ನಗರದ ವಿವಿಧ ಪ್ರದೇಶದ ರಸ್ತೆ -ಮನೆಗಳಿಗೆ ನುಗ್ಗಿದ ನೀರು ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದ ಜಿಲ್ಲಾಧಿಕಾರಿ ಟಿ.ಭೂಬಾಲನ್

ವಿಜಯಪುರ, 24:  ನಗರದಲ್ಲಿ ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದ ವಿವಿಧ ಪ್ರದೇಶದ ರಸ್ತೆ -ಮನೆಗಳಿಗೆ ನೀರು ನುಗ್ಗಿದ ವಿವಿಧ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಭೇಟಿ ನೀಡಿ ಪರೀಶೀಲಿಸಿ, ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು ಪ್ರಥಮಾಧ್ಯತೆಯ ಮೇರೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮಹಾನಗರ ಪಾಲಿಕೆಯ ಅಧಿಕಾರಿ ಸೂಚಿಸಿದರು. 

ಪಾಲಿಕೆಯ 3 ವಲಯಗಳ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಗೊಳಗಾದ ಮನೆ ಅಂಗಡಿ ಪ್ರದೇಶಗಳ ಕುರಿತು ಮಾಹಿತಿ ಪಡೆದುಕೊಂಡು ಸಮರೋಪಾದಿಯಲ್ಲಿ ಪಾಲಿಕೆಯ ಅಧಿಕಾರಿ, ಸಿಬ್ಬಂದಿಗಳ ತಂಡ ರಚಿಸಿಕೊಂಡು ತುರ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಸೂಚಿಸಿದರು. 

ನಗರದ ವಾರ್ಡ್‌ ನಂ 6, 10, 11, 13, 14, 20, 24, 26, 33 ಹಾಗೂ 33ರ ಹಾಗೂ ಬಾಗವಾನ ಕಾಲೋನಿ, ಪ್ರೈಮ್ ನಗರ, ಕೆ.ಸಿ.ನಗರ, ಆಲಕುಂಟೆ ನಗರ, ಗಚ್ಚಿನಕಟ್ಟಿ ಕಾಲೋನಿಯ ಪ್ರದೇಶದ ಜನವಸತಿ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡ ಬಗ್ಗೆ ಮಾಹಿತಿ ದೊರೆತ ತಕ್ಷಣ ಜಿಲ್ಲಾಧಿಕಾರಿಗಳು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದರು. 

ಪಾಲಿಕೆಯ ವ್ಯಾಪ್ತಿಯಲ್ಲಿರುವ ರಸ್ತೆ, ಕೋಟೆ ಗೋಡೆ ಕಂದಕದಲ್ಲಿ ಸಂಗ್ರಹಣೆಯಾದ ಹೂಳು, ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮವಹಿಸಿ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿ, ಸಿಬ್ಬಂದಿಗಳು ಕಾರ್ಯೋನ್ಮುಖರಾಗುವಂತೆ ಜಿಲ್ಲಾಧಿಕಾರಿಗಳು ಸೂಚನೆ ಮೇರೆಗೆ ರಾತ್ರಿಯಿಂದಲೇ ಮಹಾನಗರ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿಗಳು ಕಾರ್ಯಪ್ರವೃತ್ತರಾಗಿ ತುರ್ತು ಕ್ರಮಗಳನ್ನು ಕೈಗೊಂಡು ಯಂತ್ರೋಪಕರಣಗಳ ಸಹಾಯದಿಂದ ನೀರನ್ನು ಹೊರತೆಗೆಯುವ ಕಾರ್ಯ ಕೈಗೊಳ್ಳಲಾಯಿತು. 

ಸಾರ್ವಜನಿಕರ ದೂರು ಹಾಗೂ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ, ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಅಗತ್ಯ ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಮಹಾನಗರ ಪಾಲಿಕೆ ಆಯುಕ್ತರಾದ ವಿಜಯಕುಮಾರ ಮೆಕ್ಕಳಕಿ ತಿಳಿದ್ದಾರೆ. 

ಮಹಾನಗರ ಪಾಲಿಕೆ ಮೇಯರ ಮಹೇಜಬಿನ್ ಹೊರ್ತಿ, ಉಪ ಮೇಯರ್ ದಿನೇಶ್ ಹಳ್ಳಿ, ವಿವಿಧ ವಾರ್ಡ್ಗಳ ಸದಸ್ಯರು ಸೇರಿದಂತೆ ಮಹಾನಗರ ಪಾಲಿಕೆ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.