ಹೆಚ್.ಐ.ವಿ, ಏಡ್ಸ್ ರೋಗಕ್ಕೆ ಬಲಿಯಾಗದಂತೆ ಯುವಕರು ಜಾಗೃತಿ ವಹಿಸಿ: ಡಾ. ಬುಗ್ಗಿ
ಬೆಳಗಾವಿ 19: ಎಚ್ಐವಿ ಏಡ್ಸ್ ಬಗ್ಗೆ ಜನರಲ್ಲಿರುವ ತಪ್ಪು ಅಭಿಪ್ರಾಯವನ್ನು ಹೊಗಲಾಡಿಸಿ, ಅದರ ಬಗ್ಗೆ ಜಾಗೃತಿ ವಹಿಸಬೇಕು. ಮುಖ್ಯವಾಗಿ ಯುವಕರು ಹೆಚ್.ಐ.ವಿ/ಏಡ್ಸ್ ರೋಗಕ್ಕೆ ಬಲಿಯಾಗದಂತೆ ಜಾಗೃತಿ ವಹಿಸಿ, ಸಮಾಜದಲ್ಲಿ ಹೆಚ್.ಐ.ವಿ/ಏಡ್ಸ್ ಬಗ್ಗೆ ಸಮಾಜದ ಜನರಿಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಬೇಕು ಎಂದು ಬೆಂಗಳೂರಿನ ರಾಜ್ಯ ಎಡ್ಸ್ ಪ್ರಿವೆನಷನ್ ಸೊಸೈಟಿಯ ಅಪರ ಯೋಜನಾ ನಿರ್ದೇಶಕರಾದ ಡಾ.ಉಮಾ ಬುಗ್ಗಿ ಅವರು ಹೇಳಿದರು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತು ್ತಕುಟುಂಬ ಕಲ್ಯಾಣ ಇಲಾಖೆ, ಬೆಂಗಳೂರಿನ ರಾಜ್ಯ ಏಡ್ಸ್ ಪ್ರಿವೆನಷನ್ ಸೊಸೈಟಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಾರ್ತಾ ಮತ್ತು ಪ್ರಚಾರ ಇಲಾಖೆ, ಜಿಲ್ಲಾ ಏಡ್ಸ್ ನಿರೋಧಕ ಮತ್ತು ನಿಯಂತ್ರಣ ಘಟಕ, ಜಿಲ್ಲೆಯ ರಕ್ತ ಕೇಂದ್ರಗಳು ಹಾಗೂ ಸ್ವಯಂ ಸೇವಾ ಸಂಘ ಸಂಸ್ಥೆಗಳು (ಹೆಚ್.ಐ.ವ್ಹಿ/ಏಡ್ಸ್) ಇವರ ಸಹಯೋಗದಲ್ಲಿ ಯುವಜನೋತ್ಸವದ”-2024 ಪ್ರಯುಕ್ತ ಶನಿವಾರ (ಅ.19) ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ರೆಡ್ ರಿಬ್ಬನ್ ಮ್ಯಾರಥಾನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದ್ದರು.
ಯುವಜನೋತ್ಸವದ-2024 ಪ್ರಯುಕ್ತ ಹಮ್ಮಿಕೊಂಡಿದ ರಾಜ್ಯ ಮಟ್ಟದ ಮ್ಯಾರಥಾನ್ ಸ್ಪರ್ಧೆಯನ್ನು ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನಷನ್ ಸೊಸೈಟಿಯ ಅಪರ ಯೋಜನಾ ನಿರ್ದೇಶಕರು ಹಸಿರು ನಿಶಾನೆ ತೋರುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಹೆಚ್.ಐ.ವಿ/ಏಡ್ಸ್ ಬಗ್ಗೆ ಅರಿವು, ಸೇವಾ ಸೌಲಭ್ಯಗಳ ಮಾಹಿತಿ, ಕಳಂಕ ಮತ್ತು ತಾರತಮ್ಯವನ್ನು ತಡೆಗಟ್ಟುವುದು, ಹೆಚ್ಐವಿ ಮತ್ತು ಏಡ್ಸ್ (ತಡೆ) ಕಾಯ್ದೆ 2017, ನ್ಯಾಕೋ ಏಡ್ಸ್ ಆ್ಯಪ್, ಉಚಿತ ರಾಷ್ಟ್ರೀಯ ಸಹಾಯವಾಣಿ 1097, ಎಸ್ಟಿಐ, ಬಗ್ಗೆ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ರಾಜ್ಯ ಮಟ್ಟದ ರೆಡ್ ರಿಬ್ಬನ್ 5 ಕಿ.ಮೀ ಮ್ಯಾರಥಾನ್ ಸ್ಪರ್ಧೆಯನ್ನು ಜಿಲ್ಲಾ ಕ್ರೀಡಾಂಗಣದಿಂದ ಪ್ರಾರಂಭವಾಗಿ ಶ್ರೀ ಕೃಷ್ಣದೇವರಾಯ ಸರ್ಕಲ್, (ಕೊಲ್ಲಾಪೂರ ವೃತ್ತ) ಮಾರ್ಗವಾಗಿ ಚನ್ನಮ್ಮಾ ವೃತ್ತ ತಲುಪಿ, ಮರಳಿ ಅದೇ ಮಾರ್ಗವಾಗಿ ಜಿಲ್ಲಾ ಕ್ರೀಡಾಂಗಣ ತಲುಪಿ ಮ್ಯಾರಥಾನ್ ಮುಕ್ತಾಯವಾಯಿತು.
ಮ್ಯಾರಥಾನ್ ಸ್ಪರ್ಧೆಯಲ್ಲಿ ಬೆಂಗಳೂರಿನ ಸೆಂಟ್ ಪ್ರಾನ್ಸಿಸಸ್ ಕಾಲೇಜಿನ ವಿದ್ಯಾರ್ಥಿ ವೈಭವ ಮಾರುತಿ ಪಾಟೀಲ ಹಾಗೂ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿನಿ ಪ್ರಣತಿ ರೇವಾ ಅವರು ಭಾಗವಹಿಸಿ ಪ್ರಥಮ ಸ್ಥಾನದಲ್ಲಿ 25000 ನಗದು ಬಹುಮಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಚೇತನ ಅರ್ಜುನ ಕೋಲಾರ ಹಾಗೂ ಹೆಚ್ ಎಮ್ ಹರ್ಷಿತಾ ದ್ವೀತಿಯ ಸ್ಥಾನದಲ್ಲಿ 20000 ನಗದು ಬಹುಮಾನ ಪಡೆದುಕೊಂದರೆ, ವೆಂಕಟೇಶ.ಕೆ.ಕೆ ಹಾಗೂ ನಂದಿನಿ ತೃತೀಯ ಸ್ಥಾನದಲ್ಲಿ 15000 ಬಹುಮಾನ ಪಡೆದುಕೊಂಡರು. ನಿಂಗಣ್ಣ ದೇಸಾಯಿ, ಪ್ರಜ್ವಲ ನಾಯ್ಕ, ಸಂಜು.ಬಿ.ಎಮ್, ಸಂಜು.ಕೆ.ವಿ, ಮಹಾಲಕ್ಷ್ಮೀ ಬಾಸಾಕಾಳಿ, ಶ್ರೇಯಾ, ಅಕ್ಷರಾ ಮುಜುಕರ ಹಾಗೂ ಹೆಚ್.ಎನ್.ಸುಸ್ಮಾ ಅವರು ಸಮಾಧಾನಕರ ಬಹುಮಾನ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಜಿಲ್ಲಾ ವೈದ್ಯಕೀಯ ವಿಜ್ಞಾನ ಸಂಸ್ಥೆ ನಿರ್ದೇಶಕರು ಡಾ.ಅಶೋಕಕುಮಾರ ಶೆಟ್ಟಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಉಪನಿರ್ದೇಶಕರಾದ ಡಾ.ಎಮ್ಎಸ್ ಪಲ್ಲೇದ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳಾದ ಡಾ.ಚಾಂದನಿ ದೇವಡಿ, ಜಿಲ್ಲಾ ಶಸ್ತ್ರ ಚಿಕಿತ್ಸಕರು ಡಾ.ವಿ.ವಿ ಶಿಂಧೆ, ಬಿಮ್ಸ್ ಆಸ್ಪತ್ರೆ ಉಪನಿರ್ದೇಶಕರು ಗೋವಿಂದರಾಜು, ಬೆಂಗಳೂರಿನ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನಷನ್ ಸೊಸೈಟಿಯ ಸಹಾಯಕ ನಿರ್ದೇಶಕರು ನಂಜೇಗೌಡ, ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ.ರಾಜೇಶ್ವರಿ ಪಾಟೀಲ, ಬೆಳಗಾವಿಯ ಬ್ಲಡ್ ಬ್ಯಾಂಕ್ ನಿರ್ದೇಶಕರಾದ ಗೀರೀಶ ಬುಡರಕಟ್ಟಿ, ಬಿಮ್ಸ್ನ ರಕ್ತ ಕೇಂದ್ರ ವಿಭಾಗದ ಅಧಿಕಾರಿಗಳಾದ ಡಾ.ಆರ್ ಜಿ ಪಾಟೀಲ, ವೈದ್ಯಾಧಿಕಾರಿಗಳಾದ ಡಾ.ಬಿ.ಎನ್ ತುಕ್ಕಾರ, ಆರೋಗ್ಯ ಇಲಾಖೆಯ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳು, ಸರಕಾರೇತರ ಸ್ವಯಂ ಸೇವಾ ಸಂಘ ಸಂಸ್ಥೆಗಳ ಅಧ್ಯಕ್ಷರು, ಪ್ರತಿನಿಧಿಗಳು ಮತ್ತು ಸಿಬ್ಬಂದಿಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.