ವಿದ್ಯಾರ್ಥಿಗಳು ದೇಶಭಕ್ತಿ, ಪಾಲಕರಿಗೆ ಗೌರವ ನೀಡುವ ಗುಣ ಬೆಳೆಸಿಕೊಳ್ಳಲಿ: ಜಮಾದಾರ
ವಿಜಯಪುರ 28: ವಿದ್ಯಾರ್ಥಿಗಳು ದೇಶಭಕ್ತಿಯ ಜೊತೆಗೆ ಪಾಲಕರಿಗೆ ಸದಾ ಗೌರವ ನೀಡುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಎನ್ಎಸ್ಎಸ್ ಸಲಹಾ ಸಮಿತಿಯ ಸದಸ್ಯ ಡಾ. ಜಾವಿದ್ ಜಮಾದಾರ ಹೇಳಿದರು.
ನಗರದ ಕರ್ನಾಟಕ ರಾಜ್ಯ ಸರ್ಕಾರ ಎನ್ಎಸ್ಎಸ್ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಎನ್ಎಸ್ಎಸ್ ಪ್ರಾದೇಶಿಕ ನಿರ್ದೇಶನಾಲಯ, ಬೆಂಗಳೂರು ಭಾರತ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಗುರುವಾರ ಆಯೋಸಿದ್ದ ‘ರಾಷ್ಟ್ರೀಯ ಭಾವೈಕ್ಯತಾ ಶಿಬಿರ-2025’ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ದೇಶಭಕ್ತಿಯ ಮನೋಭಾವನೆ ಬೆಳೆಸಿಕೊಳ್ಳಬೇಕು. ನಮಗಾಗಿ ನಿತ್ಯ ಜೀವನವನ್ನೇ ತ್ಯಾಗ ಮಾಡುವ ಪಾಲಕರ ಋಣವನ್ನು ಯಾವತ್ತೂ ತೀರಿಸಲು ಸಾಧ್ಯವಿಲ್ಲ. ಪಾಲಕರಿಗೆ ನಾವು ಸದಾ ಗೌರವ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಭಾವನಾತ್ಮಕವಾಗಿ ಕರೆ ನೀಡಿದರು. ಅಲ್ಲದೇ, ವಿದ್ಯಾರ್ಥಿಗಳು ಸಂಸ್ಕೃತಿ, ಆಚಾರ-ವಿಚಾರಗಳನ್ನು ಅರಿಯಬೇಕು. ಜನರೊಂದಿಗೆ ಒಡನಾಟ ಬೆಳೆಸಿಬೇಕು. ಎನ್.ಎಸ್.ಎಸ್ ಚಟುವಟಿಕೆಗಳ ಮೂಲಕ ಪಬ್ಲಿಕ್ ನೆಟ್ವಕಿಂರ್ಗ್ ಮಾಡಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಸೇವೆ ಹಾಗೂ ಶ್ರಮದ ಮಹತ್ವವನ್ನು ಸಾರುವಂಥದ್ದಾಗಿದೆ. ಆತಿಥ್ಯಕ್ಕೆ ಹೆಸರಾದ ವಿಜಯಪುರ ಜಿಲ್ಲೆಗೆ ವಿವಿಧ ರಾಜ್ಯಗಳಿಂದ ಯುವ ಪ್ರತಿನಿಧಿಗಳು ಆಗಮಿಸಿದ್ದು ಸಂತೋಷದ ಸಂಗತಿ. ಅವರಿಗಾಗಿ ಒಳ್ಳೆಯ ಪರಿಸರವನ್ನು ಒದಗಿಸುವುದು ನಮ್ಮ ಕರ್ತವ್ಯವಾಗಿದ್ದು, ನಮ್ಮ ಸಂಸ್ಕೃತಿಯನ್ನು ಅವರಿಗೂ ಪರಿಚಯಿಸುವ ಅವಕಾಶ ಈ ಕಾರ್ಯಕ್ರಮದ ಮೂಲಕ ಸಿಕ್ಕಿದೆ. ವಿದ್ಯಾರ್ಥಿಗಳು ಶ್ರಮದ ಮಹತ್ವವನ್ನು ಅರ್ಥಮಾಡಿಕೊಂಡು, ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಮಹಿಳಾ ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ ಮಾತನಾಡಿ, ಎನ್ಎಸ್ಎಸ್ ಶಿಬಿರಗಳು ಸೇವಾ ಮನೋಭಾವವನ್ನು ಬೆಳೆಸುವ ಮೂಲಕ ದೇಶದ ವಿಭಿನ್ನ ಸಂಸ್ಕೃತಿ, ಆಚಾರ-ವಿಚಾರಗಳನ್ನು ಅರಿಯುವ ಪ್ರಮುಖ ವೇದಿಕೆಯಾಗಿವೆ. ವಿದ್ಯಾರ್ಥಿಗಳು ಶ್ರಮದ ಮಹತ್ವವನ್ನು ಗ್ರಹಿಸಿ, ಸಮೂಹ ಬದುಕಿನ ಅನುಭವ ಪಡೆಯಲು ಈ ಶಿಬಿರಗಳು ಉತ್ತಮ ಅವಕಾಶವನ್ನು ಒದಗಿಸುತ್ತವೆ ಎಂದರು.
ಎನ್ಎಸ್ಎಸ್ ಕೋಶದ ಸಂಯೋಜನಾಧಿಕಾರಿ ಡಾ.ಅಶೋಕಕುಮಾರ ಸುರಪುರ ಮಾತನಾಡಿ, ಕಳೆದ ಏಳು ದಿನಗಳಿಂದ ನಡೆದ ಭಾವೈಕ್ಯತಾ ಶಿಬಿರದ ಕಾರ್ಯ ಚಟುವಟಿಕೆಗಳ ಕುರಿತು ವಿವರಣೆ ನೀಡಿ, ಕಳೆದ ಏಳು ದಿನಗಳಿಂದ ನಡೆದ ರಾಷ್ಟ್ರೀಯ ಭಾವೈಕ್ಯತಾ ಶಿಬಿರಕ್ಕೆ ವರ್ಣರಂಜಿತ ತೆರೆ ಬಿದ್ದಿತು. ಮಹಾರಾಷ್ಟ್ರದವರು ಕನ್ನಡ ಭಾಷೆಯಲ್ಲಿ, ಕನ್ನಡಿಗರು ತಮಿಳು ಬಾಷೆಯಲ್ಲಿ ಸ್ವಾಗತ ಹಾಗೂ ಪರಸ್ಪರ ಶುಭ ಕೋರುವ ಮೂಲಕ ‘ಭಾವೈಕ್ಯತೆ' ಸಂದೇಶ ಸಾರಿದರು. ಏಳು ದಿನಗಳ ಕಾಲ ಸಂತೋಷದಿಂದ ಅವರ ಭಾಷೆ ಇವರು, ಇವರ ಭಾಷೆ ಅವರು ಕಲಿತು ಬೇರೆ ಬೇರೆ ಭಾಷೆಗಳಲ್ಲಿಯೇ ಮಾತನಾಡುವ ಮೂಲಕ ಅಚ್ಚರಿ ಮೂಡಿಸಿದರು. ಆಯಾ ರಾಜ್ಯದ ಉಡುಗೆ ಸಂಸ್ಕೃತಿಯನ್ನು ಸಾರುವ ವೇಷದಲ್ಲಿ ಯುವ ಸ್ವಯಂಸೇವಕರು ಗಮನ ಸೆಳೆದು ತಮ್ಮ ರಾಜ್ಯದ ಸಾಂಸ್ಕೃತಿಕ ಸಿರಿವಂತಿಕೆಯನ್ನು ಪರಿಚಯಿಸುವಲ್ಲಿ ಯಶಸ್ವಿಯಾದರು ಎಂದರು.
ಕೇರಳ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಏಳು ರಾಜ್ಯಗಳಿಂದ 65 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿಂದ 200 ಕ್ಕೂ ಹೆಚ್ಚು ಎನ್ಎಸ್ಎಸ್ ಸ್ವಯಂ ಸೇವಕರು, ಶಿಕ್ಷಣ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ವಿಷ್ಣು ಶಿಂದೆ, ಮಲ್ಲಮ್ಮ ಬಾಜಪ್ಪನ್ನವರ, ವಿವಿಧ ವಿಭಾಗಗಳ ವಿದ್ಯಾರ್ಥಿನಿಯರು, ಮುಖ್ಯಸ್ಥರು, ಬೋಧಕ ವರ್ಗದವರು ಉಪಸ್ಥಿತರಿದ್ದರು.