ಲೋಕದರ್ಶನ ವರದಿ
ನೌಕರರೆಂದು ಪರಿಗಣಿಸಿ ಕನಿಷ್ಟ ವೇತನ ಜಾರಿಗೆ ಒತ್ತಾಯ ಸ್ವಚ್ಛವಾಹಿನಿ ನೌಕರರ ಪ್ರತಿಭಟನೆ
ಧಾರವಾಡ 21: ತರಬೇತಿ ಪಡೆದ ಸ್ವಚ್ಛವಾಹಿನಿ ನೌಕರರಿಗೆ ಗ್ರಾಮ ಪಂಚಾಯತಿಗಳಲ್ಲಿ ಕೆಲಸ ಕೊಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ಪ್ರತಿ ತಿಂಗಳು 5 ನೇ ತಾರೀಖಿಗೆ ವೇತನ ನೀಡಬೇಕು. ಬಾಕೀ ವೇತನನ್ನು ಪಾವತಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು. ಆರೋಗ್ಯ ವಿಮೆ ಜಾರಿ ಮಾಡಬೇಕು. ಮಾಸಿಕ ಗರೀಷ್ಟ ವೇತನ ರೂ. 7500 ಸಮಾನ ವೇತನವನ್ನು ಎಲ್ಲ ಸಿಬ್ಬಂದಿಗಳಿಗೂ ನೀಡಲು ಕ್ರಮಕೈಗೊಳ್ಳಬೇಕು. ಸ್ವಚ್ಛವಾಹಿನಿ ನೌಕರರನ್ನು ಗ್ರಾಮ ಪಂಚಾಯತಿ ನೌಕರರೆಂದು ಪರಿಗಣಿಸಿ ಗ್ರಾಮ ಪಂಚಾಯತಿ ನೌಕರರಿಗೆ ನೀಡುವ ಸೌಲಭ್ಯಗಳನ್ನು ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಒತ್ತಾಯಿಸಿ ಸ್ವಚ್ಛವಾಹಿನಿ ಚಾಲಕಿಯರು, ಸಹಾಯಕಿಯರು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ ಸಂಘ (ಸಿಐಟಿಯು) ನೇತೃತ್ವದಲ್ಲಿ ಇಂದು ಜಿಲ್ಲಾ ಪಂಚಾಯತ ಎದುರು ಪ್ರತಿಭಟನೆ ನಡೆಸಿ ಜಿಲ್ಲಾ ಪಂಚಾಯತ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ನಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಂಟಿ ಸಭೆ ನಡೆಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವನ್ನು ರಾಜ್ಯಾಧ್ಯಕ್ಷರಾದ ಎಂ.ಬಿ. ನಾಡಗೌಡ, ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ, ಜಿಲ್ಲಾಧ್ಯಕ್ಷ ಬಿ.ಐ. ಈಳಿಗೇರ, ಎನ್. ಎಂ. ಪಾಟೀಲ ಮುಖಂಡರಾದ ಶಕುಂತಲಾ ಘಾಡಿ, ಪಾತೀಮಾ, ಸರಸ್ವತಿ ಚಲವಾದಿ, ಜ್ಯೋತಿ ಬಂಡಿವಡ್ಡರ, ನೀಲವ್ವ ಕುರುಬರ, ರತ್ನವ್ವ ಜುಂಜಣ್ಣವರ ಸೇರಿದಂತೆ ನೂರಾರು ಮಹಿಳಾ ನೌಕರರು ಭಾಗವಹಿಸಿದ್ದರು.