ಚಡಚಣ ಪ.ಪಂ ಅಧ್ಯಕ್ಷ - ಉಪಾಧ್ಯಕ್ಷರ ಚುನಾವಣೆ
ಅಧ್ಯಕ್ಷರಾಗಿ ಬಿಜೆಪಿಯ ಮಲ್ಲಿಕಾರ್ಜುನ ಧೋತ್ರೆ ಅವಿರೋಧ ಆಯ್ಕೆ
ಚಡಚಣ 21: ಸ್ಥಳೀಯ ಪಟ್ಟಣ ಪಂಚಾಯ್ತಿಗೆ ಶುಕ್ರವಾರ ನಡೆದ ಅಧ್ಯಕ್ಷ - ಉಪಾಧ್ಯಕ್ಷ ಚುನಾವಣೆಯಲ್ಲಿ ವರ್ಡ್ ನಂ.15 ರ ಬಿಜೆಪಿ ಸದಸ್ಯ ಮಲ್ಲಿಕಾರ್ಜುನ ಧೋತ್ರೆ ಅವಿರೋಧವಾಗಿ ಹಾಗೂ ಉಪಾಧ್ಯಕ್ಷರಾಗಿ ವಾರ್ಡ್ ನಂ.5 ರ ಕಾಂಗ್ರೆಸ್ ಸದಸ್ಯ ಇಲಾಹಿಸಾಬ ನಧಾಪ ಅವರು ತಮ್ಮ ಪ್ರತಿಸ್ಪರ್ಧಿ ವಾರ್ಡ್ ನಂ.9 ರ ಬಿಜೆಪಿ ಸದಸ್ಯ ಶ್ರೀಕಾಂತ ಗಂಟಗಲ್ಲಿ ಅವರನ್ನು ನಾಲ್ಕು ಮತಗಳ ಅಂತರದಿಂದ ಸೋಲಿಸಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಆಗಿರುವ ಚಡಚಣ ತಹಶೀಲ್ದಾರ ಸಂಜಯ ಕುಮಾರ ಇಂಗಳೆ ಅವರು ಘೋಷಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ ತಿಂಗಳಿನಲ್ಲಿ ಪ.ಪಂ ಗೆ ಒಟ್ಟು 16 ಸ್ಥಾನಗಳಿಗೆ ಜರುಗಿದ ಚುನಾವಣೆಯಲ್ಲಿ ಬಿಜೆಪಿಯ 8 ಜನ ಸದಸ್ಯರು, 4 ಜನ ಕಾಂಗ್ರೆಸ್ ಹಾಗೂ 4 ಜನ ಪಕ್ಷೇತರರು ಆಯ್ಕೆಯಾಗಿದ್ದರು.ಅಧ್ಯಕ್ಷ ಸ್ಥಾನವನ್ನು ಅನುಸೂಚಿತ ಜಾತಿಗೆ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗ ” ಅ ” ಅಭ್ಯರ್ಥಿಗಳಿಗೆ ಮೀಸಲಾತಿ ನಿಗದಿ ಪಡಿಸಲಾಗಿತ್ತು. ಅದರಂತೆ ಕಾಂಗ್ರೆಸನಲ್ಲಿ ಅನುಸೂಚಿತ ಜಾತಿಗೆ ಸೇರಿದ ಯಾವನೊಬ್ಬ ಸದಸ್ಯ ಇರದೇ ಇರುವದರಿಂದ ಅಧ್ಯಕ್ಷ ಗದ್ದಿಗೆ ಕೇವಲ ಬಿಜೆಪಿಯ ಮಲ್ಲಿಕಾರ್ಜುನ ಧೋತ್ರೆ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರು ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದರು.ಇನ್ನು ಉಪಾಧ್ಯಕ್ಷ ಸ್ಥಾನಕ್ಕಾಗಿ ಬಿಜೆಪಿಯ ಶ್ರೀಕಾಂತ ಗಂಟಗಲ್ಲಿ, ಕಾಂಗ್ರೆಸನ ಇಲಾಹಿಸಾಬ ನಧಾಪ ಹಾಗೂ ವಾರ್ಡ.ನಂ. 6 ರ ಪಕ್ಷೇತರ ಸದಸ್ಯ ಚೇತನ ನಿರಾಳೆ ಅವರು ಸ್ಪರ್ಧಿಸಿದ್ದರು. ಆದರೆ ಪಕ್ಷೇತರ ಸದಸ್ಯ ಚೇತನ ನಿರಾಳೆ ಕೊನೆಗಳಿಗೆಯಲ್ಲಿ ಬಿಜೆಪಿಗೆ ಬೆಂಬಲ ಸೂಚಿಸಿ ಅವರು ತಮ್ಮ ನಾಮಪತ್ರವನ್ನು ಹಿಂಪಡೆದ ಪ್ರಯುಕ್ತ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ಚುನಾವಣೆ ನಡೆಯಿತು.ಸರಳ ಬಹುಮತಕ್ಕಾಗಿ ಬಿಜೆಪಿಗೆ ಕೇವಲ ಒಬ್ಬ ಸದಸ್ಯನ ಮತ ಅವಶ್ಯಕತೆ ಇದ್ದ ಕಾರಣ ಸಂಸದ ರಮೇಶ್ ಜಿಗಜೇವಣಿಗಿ ಅವರು ತಮ್ಮ ಪಕ್ಷದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಪರವಾಗಿ ಮತ ಚಲಾಯಿಸಲು ಬಂದಿದ್ದರು. ಅಲ್ಲದೆ ಬಿಜೆಪಿ ಪಕ್ಷವೂ ಉಪಾಧ್ಯಕ್ಷ ಸ್ಥಾನದ ತನ್ನ ಅಧಿಕೃತ ಅಭ್ಯರ್ಥಿ ಶ್ರೀಕಾಂತ್ ಗಂಟಗಲ್ಲಿ ಪರ ಮತ ಚಲಾಯಿಸುವಂತೆ ವಿಫ್ ನೀಡಿದ್ದರೂ ಕೂಡ ಕೆಲವು ಸದಸ್ಯರು ವಿಫ್ ಉಲ್ಲಂಘನೆ ಮಾಡಿ ಕಾಂಗ್ರೆಸ್ ಸದಸ್ಯ ಇಲಾಹಿಸಾಬ ನಧಾಪ ಪರ ಅಡ್ಡ ಮತದಾನ ಮಾಡಿದ ಪರಿಣಾಮ ಅವರು ನಿರಾಯಾಸವಾಗಿ ಜಯಗಳಿಸಿದರು. ಇದರಿಂದಾಗಿ ಸಂಸದರ ಮತ ವ್ಯರ್ಥವಾಗಿ, ಬಿಜೆಪಿ ಪಕ್ಷಕ್ಕೆ ಭಾರಿ ಮುಖ ಭಂಗವಾಗಿತ್ತು.
ಇದೇ ಪ್ರಥಮ ಬಾರಿಗೆ ಪ.ಪಂ. ಆಡಳಿತ ಮಂಡಳಿಯ ಚುನಾವಣೆಯಲ್ಲಿ ವಿಜಯಪುರ ಸಂಸದ ರಮೇಶ್ ಜಿಗಜೇವಣಿಗಿ ಹಾಗೂ ನಾಗಠಾಣ ಶಾಸಕ ವಿಠ್ಠಲ್ ಕಟಕದೊಂಡ ಅವರು ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಮತ ಚಲಾಯಿಸಿದ್ದು ವಿಶೇಶವಾಗಿತ್ತು.
ಕಾರ್ಯಕರ್ತರ ಆಕ್ರೋಶ :- ಸರಳ ಬಹುಮತ ಹಾಗೂ ಇಬ್ಬರು ಪಕ್ಷೇತರ ಸದಸ್ಯರ ಬೆಂಬಲ ಬಿಜೆಪಿ ಪಕ್ಷಕ್ಕೆ ಇದ್ದರೂ ಕೂಡ ಕೆಲವು ಸದಸ್ಯರು ಬಗೆದ ದ್ರೋಹದಿಂದಾಗಿ ಉಪಾಧ್ಯಕ್ಷ ಸ್ಥಾನ ಕೈ ತಪ್ಪಿದ್ದು ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ವಿಫ್ ಉಲ್ಲಂಘಿಸಿದ ಸದಸ್ಯರ ಮೇಲೆ ಹೈಕಮಾಂಡ್ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.ಯಾವುದೇ ಅಹಿತಕರ ಘಟನೆ ಸಂಬಂಧಿಸಿದಂತೆ ಮುಂಜಾಗ್ರತಾಕ್ರಮವಾಗಿ ಪಟ್ಟಣದ ಎಲ್ಲ ಪ್ರಮುಖ ರಸ್ತೆಗಳಲ್ಲಿ ಚಡಚಣ ಸಿಪಿಐ ಸುರೇಶ ಬೆಂಡೆಗೊಂಬಳ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ ಕೈಗೊಳ್ಳಲಾಗಿತ್ತು.