*ಜೊಯಿಡಾ ತಾಲೂಕು ಇತಿಹಾಸದಲ್ಲಿ ಮೊದಲ ಘಟನೆ
*ಜಿ.ಪಂ.ಸೂಚನೆಯಂತೆ ಕ್ರಮ ಪೋಟೋ: ರೆಸಾರ್ಟ ಕಟ್ಟಡ/ ಪಂಚಾಯತ ಜಾರಿ ಮಾಡಿರುವ ನೋಟೀಸ್ ಪ್ರತಿ
ಕಾರವಾರ 24: ಜೊಯಿಡಾ ತಾಲೂಕಿನ ಅವೇಡಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಾಣಿಜ್ಯ ಉದ್ದೇಶದ ಕಟ್ಟಡ ತೆರಿಗೆ ಕಟ್ಟುವಲ್ಲಿ ಪಂಚಾಯತಿಗೆ ಮಾಹಿತಿ ನೀಡದ ಹಾಗೂ ಪಂಚಾಯತ ತೆರಿಗೆ ವಸೂಲಿಯಲ್ಲಿ ತಪ್ಪೆಸಗಿದ ಪ್ರಕರಣ ಬಯಲಿಗೆ ಬಂದಿದೆ.
ಅವೇಡಾ ಪಂಚಾಯತಿ ರೆಸಾರ್ಟ ಒಂದಕ್ಕೆ ನೀಡಿದ ನಿರಪೇಕ್ಷಣ ಪತ್ರ ಹಾಗೂ ಆನಂತರ ಎಸಗಿರುವ ಕುರಿತು 2024 ರ ಡಿಸೆಂಬರನಲ್ಲಿ ವಿನಯ್ ಪಾಟೀಲ್ ಎಂಬುವವರು ಸಿಇಒ ಹಾಗೂ ಜಿ. ಪಂ. ಅಭಿವೃದ್ದಿ ಉಪ ಕಾರ್ಯದರ್ಶಿಗಳಿಗೆ ಲಿಖಿತ ದೂರು ನೀಡಿದ್ದರು. ಅಲ್ಲದೆ ರೆಸಾರ್ಟ್ ಒಂದು ನದಿ ದಂಡೆ ಅತಿಕ್ರಮಿಸಿದೆ ಎಂದು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ಮಾಡಿ, ಕ್ರಮ ಕೈಗೊಂಡ ಬಗ್ಗೆ ವಿವರವಾದ ವರದಿಯನ್ನು ನೀಡುವಂತೆ ಅವೇಡಾ ಗ್ರಾಮ ಪಂಚಾಯತಿಗೆ ಜಿ.ಪಂ.ಹಿರಿಯ ಅಧಿಕಾರಿಗಳು ಕೇಳಿದ್ದು, ತೆರಿಗೆ ತುಂಬದೆ ವಂಚನೆ ಮಾಡಿದ ರೆಸಾರ್ಟ ವಿರುದ್ದ ಕ್ರಮ ಜರುಗಿಸಲು ಸೂಚಿಸಿದ್ದರು.
ಅವೇಡಾ ಗ್ರಾಮ ಪಂಚಾಯತಿ ಯಿಂದ ಬಾಡಗುಂದ ಗ್ರಾಮದಲ್ಲಿರುವ ವಿಸ್ಲಿಂಗ್ವುಡ್ ರೆಸಾರ್ಟನವರು ಜಿಲ್ಲಾಧಿಕಾರಿಗಳು ಅನುಮತಿಸಿದ ಕ್ಷೇತ್ರ ಹಾಗು ಅನುಮತಿಯಿಲ್ಲದ ಜಾಗೆಯಲ್ಲಿ ಕಟ್ಟಡ ಕಟ್ಟಿ ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವದಲ್ಲದೇ 100 ಕ್ಕೂ ಹೆಚ್ಚು ಕೊಠಡಿಗಳು , ಬಾರ್,ರೆಸ್ಟೊರೆಂಟ್ಗಳನ್ನು ಕಟ್ಟಿದ್ದಾರೆ. 60 ಕೊಠಡಿಗಳಿಗೆ ಪಂಚಾಯತಿ ಯಿಂದ ಅನುಮತಿ ಪಡೆದು , 60ಕ್ಕೂ ಕೊಠಡಿಗಳನ್ನು ಕಟ್ಟಿದ್ದು ಪಂಚಾಯತಿ ಕೆಲವರು , ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ಸೇರಿ ಕೇವಲ 24 ಕೊಠಡಿಗಳಿಗೆ ಮಾತ್ರ ತೆರಿಗೆ ಆಕರಣೆ ಮಾಡುತ್ತಾ , ಪಂಚಾಯತಿಗೆ ನಷ್ಟವಾಗುವಂತೆ ಮಾಡಿ ಅವ್ಯವಹಾರವೆಸಗಿದ್ದಾರೆಂದು ಸಮಾಜ ಸೇವಕ ವಿನಯ್ ಪಾಟೀಲ್ ಜಿಲ್ಲಾ ಪಂಚಾಯತಗೆ ದೂರು ನೀಡಿದ್ದರು. ಲಿಖಿತ ದೂರಿಗೆ ಪ್ರತಿಕ್ರಿಯಿಸಿದ್ದ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ (ಅಭಿವೃದ್ದಿ) ಪ್ರಕಾಶ ಹಾಲಮ್ಮನವರ್, ದೂರಿನ ಸಂಬಂಧ ಪಂಚಾಯತ ರಾಜ್ಯ ಕಾನೂನಿನನ್ವಯ ಗ್ರಾಮ ಪಂಚಾಯತಗಳು ಕಾರ್ಯನಿರ್ವಹಿಸಬೇಕು. ತೆರಿಗೆ ವಂಚನೆ, ಅವ್ಯವಹಾರ ಮಾಡಿದ್ದರೆ, ವಿಚಾರಣೆ ನಡೆಸಿ ಅವೇಡಾ ಗ್ರಾಮ ಪಂಚಾಯತಿ ವಿರುದ್ದ ಸೂಕ್ತ ಕ್ರಮ ಜರುಗಿಸಲಾಗುವದು ಎಂದು ತಿಳಿಸಿದ್ದರು. ನಂತರ ಅವೇಡಾ ಗ್ರಾಮ ಪಂಚಾಯತಿಗೆ ನೋಟಿಸು ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವೇಡಾ ಪಂಚಾಯತ್ , ದೂರಿನಲ್ಲಿ ಉಲ್ಲೇಖಿತ ರೆಸಾರ್ಟನವರಿಂದ ತೆರಿಗೆ ವಸೂಲಿಗೆ ಮುಂದಾಗಿದೆ.
ರೆಸಾರ್ಟ ಮಾಲೀಕರಿಗೆ ನೀಡಿದ ನೋಟಿಸನಲ್ಲಿ ಏನಿದೆ ? : ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಕರ ಪಾವತಿಸದೆ ಇರುವ ಕುರಿತು ವಿಸ್ಲಿಂಗ್ ವುಡ್ ರೆಸಾರ್ಟ ಮಾಲೀಕರಾದ ಸ್ಮಿತಾ ವಿನಾಯಕ ಜಾಧವ ಅವರಿಗೆ ಅವೇಡಾ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿ ನೋಟಿಸು ಜಾರಿ ಮಾಡಿದ್ದು, ಅದರ ಪ್ರತಿಯನ್ನು ಜೋಯಿಡಾ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕಳಿಸಿದ್ದಾರೆ. ನೋಟಿಸಿನಲ್ಲಿ ಬಾಡಗುಂದ ಗ್ರಾಮದ ಸರ್ವೆ ನಂ 12ಅ/1 ರ ಪೈಕಿ 4-36 -00 ಭೂ ಪರಿವರ್ತಿತ ಕ್ಷೇತ್ರದ ಜಮೀನಿನಲ್ಲಿ ಹಾಸ್ಪಿಟಾಲಿಟಿ (ಕೈಗಾರಿಕೆ) ಉದ್ದೇಶಿತ 60 ಕೊಠಡಿಗಳ ಕಟ್ಟಡ ನಿರ್ಮಾಣ ಮಾಡಲು ಗ್ರಾಮ ಪಂಚಾಯತಿ ಸಾಮಾನ್ಯ ಸಭೆ (27-2-2019)ಯಲ್ಲಿ ನಿರ್ಣಯಿಸಿ ಪರವಾನಿಗೆ ನೀಡಲಾಗುತ್ತದೆ. ರೆಸಾರ್ಟನ ಕಛೇರಿ ಕಡತಗಳನ್ನು ಪರೀಶೀಲಿಸಲಾಗಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಗ್ರಾಮ ಪಂಚಾಯತಿ ಯಿಂದ ಕಾಮಗಾರಿ ಪೂರ್ಣಗೊಂಡ ಬಗ್ಗೆ ಯಾವುದೇ ಪ್ರಮಾಣ ಪತ್ರವನ್ನು ಪಡೆದುಕೊಂಡಿರುವದಿಲ್ಲ. ಆದರೆ ಕಟ್ಟಡದಲ್ಲಿ ವ್ಯಾಪಾರ, ವಹಿವಾಟುಗಳನ್ನು ನಡೆಸುತ್ತಿರುವದು ಗಮನಕ್ಕೆ ಬಂದಿದೆ. ಇದು ನಿಯಮ ಬಾಹಿರವಾಗಿದೆ. ಕಾರಣ ಗ್ರಾಮ ಪಂಚಾಯತಿಯಿಂದ ರೆಸಾರ್ಟನಲ್ಲಿ ನಿರ್ಮಿಸಲಾದ 60ಕೊಠಡಿಗಳ ಕಟ್ಟಡ ಪೂರ್ಣಗೊಳಿಸಿದ ಬಗ್ಗೆ ಪ್ರಮಾಣ ಪತ್ರವನ್ನು ಇದುವರೆಗೂ ಏಕೆ ಪಡೆದುಕೊಂಡಿಲ್ಲ ಎಂಬ ಬಗ್ಗೆ ವಿವರಣೆ ಕೇಳಲಾಗಿದೆ. ಕಟ್ಟಡ ನಿರ್ಮಾಣದ ಶೇಕಡಾ 1 ರಷ್ಟು ಮೊತ್ತವನ್ನು ಕಾರ್ಮಿಕರ ಕಲ್ಯಾಣ ನಿಧಿಗೆ ಭರಣ ಮಾಡಿದ ಮೊತ್ತ ಹಾಗು ದಾಖಲೆಗಳನ್ನು, ಕಟ್ಟಡದ ಮೌಲ್ಯ ಮಾಪನ ಮಾಡಿದ ವಿವರಗಳನ್ನು ಸಲ್ಲಿಸಿ ಸ್ವಘೋಷಿತ ಕರ ಆಕರಣೆ ಮಾಡಿಕೊಂಡಿದ್ದು ಇರುವದಿಲ್ಲ.
ಈ ಬಗ್ಗೆ ಕೂಡಲೇ ಪಂಚಾಯತಿಗೆ ಸಲ್ಲಿಸಬೇಕಾದ ಕರಗಳನ್ನು ಭರಣ ಮಾಡುವಂತೆ ಸೂಚಿಸಿ ಬೇಡಿಕೆಪತ್ರವನ್ನು ನೀಡಿದ್ದಾರೆ. ಬೇಡಿಕೆ ಪತ್ರದಲ್ಲಿ ಭೂ ಪರಿವರ್ತಿತ ಕ್ಷೇತ್ರದಲ್ಲಿ ಹಿಂದೆ ಪೂರ್ಣಗೊಂಡ (24 ಕೊಠಡಿ) ಕಟ್ಟಡಕ್ಕೆ ರೂ. 1,41,541 ರೂ ಕರವನ್ನು 2019 ರಿಂದ ಪಾವತಿಸುತ್ತಾ ಬಂದಿದ್ದು, ಹಳೇ ಕಟ್ಟಡಗಳಿಗೆ ತುಂಬಬೇಕಾದ ಕರ ಪಾವತಿಸಿರುತ್ತಿರಿ. ಆದರೆ ವಿವಿಧ ಉದ್ದೇಶಗಳಿಗಾಗಿ 74 ಕೊಠಡಿಗಳ ಬಹು ಮಹಡಿ ಕಟ್ಟಡ ಕಟ್ಟಿಕೊಳ್ಳಲು ಪಂಚಾಯತಿಯಿಂದ ಪರವಾನಿಗೆ ಪಡೆದು ಕಟ್ಟಡ ಪೂರ್ಣಗೊಳಿಸಿ ವ್ಯಾಪಾರ ವಹಿವಾಟು ಉದ್ದೇಶಕ್ಕಾಗಿ ಬಳಸುತ್ತಿರುವದು ಪಂಚಾಯತಿಯ ಗಮನಕ್ಕೆ ಬಂದಿದ್ದು, ಈ ಬಹು ಮಹಡಿ ಕಟ್ಟಡದ ಅಂದಾಜಿಸಲಾದ ಕರ 5,11, 532 ರೂಪಾಯಿಗಳಾಗಿದ್ದು, ಕೂಡಲೇ ಪಾವತಿಸುವಂತೆ ಸೂಚಿಸಲಾಗಿದೆ. ಇಷ್ಟು ವರ್ಷಗಳ ಪಂಚಾಯತಿ ಬೊಕ್ಕಸಕ್ಕೆ ಬಹು ಮಹಡಿ ಕಟ್ಟಡದ ತೆರಿಗೆ ತುಂಬದೆ ರೆಸಾರ್ಟ ಮಾಲೀಕರು ವಾಣಿಜ್ಯ ಉದ್ದೇಶಕ್ಕಾಗಿ ಬಳಕೆ ಮಾಡಿರುವದು ಕಂಡು ಬಂದಿದೆ ಎಂದು ಪಂಚಾಯತಿ ಅಭಿವೃದ್ದಿ ಅಧಿಕಾರಿ ಕೊಟ್ಟ ನೋಟಿಸ್ ನಲ್ಲಿ ಹೇಳಲಾಗಿದೆ. ಅಲ್ಲದೇ ಈ ಬಹು ಮಹಡಿ ಕಟ್ಟಡದ ಅಂದಾಜಿಸಲಾದ ತೆರಿಗೆ ರೂ. 5,11, 532 ರೂಪಾಯಿಗಳಾಗಿದ್ದು, ಕೂಡಲೇ ಪಾವತಿಸುವಂತೆ ಸೂಚಿಸಲಾಗಿದೆ.
ಪಂಚಾಯತ ರಾಜ್ಯ ಕಾನೂನಿನನ್ವಯ ಗ್ರಾಮ ಪಂಚಾಯತಗಳು ಕಾರ್ಯನಿರ್ವಹಿಸಬೇಕು. ತೆರಿಗೆ ವಂಚನೆ, ಅವ್ಯವಹಾರ ಮಾಡಿದ್ದರೆ, ವಿಚಾರಣೆ ನಡೆಸಿ ಅವೇಡಾ ಗ್ರಾಮ ಪಂಚಾಯತಿ ವಿರುದ್ದ ಸೂಕ್ತ ಕ್ರಮ ಜರುಗಿಸಲಾಗುವದು.
-ಪ್ರಕಾಶ್ ಹಾಲಮ್ಮನವರ.
ಉಪ ಕಾರ್ಯದರ್ಶಿ. ಜಿ.ಪಂ.(ಅಭಿವೃದ್ಧಿ)
ಅವೇಡಾ ಗ್ರಾಮ ಪಂಚಾಯತಿ 2019 ರಿಂದ ರೆಸಾರ್ಟ ಮಾಲೀಕರ ಅನುಕೂಲಕ್ಕೆ ತಕ್ಕಂತೆ ವರ್ತಿಸಿದೆ. ನಾನು ದೂರು ನೀಡಿದ ಹಿನ್ನೆಲೆಯಲ್ಲಿ ತೆರಿಗೆ ಆಕರಿಸಿ ನುಣುಚಿಕೊಳ್ಳಲು ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳು ಯತ್ನಿಸುತ್ತಿದ್ದಾರೆ. ಕಟ್ಟಡವನ್ನು ಪೂರ್ಣ ಪರೀಶೀಲಿಸಿ 2019 ರಿಂದ ಬರಬೇಕಾದ ಎಲ್ಲಾ ಬಾಕಿ ಕರವನ್ನು ವಸೂಲಿ ಮಾಡಲಿ. ಜಿಲ್ಲಾ ಪಂಚಾಯತ ತನಿಖೆ ನಡೆಸಲಿ.
- ವಿನಯ ಪಾಟೀಲ್.
ಸಮಾಜ ಸೇವಕರು, ಗೋಬ್ರಾಳ.