ಮರಬಿದ್ದು ಯುವಕರು ಮೃತ: ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ವಿತರಣೆ

ಬೆಳಗಾವಿ 26: ಬೈಕ್‌ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಮರ ಬಿದ್ದು ಮೃತಪಟ್ಟಿದ್ದ ಕರ್ಲೆ ಗ್ರಾಮದ ಇಬ್ಬರು ಯುವಕರ ಕುಟುಂಬಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಬುಧವಾರ ತಲಾ 5 ಲಕ್ಷ ರೂ. ಪರಿಹಾರ ವಿತರಿಸಿದರು.ಬೆಳಗಾವಿ ಗ್ರಾಮೀಣ ಕ್ಷೇತ್ರದ ಕರ್ಲೆ ಗ್ರಾಮದ 20 ವರ್ಷದ ಸೋಮನಾಥ ರಾ. ಮುಚ್ಚಂಡಿಕರ ಎಂಬ ಯುವಕ ದ್ವಿಚಕ್ರ ವಾಹನ ಮೇಲೆ ತೆರಳುವ ಸಮಯದಲ್ಲಿ ಆಕಸ್ಮಿಕವಾಗಿ ಮರ ಬಿದ್ದ ಪರಿಣಾಮ ಮೃತಪಟ್ಟಿದ್ದ. ಈ ಹಿನ್ನೆಲೆಯಲ್ಲಿ ಇಂದು ಯುವಕನ ತಾಯಿ ಮತ್ತು ಕುಟುಂಬದ ಇತರ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಸಚಿವರು, ಸರ್ಕಾರದಿಂದ 5 ಲಕ್ಷ ರೂ.ಗಳನ್ನು ಬಿಡುಗಡೆಗೊಳಿಸಿರುವ ಆದೇಶ ಪತ್ರವನ್ನು ಮೃತನ ವಾರಸುದಾರರಿಗೆ ಹಸ್ತಾಂತರಿಸಿದರು.  

ಕರ್ಲೆ ಗ್ರಾಮದ ಇನ್ನೋರ್ವ ಯುವಕ 16 ವರ್ಷದ ವಿಠ್ಠಲ ಕೃಷ್ಣ ತಳವಾರ ಸಹ ದ್ವಿಚಕ್ರ ವಾಹನ ಮೇಲೆ ತೆರಳುವ ಸಮಯದಲ್ಲಿ ಆಕಸ್ಮಿಕವಾಗಿ ಮರ ಬಿದ್ದ ಪರಿಣಾಮ ಮೃತಪಟ್ಟಿದ್ದ. ಈ ಹಿನ್ನೆಲೆಯಲ್ಲಿ ಯುವಕನ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿ, ಸರ್ಕಾರದಿಂದ 5 ಲಕ್ಷ ರೂ. ಗಳನ್ನು ಬಿಡುಗಡೆಗೊಳಿಸಿರುವ ಆದೇಶ ಪತ್ರವನ್ನು ಮೃತನ ವಾರಸುದಾರರಿಗೆ ಸಚಿವರು ಹಸ್ತಾಂತರಿಸಿದರು.ತಹಶಿಲ್ದಾರ ಬಸವರಾಜ ನಾಗರಾಳ, ಕಂದಾಯ ನೀರೀಕ್ಷಕ ರಾಜು ಗಲಗಲಿ, ಗ್ರಾಮದ ಆಡಳಿತ ಅಧಿಕಾರಿ ಎಂ.ಎಚ್‌.ಬೂದಿಹಾಳ, ಯುವರಾಜ ಕದಂ ವಿನಾಯಕ ಪಾಟೀಲ, ವಸಂತ ಸಾಂಬ್ರೇಕರ್, ಗ್ರಾಮದ ಅನೇಕರು ಇದ್ದರು.