ನಿಯಂತ್ರಣ ಕ್ರಮ ಮುಂದುವರಿಸಿ ಕೃಷಿ, ಕೈಗಾರಿಕೆ ಚಟುವಟಿಕೆ ಪ್ರಾರಂಭ: ಬಸವರಾಜ ಬೊಮ್ಮಾಯಿ

ಹಾವೇರಿ, ಏ.28, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಕಾರ್ಮಿಕರ ಕೋವಿಡ್  ಸುರಕ್ಷತಾ ಕ್ರಮ ಅಳವಡಿಸಿಕೊಂಡು ಜಿಲ್ಲೆಯ  ಕೃಷಿ ವಲಯ ಹಾಗೂ ಕೈಗಾರಿಕಾ  ಚಟುವಟಿಕೆಗಳನ್ನು ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಹಾವೇರಿ  ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ  ನೀಡಿದ್ದಾರೆ. ಸೋಮವಾರ ಸಂಜೆ ರಾಜ್ಯದ ಜಿಲ್ಲಾಧಿಕಾರಿಗಳೊಂದಿಗೆ  ಕೋವಿಡ್ ನಿಯಂತ್ರಣ ಹಾಗೂ ಲಾಕ್‍ಡೌನ್ ಸಡಿಲಿಕೆ ಕುರಿತಂತೆ ಮುಖ್ಯಮಂತ್ರಿಗಳು  ನಡೆಸಿದ ವಿಡಿಯೋ ಸಂವಾದಲ್ಲಿ ಮುಖ್ಯಮಂತ್ರಿಗಳು ಜಿಲ್ಲೆಯ ಕೋವಿಡ್ ನಿಯಂತ್ರಣ ಕ್ರಮಗಳು  ಹಾಗೂ ಆರ್ಥಿಕ ಚಟುವಟಿಕೆಗಳ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ  ಮುಖ್ಯಮಂತ್ರಿಗಳೊಂದಿಗೆ ಬೆಂಗಳೂರಿನಲ್ಲಿ ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದ ಗೃಹ  ಸಚಿವರು ಹಾವೇರಿ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ, ಕೋವಿಡ್ ನಿಯಂತ್ರಣ ಕ್ರಮಗಳ ಜೊತೆ  ಜೊತೆಗೆ ಆರ್ಥಿಕ ಚಟುವಟಿಕೆಗಳಿಗೆ ಸುರಕ್ಷಾ ಮಾನದಂಡ ಅಳವಡಿಸಿಕೊಂಡು ಸರ್ಕಾರದ  ಮಾರ್ಗಸೂಚಿಯಂತೆ ಜಿಲ್ಲೆಯಲ್ಲಿರುವ ಕಾರ್ಖಾನೆಗಳನ್ನು ಆರಂಭಿಸಲು ಅನುಮತಿ ನೀಡುವಂತೆ  ಸಲಹೆ ನೀಡಿದರು. ಕಟ್ಟುನಿಟ್ಟಿನ ಕೋವಿಡ್ ನಿಯಂತ್ರಣ  ಕ್ರಮದಿಂದಾಗಿ ಹಾವೇರಿ ಜಿಲ್ಲೆ ಗ್ರೀನ್ ವಲಯದಲ್ಲಿದೆ. ಮುಂದಿನ ದಿನಗಳಲ್ಲೂ ಹಸಿರು  ವಲಯದಲ್ಲೇ ಹಾವೇರಿ ಮುಂದುವರೆಯಬೇಕು. ಈ ನಿಟ್ಟಿನಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳನ್ನು  ಮುಂದುವರಿಸಿ ಇದರೊಂದಿಗೆ ಕೃಷಿ, ಕೈಗಾರಿಕಾ ಚಟುವಟಿಕೆಗಳು ಆರಂಭಗೊಳ್ಳಬೇಕು. ಇವುಗಳಿಗೆ  ಉತ್ತೇಜನ ನೀಡಿ ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ  ಕೃಷ್ಣ ಭಾಜಪೇಯಿ ಅವರು ಮಾಹಿತಿ ನೀಡಿ ಹಾವೇರಿ ಜಿಲ್ಲೆಯಲ್ಲಿ ಈವರೆಗೆ ಯಾವುದೇ ಕರೋನಾ   ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿರುವುದಿಲ್ಲ. ನಿಯಂತ್ರಣಕ್ಕೆ ಎಲ್ಲ ಮುನ್ನೆಚ್ಚರಿಕೆ  ಕ್ರಮಗಳನ್ನು ಕೈಗೊಳ್ಳಲಾಗಿದೆ. ಒಂದೊಮ್ಮೆ ಪ್ರಕರಣಗಳು ಪತ್ತೆಯಾದಲ್ಲಿ ಸೂಕ್ತ ಹಾಗೂ  ಸಕಾಲದಲ್ಲಿ ಚಿಕಿತ್ಸೆ ನೀಡಲು ಐಸೋಲೇಷನ್ ವಾರ್ಡ್, ಕೋವಿಡ್ ವಾರ್ಡ್‍ಗಳನ್ನು  ಸಿದ್ಧಮಾಡಿಕೊಳ್ಳಲಾಗಿದೆ ಎಂದರು.
ಪಾಸಿಟಿವ್ ಪ್ರಕರಣಗಳು ಇಲ್ಲದಿದ್ದರೂ ಸರ್ಕಾರದ  ಮಾರ್ಗಸೂಚಿಯಂತೆ ತುರ್ತು ಹೆಲ್ತ್ ಸಮೀಕ್ಷೆ ಕೈಗೊಂಡು 60 ವರ್ಷ ಮೇಲ್ಪಟ್ಟವರ ಮಾಹಿತಿ,  ಬಿಪಿ, ಶುಗರ್, ತೀವ್ರ ಉಸಿರಾಟದ ತೊಂದರೆ, ಕೆಮ್ಮು, ಜ್ವರ, ಗಂಟಲು ನೋವು ಇತರ ಸೋಂಕುಗಳ  ಕುರಿತಂತೆ ಮಾಹಿತಿ ಕಲೆಹಾಕುವ ಕಾರ್ಯ ನಡೆದಿದೆ. ಇದರೊಂದಿಗೆ ಜಿಲ್ಲೆಯ 17 ಲಕ್ಷ ಜನರ  ಆರೋಗ್ಯ ತಪಾಸಣೆ ಕಾರ್ಯ ಆರಂಭಿಸಿ ಈಗಾಗಲೇ 13 ಲಕ್ಷ ಜನರ ಆರೋಗ್ಯ ಮಾಹಿತಿ  ಕಲೆಹಾಕಿದೆ .  ಸರ್ಕಾರದ ಮಾರ್ಗಸೂಚಿಯಂತೆ ಕೃಷಿ ಚಟುವಟಿಕೆಗಳು ನಡೆಯುತ್ತಿವೆ.  ಕೈಗಾರಿಕಾ  ಚಟುವಟಿಕೆಗಳು ಆರಂಭಿಸಲು ಸೂಚನೆ ನೀಡಲಾಗಿದೆ. ರಸ್ತೆ, ಕಟ್ಟಡ ಕಾಮಗಾರಿಗಳು ಆರಂಭಿಸಲು  ಸಹ ಸೂಚನೆ ನೀಡಲಾಗಿದೆ. ಕಟ್ಟಡ ಚಟುವಟಿಕೆಗೆ ಬೇಕಾದ ಎಲ್ಲ ಅಂಗಡಿಗಳನ್ನು ಸ್ವಯಂ ಕೋವಿಡ್  ಮಾರ್ಗ ಸೂಚಿಗಳನ್ನು ಅನುಸರಿಸಿ ತೆರೆಯಲು ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಯಾವುದೇ  ದೊಡ್ಡ ಕೈಗಾರಿಕೆಗಳು ಇರುವುದಿಲ್ಲ. ಆದಾಗ್ಯೂ ಎಲ್ಲ ಕೈಗಾರಿಕೆಗಳ ಆರಂಭಿಸಲು ಸೂಚನೆ  ನೀಡಲಾಗಿದೆ. ಬಟ್ಟೆ ಅಂಗಡಿ, ಸೆಲ್ಯೂನ್, ಬಂಗಾರದ ಅಂಗಡಿ ಹಾಗೂ ಆಟೋಗಳ ಓಡಾಟಕ್ಕೆ ಅವಕಾಶ  ನೀಡಿಲ್ಲ ಎಂದು ವಿವರಿಸಿದರು.
ಜಿಲ್ಲಾ ಪೊಲೀಸ್  ವರಿಷ್ಠಾಧಿಕಾರಿ ಕೆ.ಜಿ.ದೇವರಾಜ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ  ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಯೋಗೇಶ್ವರ,  ಹೆಚ್ಚುವರಿ ಜಿಲ್ಲಾ ಪೊಲೀಸ್  ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಉಪ ವಿಭಾಗಾಧಿಕಾರಿಗಳಾದ ಡಾ.ದಿಲೀಷ್ ಶಶಿ,  ಶ್ರೀಮತಿ ಅನ್ನಪೂರ್ಣ ಮುದಕಮ್ಮನವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ  ಡಾ.ರಾಜೇಂದ್ರ ದೊಡ್ಮನಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ನಾಗರಾಜ ನಾಯಕ್, ಕೃಷಿ ಇಲಾಖೆ  ಜಂಟಿ ನಿರ್ದೇಶಕ ಮಂಜುನಾಥ್, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕ  ವಿನೋದಕುಮಾರ ಹೆಗ್ಗಳಗಿ ಇತರರು ಉಪಸ್ಥಿತರಿದ್ದರು.