ವಿಜಯಪುರ 29. ಕೃಷ್ಣಾ ಮೇಲ್ದಂಡೆ ಮುಳವಾಡ ಏತನೀರಾವರಿ ಯೋಜನೆ ಹಂತ-3 ರಲ್ಲಿ ಬರುವ ಬಬಲೇಶ್ವರ ಶಾಖಾ ಕಾಲುವೆಯ 5ಎ, 5ಬಿ ಲಿಫ್ಟ್ ಕಾಮಗಾರಿಗಳಿಗೆ ರೂ.127 ಕೋಟಿ ಮತ್ತು ವಿತರಣಾ ಸಂಖ್ಯೆ 15 ಹಾಗೂ ಲ್ಯಾಟರಲ್ ಕಾಲುವೆಗಳಿಗೆ ರೂ.108 ಕೋಟಿ ಮೊತ್ತದ ಕಾಮಗಾರಿಗಳಿಗೆ ಒಟ್ಟು ರೂ.235 ಕೋಟಿ ವೆಚ್ಚದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶ್ರೀಘ್ರದಲ್ಲಿಯೇ ರೈತ ಸಮಾವೇಶ ನಡೆಸಿ ಈ ಮೂರು ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಬಬಲೇಶ್ವರ ಶಾಖಾ ಕಾಲುವೆ ಕಿ.ಮೀ 40 ರಲ್ಲಿ 5ಎ ಲಿಫ್ಟ್ ಮುಖಾಂತರ 11,300 ಎಕರೆ ಮತ್ತು ಕಿ.ಮೀ 18 ರಲ್ಲಿ 5ಬಿ ಲಿಫ್ಟ್ ಮುಖಾಂತರ 1,355 ಎಕರೆ ಪ್ರದೇಶಕ್ಕೆ ನೀರೋದಗಿಸುವ ಕಾಮಗಾರಿಗೆ ರೂ.127 ಕೋಟಿ ಹಾಗೂ ವಿತರಣಾ ಸಂಖ್ಯೆ 15 ಮತ್ತು ಲ್ಯಾಟರಲ್ ಒಳಗೊಂಡ 13272 ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ಪ್ಯಾಕೇಜ್ ಕಾಮಗಾರಿ ಕೈಗೆತ್ತಿಕೊಳ್ಳಲು ರೂ.108 ಕೋಟಿ ವೆಚ್ಚದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಶ್ರೀಘ್ರದಲ್ಲಿಯೇ ರೈತ ಸಮಾವೇಶ ನಡೆಸಿ ಈ ಮೂರು ಕಾಮಗಾರಿಗಳನ್ನು ಚಾಲನೆ ನೀಡಲಾಗುವುದು. ಈ ಕಾಮಗಾರಿಗಳಿಂದ ಬಬಲೇಶ್ವರ ತಾಲೂಕಿನ ಬಾಕಿ ಉಳಿದಿರುವ ಒಟ್ಟು 26 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಿದಂತಾಗುತ್ತದೆ.
ಮುಳವಾಡ ಏತನೀರಾವರಿ ಯೋಜನೆ ಹಂತ-3 ರ ಮೂಲಕ ಬಬಲೇಶ್ವರ ಹಾಗೂ ಸುತ್ತಲಿನ ಪ್ರದೇಶಕ್ಕೆ ಮಲಘಾಣ ಪಶ್ಚಿಮ ಕಾಲುವೆ ಹಾಗೂ ಬಬಲೇಶ್ವರ ಶಾಖಾ ಕಾಲುವೆಗಳ ಮೂಲಕ ಈಗಾಗಲೇ ನೀರಾವರಿ ಸೌಕರ್ಯ ಕಲ್ಪಿಸಲಾಗಿದೆ. ನಿಡೋಣಿ, ನಾಗರಾಳ, ತಿಗಣಿಬಿದರಿ ಸುತ್ತಲಿನ ಎತ್ತರದ ಪ್ರದೇಶ ಹಾಗೂ ಕಾಖಂಡಕಿ, ಶೇಗುಣಶಿ, ಸಂಗಾಪುರ ಗ್ರಾಮದ ಎತ್ತರದ ಸ್ವಲ್ಪ ಪ್ರದೇಶಗಳು ಈ ಕಾಲುವೆ ನೀರಾವರಿ ಸೌಕರ್ಯದಿಂದ ವಂಚಿತವಾಗಿದ್ದವು. ಇವುಗಳಿಗೂ ನೀರಾವರಿ ಸೌಕರ್ಯ ಕಲ್ಪಿಸುವ 5ಎ ಲಿಫ್ಟ್ ನಿಂದ ನಿಡೋಣಿ ಸುತ್ತಲಿನ 11,300 ಎಕರೆ ಪ್ರದೇಶಕ್ಕೆ ಹಾಗೂ 5ಬಿ ಲಿಫ್ಟ್ ಮೂಲಕ ಶೇಗುಣಶಿ ಸುತ್ತಲಿನ 1,355 ಎಕರೆ ಪ್ರದೇಶಕ್ಕೆ ನೀರಾವರಿ ಸೌಕರ್ಯ ಕಲ್ಪಿಸಲಾಗುವುದು. ಮುಳವಾಡದ ಹತ್ತಿರ 4ಎ ಲಿಫ್ಟ್ ನಿಂದ ಆರಂಭವಾಗುವ ಬಬಲೇಶ್ವರ ಶಾಖಾ ಕಾಲುವೆಯು 40ಕಿ.ಮೀ ಉದ್ದವಿದ್ದು, 4.04 ಟಿ.ಎಂ.ಸಿ ನೀರನ್ನು ಬಳಸಿ, ಬಬಲೇಶ್ವರ ತಾಲೂಕಿನ 52500 ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ಯೋಜನೆಯಾಗಿರುತ್ತದೆ. ಇದರಡಿ ಒಟ್ಟು 15 ವಿತರಣಾ ಕಾಲುವೆಗಳ ಪೈಕಿ 14 ವಿತರಣೆ ಜಾಲದ ಕಾಮಗಾರಿಗಳನ್ನು ಕೈಗೊಂಡಿದ್ದು, ಅವುಗಳು ವಿವಿಧ ಹಂತದಲ್ಲಿವೆ. ಉಳಿದ 15ನೇ ಹಾಗೂ ಕೊನೆಯ ವಿತರಣಾ ಕಾಲುವೆ ಕಾಮಗಾರಿಯಾಗಿದ್ದು, ಇದನ್ನು ರೂ.108 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊತ್ತಿಕೊಳ್ಳಲು ಅನುದಾನ ದೊರೆತಿದ್ದು, ಬಬಲೇಶ್ವರ ತಾಲೂಕಿನ ಕೊನೆಯ ಹಳ್ಳಿಗಳಿಗೆ ವಿತರಣಾ ಕಾಲುವೆಯ ಮೂಲಕ 10272 ಎಕರೆ ಪ್ರದೇಶ ಹಾಗೂ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ 3000 ಎಕರೆ ಪ್ರದೇಶ ಸೇರಿದಂತೆ ಒಟ್ಟು 13272 ಎಕರೆ ಪ್ರದೇಶವು ನೀರಾವರಿಗೆ ಒಳಪಡುತ್ತದೆ.
ಬಬಲೇಶ್ವರ ಶಾಖಾ ಕಾಲುವೆಯ 5ಎ, 5ಬಿ ಮತ್ತು ವಿತರಣಾ ಸಂಖ್ಯೆ 15 ಹಾಗೂ ಲ್ಯಾಟರಲ್ ಕಾಲುವೆಯ ಈ ಮೂರು ಕಾಮಗಾರಿಗಳಿಂದ ಬಬಲೇಶ್ವರ ತಾಲೂಕಿನ 26 ಸಾವಿರ ಎಕರೆ ಪ್ರದೇಶಕ್ಕೆ ನೀರು ಹರಿಸಲು ಸಾಧ್ಯವಾಗುತ್ತದೆ ಎಂದು ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.