ಬೀದರ್, 28; : ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನವು ರಾಜ್ಯಾದ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದು, ಬೀದರ್ ಜಿಲ್ಲೆಯ ಮುಖಂಡರು, ಕಾರ್ಯಕರ್ತರು ಕೂಡ ಸದಸ್ಯತ್ವ ನೋಂದಣಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಕರೆ ನೀಡಿದರು.
ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ, ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ, ಸ್ಥಳೀಯ ಸಂಸ್ಥೆಗಳ ಚುನಾವಣೆ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಜಿಲ್ಲೆಯ ಪಕ್ಷದ ಪ್ರಮುಖರೊಂದಿಗೆ ಬೀದರ್ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಶುಕ್ರವಾರ ಸಭೆ ನಡೆಸಿ ಮಾತನಾಡಿದ ಅವರು, ಪಕ್ಷದ ಮುಖಂಡರು, ಕಾರ್ಯಕರ್ತರೆಲ್ಲರೂ ಸೇರಿ ಪಕ್ಷ ಸಂಘಟನೆಗೆ ಶ್ರಮಿಸಬೇಕು ಎಂದರು.
ನಾವು ಪ್ರತಿ ವಿಧಾನಸಭಾ ಕ್ಷೇತ್ರದ ಪ್ರತಿ ಹಳ್ಳಿಗಳಿಗೆ ತೆರಳಿ ಸದಸ್ಯತ್ವ ನೋಂದಣಿ ಮಾಡಿಸುವ ಕೆಲಸ ಮಾಡಬೇಕಾಗಿದೆ. ಹಳ್ಳಿಗಳಲ್ಲಿ ನಮ್ಮ ಜೆಡಿಎಸ್ ಪಕ್ಷಕ್ಕೆ ಹೆಚ್ಚಿನ ಮಹತ್ವವಿದೆ. ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಚುನಾವಣೆಗಳು ಶೀಘ್ರವಾಗಿ ಬರಲಿವೆ. ಆ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ.
ಸದಸ್ಯತ್ವ ನೋಂದಣಿ ವಿಷಯದಲ್ಲಿ ಬೀದರ್ ಜಿಲ್ಲೆಯ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಯಾವಾಗಲೂ ಮುಂದೆ ಇದ್ದಾರೆ. ಈ ಹಿಂದೆ ರಾಜ್ಯದಲ್ಲಿಯೇ ಹೆಚ್ಚಿನ ಸದಸ್ಯತ್ವ ನೋಂದಣಿ ಬೀದರ್ ಜಿಲ್ಲೆಯಿಂದ ಆಗಿತ್ತು. ಅದನ್ನು ಮರುಕಳಿಸುವ ಕೆಲಸವನ್ನು ಈ ಬಾರಿ ಕೂಡ ಎಲ್ಲರೂ ಸೇರಿ ಮಾಡಬೇಕು ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು ತಿಳಿಸಿದರು.
ಈ ವೇಳೆ ಸದಸ್ಯತ್ವ ನೋಂದಣಿ ಪುಸ್ತಕ ಬಿಡುಗಡೆ ಮಾಡಲಾಯಿತು ಹಾಗೂ ಪಕ್ಷದ ತಾಲೂಕು ಚುನಾವಣೆ ಅಧಿಕಾರಿಗಳು ಹಾಗೂ ತಾಲೂಕು ಸಹಾಯಕ ಚುನಾವಣೆ ಅಧಿಕಾರಿಗಳಾಗಿ ನೇಮಕಗೊಂಡ ಅನೇಕರಿಗೆ ಆದೇಶ ಪತ್ರ ನೀಡಲಾಯಿತು.
ಸಭೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ್ ಪಾಟೀಲ್ ಸೋಲ್ಪೂರ್, ಪ್ರಮುಖರಾದ ಅಶೋಕ್ ಕೊಡ್ಗೆ, ಐಲಿಂಜಾನ್ ಮಠಪತಿ, ಸಿದ್ರಾಮಪ್ಪ ವಂಕ್ಕೆ, ರಾಜಶೇಖರ ಜವಳೆ, ಸುರೇಶ್ ಸಿಗಿ, ಶಿವಪುತ್ರ ಮಾಳ್ಗೆ, ಶಬ್ಬೀರ್ ಪಾಷ, ಆಕಾಶ್ ಖಂಡಾಳೆ, ಬಸವರಾಜ ಪಾಟೀಲ್ ಹಾರೋಗೇರಿ, ಮಲ್ಲಿಕಾರ್ಜುನ ನೆಳ್ಗೆ, ಗೌತಮ್ ಸಾಗರ್, ಲಲಿತಾ ಕರಂಜೆ, ಬೊಮ್ಮಗೊಂಡ ಚಿಟ್ಟಾವಾಡಿ, ಜಾಪೇಡ್ ಕಡ್ಯಾಳ, ಅಭಿ ಕಾಳೆ, ಸಂಗಮ್ಮ ಪಾಟೀಲ್, ಬಸವರಾಜ ಶಾಹಪೂರೆ, ರವಿ ಸಿರ್ಸಿ ಸೇರಿದಂತೆ ಜೆಡಿಎಸ್ ಪಕ್ಷದ ರಾಜ್ಯ, ಜಿಲ್ಲೆ, ತಾಲೂಕು ಘಟಕಗಳ ಪ್ರಮುಖರು, ಮುಖಂಡರು ಇದ್ದರು.