯನ್ನು ನಾವು ಬೇರು ಸಮೇತ ಕಿತ್ತೋಗೆಯಬೇಕು ಎಂದು ಹೇಳಿದರು.
ವಕೀಲರಾದ ಕೆ.ಎಮ್.ಶಿವಪೂರ ಅವರು ಮಾತನಾಡಿ, ಸರ್ಕಾರದಿಂದ ಮಾಜಿ ದೇವದಾಸಿ ಮಹಿಳೆಯರಿಗೆ ಇರುವ ಸೌಲಭ್ಯಗಳು ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕೆಂದು ಹೇಳಿದರು.
ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ವೆಂಕಟೇಶ.ಎನ್. ಚನ್ನದಾಸರ್ ಅವರು ಸ್ಥಳಿಯ ಸಮಸ್ಯೆಗಳ ಕುರಿತು ಮಾತನಾಡಿದರು. ಹಾಗೂ ಶಿವಪೂರ ಗ್ರಾಮದಲ್ಲಿ ಸರ್ಕಾರದ ಜಮೀನನ್ನು ದೇವದಾಸಿ ಮಹಿಳೆಯರಿಗೆ ಒದಗಿಸುವಂತೆ ಕ್ರಮ ಕೈಗೊಳ್ಳಲು ಮನವಿ ಮಾಡಿಕೊಂಡರು.
ಮತ್ತೋರ್ವ ವಕೀಲರಾದ ಕೆ.ಎಸ್. ಮೈಲಾರ್ಪ ಅವರು ಬಾಲ್ಯ ವಿವಾಹ ಮತ್ತು ಪೋಕ್ಸೊ ಕಾಯ್ದೆ ಬಗ್ಗೆ ಉಪನ್ಯಾಸ ನೀಡಿದರು. ವಕೀಲರಾದ ಸಂತೋಷ ಬಾದರ ಬಂಡಿ ಅವರು ಸೈಬರ್ ಅಪರಾದದ ಮುಂಜಾಗೃತೆಯ ಬಗ್ಗೆ ವಿವರಿಸಿದರು. ವಕೀಲರಾದ ಜಿ.ಎಮ್. ಶಿವಪೂರ ಅವರು ದೇವದಾಸಿ ಪದ್ದತಿ ನಿರ್ಮೂಲನೆಯಾಗಬೇಕೆಂದರು.
ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿವಶರಣಪ್ಪ ಗದ್ದಿ ಅವರು ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ದೇವದಾಸಿ ಪುನರ್ವಸತಿ ಯೋಜನಾಧಿಕಾರಿ ಪೂರ್ಣಿಮಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ದೇವದಾಸಿ ಮಹಿಳೆಯರಿಗೆ ಇರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಸಖಿ ಒನ್ ಸ್ಟಾಪ್ ಸೆಂಟರಿನ ಆಡಳಿತಾಧಿಕಾರಿ ಯಮುನಾ ಬೆಸ್ತ ಅವರು ನೊಂದ ಮಹಿಳೆಯರಿಗೆ ನ್ಯಾಯ ಕೊಡಿಸುವಲ್ಲಿ ಇಲಾಖೆ ಸತತ ಪ್ರಯತ್ನ ಮಾಡುತ್ತಿದೆ ಎಂದು ಹೇಳುತ್ತಾ ಪೋಸ್ಟರ್ ಬಿಡುಗಡೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಚಲಸಾನಿ ರವಿಕುಮಾರ ಮತ್ತು ಸಿ.ಬಿ.ಆರ್. ಪ್ರಸಾದ ಅವರು ವಹಿಸಿದ್ದರು.
ಇದೇ ಸಂದರ್ಭದಲ್ಲಿ ಪಿ.ಡಿ.ಓ ವಾಗೇಶ. ಗ್ರಾಮ ಪಂಚಾಯತಿ ಸದಸ್ಯರಾದ ಹುಲಿಗೆಮ್ಮ, ಯಮನೂರ್ಪ ಇತರೆ ಸದಸ್ಯರು ಮತ್ತು ಮಿಷನ್ ಶಕ್ತಿಯ ಫಾತೀಮಾ, ಪಿ.ಐ.ಓ. ರೇಣುಕಾ ಉಪಸ್ಥಿತರಿದರು. ಸಕ್ಕೂಬಾಯಿ ಅವರು ಪ್ರಾರ್ಥಿಸಿದರು, ದಾದೇಸಾಬ ಹಿರೇಮನಿ ಅವರು ಸ್ವಾಗತಿಸಿದರು.