ಹಾರೂಗೇರಿ 07: ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಮಾತ್ರ ಐತಿಹಾಸಿಕ ಬಜೆಟ್ ಹೊರತು ಅತಿಥಿ ಶಿಕ್ಷಕರಿಗೆ ಅಲ್ಲ. ಸುಮಾರು ದಶಕಗಳ ಹೋರಾಟ ಪ್ರತಿಭಟನೆಗಳಿಗೆ ಅತಿಥಿ ಶಿಕ್ಷಕರಿಗೆ ಭದ್ರತೆ ಸಿಗುತ್ತಿಲ್ಲ. ಅತಿಥಿ ಶಿಕ್ಷಕರ ಬಾಳಿಗೆ ಬೆಳಕಾಗದೇ ಅಳುವ ಮಕ್ಕಳ ಕೈಯಲ್ಲಿ ಮಿಠಾಯಿ ನೀಡಿದಂತಿದೆ ಈ ಬಜೆಟ್.
ರಾಜ್ಯಾದ್ಯಂತ ಸುಮಾರು 43ಸಾವಿರ ಅತಿಥಿ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದು, ಪ್ರತಿವರ್ಷ ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿಗಳಷ್ಟು ಉಳಿತಾಯವಾಗುತ್ತಿದೆ. ಕನಿಷ್ಠ ಕೂಲಿಯನ್ನು ನೀಡದೇ ಅತಿಥಿ ಶಿಕ್ಷಕರ ಗೌರವ ಧನವನ್ನು ಕೇವಲ 2000ರೂ. ಹೆಚ್ಚಿಸಿ, ಸಂತೃಪ್ತಿ ಪಡಿಸುವ ಅಸಂವಿಧಾನಿಕ ಸರ್ಕಾರವಾಗಿದೆ.
ಹಿಂದಿನ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ನಾಯಕರು ಅತಿಥಿ ಶಿಕ್ಷಕರ ಹೋರಾಟದಲ್ಲಿ ಭಾಗಿಯಾಗಿ, ನಮ್ಮ ಸರ್ಕಾರ ಆಡಳಿತಕ್ಕೆ ಬಂದರೆ ಅತಿಥಿ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವುದಾಗಿ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ಪ್ರಣಾಳಿಕೆಯಲ್ಲೂ ಉಲ್ಲೇಖಿಸಿದೆ. ಆದರೂ ಬಂದಿ ಖಾನೆಯಲ್ಲಿ ಬಂಧಿಯಾಗಿರುವಂತಹ ಕೈದಿಗಳಿಗೆ ನೀಡುವಂತಹ ಸಂಬಳವನ್ನು ಸಮಾಜವನ್ನು ಕಟ್ಟುವ ಶಿಕ್ಷಕನಿಗಿಲ್ಲದೇ ಹೋಗಿದೆ.
ಪ್ರದೀಪ ಮಾಳಿ - ಕಾರ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘ.