ಆರ್‌ಎಸ್‌ಎಸ್ ರಾಷ್ಟ್ರದ ಕಾರ್ಯಗಳಿಗೆ ಸಮರ​‍್ಿತವಾದ ಸಂಘವಾಗಿದೆ

RSS is an organization dedicated to the work of the nation.

ಆರ್‌ಎಸ್‌ಎಸ್ ರಾಷ್ಟ್ರದ ಕಾರ್ಯಗಳಿಗೆ ಸಮರ​‍್ಿತವಾದ ಸಂಘವಾಗಿದೆ 

ಬೀದರ 31: ಮನುಷ್ಯ ಜೀವನ ಎಲ್ಲಾ ಜೀವಿಗಳ ಜೀವನಕ್ಕಿಂತ ಶ್ರೇಷ್ಠ ಜೀವನವಾಗಿದೆ. ಈ ಜೀವನಕ್ಕೆ ಬಂದು ವ್ಯರ್ಥವಾಗಿ ಬದುಕಿದರೆ, ಮನುಷ್ಯ ಜೀವನಕ್ಕೆ ಕಲಂಕ ತಂದಂತಾಗುತ್ತದೆ. ಹಾಗಾಗಿ ಮನುಷ್ಯ ಜೀವನ ಯಶಸ್ವಿಗೊಳಿಸಿಕೊಳ್ಳಬೇಕಾದರೆ ಜಗತ್ತಿನಲ್ಲೆ ಸರ್ವಶ್ರೇಷ್ಠವಾದ ಮತ್ತು ಪುರಾತನವಾದ ಭಾರತ ಸಂಸ್ಕೃತಿಯಂತೆ ಜೀವನ ಸಾಗಿಸಬೇಕೆಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಪ್ರಾಂತದ ದೇವಸ್ಥಾನ ಸಮೃದ್ಧಿ ಪ್ರಮುಖರಾದ ಮನೋಹರ ಮಠದರವರು ಹೇಳಿದರು. ಅವರು ಬೀದರನ ಚಿಕಪೇಟ್ ಹತ್ತಿರದ ಜಗನ್ನಾಥ ಮಂದಿರದಲ್ಲಿ ಆಯೋಜಿಸಿದ ಯುಗಾದಿ ಹಬ್ಬದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸವನ್ನಿತ್ತು ಹೇಳಿದರು.  ಮುಂದುವರೆದು, ನಾವು ಇನ್ನೊಬ್ಬರಿಗೆ ಆಧಾರಸ್ತಂಭವಾಗುವ ಮತ್ತು ಒಳ್ಳೆಯದಕ್ಕೆ ಪ್ರೇರಣೆಯಾಗುವ ಕೆಲಸ ಮಾಡಬೇಕು. ದ್ವೇಷ, ಅಸೂಯೆ, ಸ್ವಾರ್ಥ ಬಿಟ್ಟು ಸತ್ಸಂಗದಲ್ಲಿದ್ದು ಮನುಷ್ಯತ್ವ ಹೆಚ್ಚಿಸಿಕೊಂಡು ಸಾತ್ವಿಕ ಜೀವನ ನಡೆಸಿದರೆ ದೈವತ್ವಕ್ಕೇರಬಹುದು ಎಂದರು. ಮಹಾತ್ಮಿಕರೊಬ್ಬರು ಹೇಳಿದಂತೆ “ಜಗತ್ತಿನಲ್ಲಿರುವ ಎಲ್ಲಾ ಒಳ್ಳೆ ಸಂಗತಿ ಹೇಳಿಯಾಗಿದೆ. ಆಚರಣೆ ಮಾತ್ರ ಬಾಕಿ ಉಳಿದಿದೆ” ಎಂದಿದ್ದಾರೆ. ಹಾಗಾಗಿ ಒಳ್ಳೆಯದನ್ನು ಹೇಳುವುದರ ಜೊತೆಗೆ ನಡೆಯುವುದನ್ನೂರೂಢಿಸಿಕೊಂಡರೆ ತಮ್ಮ ಹೇಳಿಕೆ ಪ್ರಭಾವಕಾರಿಯಾಗುತ್ತದೆಂದರು. ಭಗವದ್ಗೀತೆಯಲ್ಲಿ “ಪರೋಪಕಾರಾಯ ಪುಣ್ಯಾಯ, ಪರಪೀಡನಾಯ ಪಾಪಾಯ” ಎಂದು ಹೇಳಲಾಗಿದೆ. ಹಾಗಾಗಿ ನಾವು ಪರೋಪಕಾರದಲ್ಲಿ ಅಚಲವಾಗಿ ನಿಲ್ಲಬೇಕು ಎಂದರು. ಭಗವದ್ಗೀತೆಯಲ್ಲಿ ಮನುಷ್ಯ ಜೀವನದ ಸಾಫಲ್ಯತೆಗೆ ಅವಶ್ಯವಾಗುವ ಎಲ್ಲವನ್ನೂ ಸಾಕ್ಷಾತ್ಕರಿಸಿ ಹೇಳಲಾಗಿದೆ. ಆದರೆ ಈ ಭಗವದ್ಗೀತೆ ಯತಿಗಳಿಗೆ, ಸನ್ಯಾಸಿಗಳಿಗೆ, ವೃದ್ಧರಿಗೆ ಮಾತ್ರ ಸೀಮಿತಗೊಳಿಸಿ, ಮಕ್ಕಳಿಗೆ ಮತ್ತು ಯುವಕರಿಗೆ ಇದರಿಂದ ದೂರಮಾಡಲಾಗಿದೆ. ಇದು ಇಲ್ಲಿನವರನ್ನು ಧರ್ಮ ಮಾರ್ಗದಿಂದ ವಿಮುಖಗೊಳಿಸುವ ಷಡ್ಯಂತ್ರ ಇದರಲ್ಲಿ ಅಡಗಿದೆ. ಇದನ್ನರಿತು ಧರ್ಮ ಕಾರ್ಯಕ್ಕಾಗಿ ಭಗವದ್ಗೀತೆ ಅವಿಭಾಜ್ಯ ಅಂಗವಾಗಿಸಿಕೊಳ್ಳಬೇಕೆಂದರು. ಸ್ವರ್ಗ ನರಕ ನಮ್ಮಲ್ಲಿಯೇ ಇವೆ. ಇನ್ನೊಬ್ಬರಿಗೆ ನಿಂದನೆ, ತೇಜೋವಧೆ ಮತ್ತು ಹಾಳು ಮಾಡುವುದು ನರಕವಾಗಿದೆ. ಇನ್ನೊಬ್ಬರಿಗೆ ಗೌರವ ಕೊಡುವುದು ಅವರ ಕಷ್ಟ ನಿವಾರಣೆ ಮಾಡುವುದು ಸ್ವರ್ಗವಾಗಿದೆ. ಎಂದರು. ಕೃಷ್ಣನು ದುರ್ಯೋಧನನಿಗೆ ಒಳ್ಳೆಯವರನ್ನು ತಂದುಕೊಡು ಎಂದಾಗ ಅವನಿಗೆ ಅದು ಸಾಧ್ಯವಾಗಲಿಲ್ಲ. ಆತನ ಕಣ್ಣಿಗೆ ಎಲ್ಲರೂ ಕೆಟ್ಟವರಾಗೇ ಕಂಡಿರುತ್ತಾರೆ. ಕೃಷ್ಣನು ಧರ್ಮರಾಯನಿಗೆ ಕೆಟ್ಟವರನ್ನು ತಂದುಕೊಡು ಎಂದಾಗ ಆತನಿಗಾರೂ ಕೆಟ್ಟವರು ಸಿಗಲಿಲ್ಲ.ಹಾಗಾಗಿ ನಮ್ಮ ದೃಷ್ಟಿಯಂತೆ ಸೃಷ್ಟಿ ಸಮಷ್ಠಿಯಿರುತ್ತದೆ ಎಂದರು. ಇದರಂತೆ “ಯದ್ಭಾವಂ ತದ್ಭವತಿ” ಎಂದು ಹೇಳಲಾಗಿದೆ. ಅಂದರೆ ನಮ್ಮ ಮನದಲ್ಲಿ ಏನಿರುತ್ತದೆಯೋ ಅದು ಕಾರ್ಯದಲ್ಲಿ ಬರುತ್ತದೆ. ಹಾಗಾಗಿ ಒಳ್ಳೆ ಚಿಂತನೆ, ಒಳ್ಳೆ ಆಸ್ವಾದನೆ ಮಾಡುತ್ತಿರಬೇಕೆಂದರು. ತ್ರೇತಾಯುಗದಲ್ಲಿ ದೇವರಾದ ರಾಮ ಸ್ವದೇಶದಲ್ಲಿದ್ದರೆ,ಅಸುರನಾದ ರಾವಣ ವಿದೇಶದಲ್ಲಿದ್ದ. ದ್ವಾಪರ ಯುಗದಲ್ಲಿ ಅಸುರರು ಮತ್ತು ದೇವರು ಒಂದೇ ಕುಟುಂಬದಲ್ಲಿ ಕೌರವರಾಗಿ ಪಾಂಡವರಾಗಿ ಹುಟ್ಟಿದರು. ಆದರೆ ಈ ಕಲಿಯುಗದಲ್ಲಿ ಅಸುರರು ಮತ್ತು ದೇವರು ಒಂದೇ ದೇಹದಲ್ಲಿ ವಾಸಮಾಡುತ್ತಿದ್ದಾರೆ. ಅಂದರೆ ನಮ್ಮೊಳಗಿನ ಅಸುರ ಶಕ್ತಿ ನಾಶಗೊಳಿಸಿಕೊಳ್ಳುವುದು ಕಲಿಯುಗದ ದೊಡ್ಡ ಜಯವಾಗಿದೆ ಎಂದರು. ತರಾತುರಿಯಲ್ಲಿ  ಪೂಜೆ ಮಾಡುವುದು ತೋರಿಕೆಗಾಗಿ ಯಾತ್ರೆ ಮಾಡುವುದು ಇದರಿಂದ ದೈವತ್ವ ಸಿದ್ಧಿಸುವುದಿಲ್ಲ. ಬರೀ ಕಷ್ಟ ಬಂದಾಗ ದೇವರನ್ನು ನೆನೆಯುವುದು ಸುಖ ಬಂದಾಗ ಮರೆಯುವುದು ಮಾಡಿದರೆ ಅದು ವ್ಯವಹಾರಿಕವಾಗುತ್ತದೆ. ದೇವರು ನಿರ್ಮಲವಾದ ನಿಷ್ಕಾಮಕರ್ಮದಿಂದ ಕೂಡಿದ ಯಾಚನೆ ಸ್ವೀಕರಿಸುತ್ತಾನೆ. ದೇವರಲ್ಲಿ ಮತಲಪಿ, ದಿಖಾವಟಿ ನಡೆಯುವುದಿಲ್ಲ ಎಂದು ಸೂಚ್ಯವಾಗಿ ಹೇಳಿದರು. ವಿವೇಕಾನಂದರಿಗೆ ರಾಮಕೃಷ್ಣ ಪರಮಹಂಸರು ಕಾಳಿಕಾಮಾತೆಯಲ್ಲಿ ಏನಾದರೂ ಬೇಡಿಕೋ ಅಂದಾಗ ವಿವೇಕಾನಂದರು ಕಾಳಿಕಾಮಾತೆಗೆ ಜಗತ್ತಿನ ಕಲ್ಯಾಣವಾಗಬೇಕೆಂದು ಕೇಳಿದರು. ಕಾರಣ ಜಗತ್ತಿನ ಕಲ್ಯಾಣದಲ್ಲೇ ನನ್ನ ಕಲ್ಯಾಣ ಅಡಗಿದೆ ಎಂಬ ವಿಶಾಲ ಮನೋಭಾವ ಅವರದ್ದಾಗಿತ್ತು. ವಿವೇಕಾನಂದರಂತೆ ನಾವು ವಿಶಾಲ ಮನೋಭಾವದವರಾದರೆ ಧರ್ಮಕಾರ್ಯ ವ್ಯಾಪಕವಾಗಿ ಮಾಡಬಹುದಾಗಿದೆ ಎಂದರು.  ರಾಮಾಯಣ, ಮಹಾಭಾರತ ಗ್ರಂಥಗಳಲ್ಲಿ ನಮಗೆ ಅಸುರಗುಣ, ದೇವಗುಣದಿಂದ ಏನೇನು ಪರಿಣಾಮಗಳಾಗುತ್ತವೆಂದು ರುಜುವಾತುಪಡಿಸಿ ತೋರಿಸಲಾಗಿದೆ. ಇದನ್ನು ಪೂಜೆಗೆ ಸೀಮಿತಗೊಳಿಸದೆ ನಡೆಗೆ ಪೂರಕವಾಗಿಸಿಕೊಳ್ಳಬೇಕೆಂದರು.  ನಮ್ಮ ಧರ್ಮ ಗ್ರಂಥದಲ್ಲಿ ಪತಿಧರ್ಮ, ಸತಿಧರ್ಮ, ಆಚಾರ್ಯಧರ್ಮ, ವೃತ್ತಿಧರ್ಮ ಹೀಗೆ ಎಲ್ಲಾ ಕಾರ್ಯಗಳನ್ನೂ ಧರ್ಮದೊಂದಿಗೆ ಜೋಡಿಸಿ, ಹೇಗೆ ಪಾಲನೆ ಮಾಡಬೇಕೆಂಬುದು ಹೇಳಲಾಗಿದೆ. ಇತಿಹಾಸ ಒಳ್ಳೆ ಕಾರ್ಯ ಮಾಡಿದವರಿಗೆ ದಾಖಲಿಸುತ್ತದೆ. ಸಂತರು ತಮ್ಮ ಸ್ವಂತಕ್ಕೆ ಬದುಕದೆ ಪರರ ಸೇವೆಗೆ ಬದುಕಿದ್ದಾರೆ ಎಂದರು. ಭಾರತದ  ಪುರಾತನ ಅಧ್ಯಾತ್ಮ ಗ್ರಂಥಗಳನ್ನು ಕೆಲ ಆಧುನಿಕರು ಇವನ್ನು ಹಳೇ ಕಾಲದವು ಎಂದು ಹೇಳಿ ದೂರಮಾಡುತ್ತಿದ್ದಾರೆ. ಆದರಿವು ಅಮರವಾದ ಸಂದೇಶಗಳದ್ದಾಗಿದ್ದು, ಸಂಜೀವಿನಿಯಾಗಿ ನಮ್ಮ ಉಪಯೋಗಕ್ಕೆ ಬರುತ್ತವೆ ಎಂದು ಮಾರ್ಮಿಕವಾಗಿ ಹೇಳಿದರು.  ಸೀತೆ ಹನುಮಂತನ ತ್ಯಾಗದ ಸೇವೆಗೆ ಮನಸೋತು, ತನ್ನಲ್ಲಿನ ಮುತ್ತಿನಹಾರ ಅವನಿಗೆ ಕೊಡುತ್ತಾಳೆ. ಆತ ಆ ಮುತ್ತಿನ ಹರಳುಗಳಲ್ಲಿ ರಾಮನನ್ನು ಹುಡುಕುತ್ತಾನೆ. ಆ ಹರಳುಗಳಲ್ಲಿ ರಾಮ ಕಾಣದೇ ಇದ್ದಾಗ ಅದನ್ನು ತಿರಸ್ಕರಿಸುತ್ತಾನೆ. ಸೀತೆ ಕಾರಣ ಕೇಳಿದಾಗ, ರಾಮನಿಲ್ಲದ ಯಾವುದೇ ವಸ್ತು, ವಿಷಯ ನನಗೆ ಬೇಡ ಎನ್ನುತ್ತಾನೆ. ನಾವೂ ಕೂಡ ಶಾಸ್ತ್ರೋಕ್ತವಾಗಿರದ ಕಡೆಗಳಲ್ಲಿ ಹೋಗಲೇಬಾರದು ಎಂದರು. ಹಾಗೆಯೇ ಕೆಲವರು ಪುರಾಣ ಕಥೆಗಳು ಕೇಳುವುದರಿಂದ ಉಪಯೋಗವಿಲ್ಲ ಎನ್ನುತ್ತಾರೆ. ಆದರೆ ಅವೆಲ್ಲಾ ದಿವ್ಯ ಸಂದೇಶಗಳನ್ನು ಮತ್ತು ಮಹೋನ್ನತ ಮಾರ್ಗಗಳನ್ನು ತೋರಿಸುತ್ತವೆ ಎಂದರು. ಇವತ್ತು ರಾಷ್ಟೀಯ ಸ್ವಯಂ ಸೇವಕ ಸಂಘವು ಪ್ರಮುಖ ಕ್ಷೇತ್ರಗಳಲ್ಲಿ ಶಾಖಾಂಗಗಳನ್ನು ಹೊಂದಿದ್ದು, ಕಾರ್ಯತತ್ಪರವಾಗಿದೆ. ಕುಟುಂಬ ಪ್ರಭೋದನಿ ಕೂಡ ಒಂದು ಶಾಖೆಯಾಗಿ ಕುಟುಂಬ ಬಲಪಡಿಸುತ್ತಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಗಳಿಗೆ ಈಗ ನೂರು ವರ್ಷ ತುಂಬುತ್ತಿದೆ. ಇದರ ಆಶಯ ದೇಶ ಮತ್ತು ದೇಶದ ಸಂಸ್ಕೃತಿ ಬಲಿಷ್ಟಗೊಳಿಸುವುದೇ ಆಗಿದೆ ಎಂದರು. ಇವತ್ತಿನ ಮಾಧ್ಯಮಗಳಲ್ಲಿ ಒಳ್ಳೆಯದಕ್ಕಿಂತ ಕೆಟ್ಟವುಗಳೇ ಹೆಚ್ಚಿಗೆ ಬರುತ್ತಿವೆ. ಹಾಗಾಗಿ ಇವತ್ತಿನ ಬಹುಮಾಧ್ಯಮಗಳನ್ನು ಎಚ್ಚರಿಕೆಯಿಂದ  ಬಳಸಬೇಕೆಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ನೀಲೇಶ ದೇಶಮುಖರವರು ಮಾತಾಡುತ್ತಾ, ದೇವರನ್ನು ಸಂತುಷ್ಟಗೊಳಿಸುವ ಪ್ರಸನ್ನಗೊಳಿಸುವ ಕಾರ್ಯಗಳಲ್ಲಿದ್ದರೆ, ಜೀವನದಲ್ಲಿ ಆನಂದ ಪ್ರಾಪ್ತಿಗೊಳಿಸಿಕೊಳ್ಳಬಹುದಾಗಿದೆ. ಮತ್ತು ಒಳ್ಳೆಯ ಕಾರ್ಯಗಳಿಗೆ ಆತ್ಮಬಲ, ಮನೋಬಲ ಪ್ರಾಪ್ತಿಯಾಗುತ್ತದೆ ಎಂದರು. ಭಾರತ ಜಗತ್ತಿನಲ್ಲಿಯೇ ಸರ್ವಶ್ರೇಷ್ಠ ದೇಶವಾಗಿದೆ. ಸಂತರು, ದೇವರುಗಳ ಜನ್ಮ ಇಲ್ಲಾಗಿದೆ. ಭಗವದ್ಗೀತೆಯಂತಹ ಮಹಾನ್ ಗ್ರಂಥಗಳು ಇಲ್ಲಿ ರಚಿಸಲ್ಪಟ್ಟಿವೆ. ಈಗ ಇಂತಹ ಗ್ರಂಥಗಳು ಎಲ್ಲಾ ಕಡೆ, ಎಲ್ಲಾ ಭಾಷೆಗಳಲ್ಲೂ ಲಭ್ಯವಿವೆ. ಎಲ್ಲರೂ ಖರೀದಿಸಿ ಅನುಸರಿಸಬೇಕು. ಭಾರತದ ಸಂಪ್ರದಾಯದಲ್ಲಿ ಮಗು ಗರ್ಭದಲ್ಲಿರುವಾಗಲೇ ಸಂಸ್ಕಾರ ಕೊಡುವುದನ್ನು ಆರಂಭಿಸಬೇಕು ಎಂದು ಹೇಳಲಾಗಿದೆ. ಇಂದು ಹಿರಿಯರು ಹಳ್ಳಿಗಳಲ್ಲಿ, ಮಕ್ಕಳು ಪಟ್ಟಣಗಳಲ್ಲಿ ಬೆಳೆಯುತ್ತಿದ್ದರಿಂದ, ಸಂಸ್ಕಾರ ಹಿರಿಯರಿಂದ ಮಕ್ಕಳಿಗೆ ಸಿಗುತ್ತಿಲ್ಲ. ಹಾಗಾಗಿ ಮಾತಾಪಿತರೇ ಸ್ವತಃ ಜ್ಞಾನಪ್ರಾಪ್ತಿಯಾಗಿಸಿಕೊಂಡು ಮಕ್ಕಳು ಬಾಲ್ಯದಲ್ಲಿರುವಾಗಲೇ  ಸಂಸ್ಕಾರ ಕೊಡಬೇಕೆಂದರು. ದೇಶ ಮೊದಲು ಮತ್ತು ದೇಶದ ಸಂಸ್ಕೃತಿ ಮೊದಲು ಎನ್ನುವುದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಧ್ಯೇಯವಾಗಿದೆ. ಇದರ ಪ್ರಚಾರಕರು ದೇಶದಲ್ಲಿ ಐಕ್ಯತೆ ಮತ್ತು ಅಭಿವೃದ್ಧಿ ಕಾರ್ಯವನ್ನು ಶತಮಾನದಿಂದ ಸಮರಾ​‍್ಣಭಾವದಿಂದ  ಮಾಡುತ್ತಾ ಮಾದರಿಯಾಗಿದ್ದಾರೆ. ಇವರನ್ನು ಅನುಸರಿಸಿದರೆ ದೇಶ ಬಲಾಢ್ಯವಾಗುತ್ತದೆಂದರು. ಕಾರ್ಯಕ್ರಮದಲ್ಲಿ ರಾಜಕುಮಾರ ಅಳ್ಳೆ, ಸುಧೀರ ಶರ್ಮಾ, ಶಾಲಿವಾನ ಹಳ್ಳಿಖೇಡ, ಶಕುಂತಲಾ ಪಾಟೀಲ, ಅರುಣಾ ಅಳ್ಳೆ,  ಪುಷ್ಕರ್, ರಮಾದೇವಿ ಮತ್ತಿತರರು ಉಪಸ್ಥಿತರಿದ್ದರು.