ಹರಿಯಾಣದಲ್ಲಿ ಕಾಂಗ್ರೆಸ್ ಸರ್ಕಾರ ದಶಕದ ನೋವನ್ನು ಕೊನೆಗೊಳಿಸಲಿದೆ: ರಾಹುಲ್ ಗಾಂಧಿ

ನವದೆಹಲಿ 28: ಹರಿಯಾಣದಲ್ಲಿ ಮುಂಬರಲಿರುವ ಕಾಂಗ್ರೆಸ್ ಸರ್ಕಾರ ದಶಕದ ನೋವನ್ನು ಕೊನೆಗೊಳಿಸಲಿದೆ. ರಾಜ್ಯದ ಜನತೆಯ ಆಶೋತ್ತರಗಳನ್ನು ಈಡೇರಿಸಲು ಪಕ್ಷ ಸಂಕಲ್ಪ ಮಾಡಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ.

ಅಕ್ಟೋಬರ್ 5 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಹರಿಯಾಣ ಕಾಂಗ್ರೆಸ್ ತನ್ನ ವಿವರವಾದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ನಂತರ ರಾಹುಲ್ ಗಾಂಧಿ ಈ ರೀತಿಯ ಹೇಳಿಕೆ ನೀಡಿದ್ದಾರೆ.

ರೈತರ ಕಲ್ಯಾಣಕ್ಕಾಗಿ ಆಯೋಗ ಸ್ಥಾಪನೆ, ಹುತಾತ್ಮ ಯೋಧರ ಕುಟುಂಬಗಳಿಗೆ 2 ಕೋಟಿ ರೂ. ಆರ್ಥಿಕ ನೆರವು, ಉದ್ಯೋಗ ಸೃಷ್ಟಿಸಲು ಕಾರ್ಮಿಕ ಘಟಕಗಳಿಗೆ ಉತ್ತೇಜನ, ಹರಿಯಾಣ ಅಲ್ಪಸಂಖ್ಯಾತ ಆಯೋಗದ ಪುನರ್ ರಚನೆ ಕಾಂಗ್ರೆಸ್ ಪಕ್ಷದ ಪ್ರಮುಖ ಭರವಸೆಗಳಾಗಿವೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಒಂದು ದಶಕದ ಅವಧಿಯಲ್ಲಿ ಬಿಜೆಪಿ ಹರಿಯಾಣದ ಸೌಹಾರ್ದತೆ, ಕನಸು ಮತ್ತು ಅಧಿಕಾರವನ್ನು ಕಿತ್ತುಕಂಡಿದೆ ಎಂದು ಅವರು ಆರೋಪಿಸಿದ್ದಾರೆ. ಅಗ್ನಿವೀರ್ ಯೋಜನೆ ದೇಶಭಕ್ತ ಯುವ ಜನರ ಆಕಾಂಕ್ಷೆಗಳನ್ನು ಕಸಿದುಕೊಂಡಿದೆ. ನಿರುದ್ಯೋಗ ಕುಟುಂಬಗಳ ನಗುವನ್ನು ಕಿತ್ತುಕೊಂಡಿದೆ ಮತ್ತು ಹಣದುಬ್ಬರ ಮಹಿಳೆಯರ ಸ್ವಾವಲಂಬನೆಯನ್ನು ಕಿತ್ತುಕೊಂಡಿದೆ ಎಂದು ಅವರು ಆರೋಪಿಸಿದ್ದಾರೆ.