ಪಿತ್ತ ಜನಕಾಂಗದ ಕಸಿಯಿಂದ ಇಬ್ಬರಿಗೆ ಹೊಸ ಜೀವ ನೀಡಿದ ಸ್ಪರ್ಶ್‌ ಆಸ್ಪತ್ರೆ

ಬೆಂಗಳೂರು, 4:  ಆಗಸ್ಟ್‌ 4ರಂದು  ಯಶವಂತಪುರದ ಸ್ಪರ್ಶ್‌ ಆಸ್ಪತ್ರೆಯ ತಜ್ಞ ವೈದ್ಯರು ಪಿತ್ತಜನಕಾಂಗದ ಕಸಿಯನ್ನು ಯಶಸ್ವಿಯಾಗಿ ನೆಡೆಸಿ ಅನನ್ಯ ಸಾಧನೆ ಮಾಡಿದ್ದಾರೆ.  ಮಿದುಳು ನಿಷ್ಕ್ರಿಯಗೊಂಡ ದಾನಿಯ ಯಕೃತ್ತನ್ನು ಎರಡು ಭಾಗಗಳನ್ನಾಗಿಸಿದ ಇಲ್ಲಿನ ತಜ್ಞರು ಅವುಗಳನ್ನು ಇಬ್ಬರಿಗೆ ಯಶಸ್ವಿಯಾಗಿ ಕೂಡಿಸಿದರು. ಇದರಿಂದ ಇಬ್ಬರಿಗೆ ಹೊಸ ಜೀವ ನೀಡಿದ ಸಾಧನೆಯನ್ನು ಮಾಡಿದರು. ವಿಶ್ವ ಮಟ್ಟದ ಮೂಲ ಸೌಕರ್ಯ ಹಾಗೂ ಅಸಾಧಾರಣ ತಜ್ಞತೆ ಇರುವ ವೈದ್ಯರು ಈ ಸಂಕೀರ್ಣವಾದ ಕಾರ್ಯವನ್ನು ಕುಶಲೆಯಿಂದ ಸಾಕಾರಗೊಳಿಸಿದ್ದಾರೆ.   

ತಲೆಗೆ ತೀವ್ರ ಪೆಟ್ಟಾಗಿದ್ದ ಯುವಕರೊಬ್ಬರು ಚಿಕಿತ್ಸೆಗಾಗಿ ಯಶವಂತಪುರದ ಸ್ಪರ್ಶ ಆಸ್ಪತ್ರೆಗೆ ದಾಖಲಾಗಿದ್ದರು. ಮಿದುಳನ್ನು ಕಾರ್ಯಶೀಲಗೊಳಿಸಲು ಭಾರಿ ಸಾಹಸ ಮಾಡಿದರೂ ಅವರ ಮಿದುಳು ನಿಷ್ಕ್ರಿಯ (ಬ್ರೈನ್ ಡೆಡ್) ಗೊಂಡಿತು. ಇಂಥ ಸನ್ನಿವೇಶದಲ್ಲಿ ಯುವಕನ ಸಹೃದಯಿ ಕುಟುಂಬ ಎಲ್ಲ ಅಂಗಗಳನ್ನು ದಾನ ಮಾಡುವ ಮಹತ್ಕಾರ್ಯಕ್ಕೆ ತನ್ನ ಒಪ್ಪಿಗೆ ನೀಡಿತು. ಸ್ಪರ್ಶ್‌ ಆಸ್ಪತ್ರೆ ತಕ್ಷಣ ಜೀವ ಉಳಿಸುವ ಸಂಕೀರ್ಣ ಶಸ್ತ್ರಚಿಕಿತ್ಸೆಗೆ ಮುಂದಾಯಿತು. ಪಿತ್ತಜನಕಾಂಗವನ್ನು ಎರಡು ಭಾಗಗಳಾಗಿ ವಿಭಜಿಸಲಾಯಿತು. ಒಂದು ಭಾಗವನ್ನು 53 ವರ್ಷದ ಮಧ್ಯವಯಸ್ಕ ಪುರುಷ ಹಾಗೂ ಮತ್ತೊಂದನ್ನು 59 ವರ್ಷದ ಮಹಿಳೆಯೊಬ್ಬರಿಗೆ ಕಸಿ ಮಾಡಲಾಯಿತು.   

 "ಭಾರತವು ತೀವ್ರ ಅಂಗಾಂಗ ಕೊರತೆಯನ್ನು ಎದುರಿಸುತ್ತಿದೆ, ಅಂಗಾಂಗ ಕಸಿಗಾಗಿ ಕಾಯುತ್ತಿರುವವರ ಸಾಲು ದೊಡ್ಡದಿದೆ. ಆದರೆ ದಾನಿಗಳ ಸಂಖ್ಯೆ ತುಂಬ ಸೀಮಿತವಾಗಿದೆ. ಇಂತಹ ಸವಾಲನ್ನು ಎದುರಿಸಲು, ದಾನಿಗಳ ಅಂಗಾಂಶಗಳನ್ನು ಒಟ್ಟುಗೂಡಿಸಿ ಅದನ್ನು ಹಂಚುವ ಕಾರ್ಯತಂತ್ರವನ್ನು ಅನುಸರಿಸಲಾಗುತ್ತಿದೆ. ಇದರಲ್ಲಿ ಲಿವರನ್ನು ವಿಭಜಿಸಿ ಕಸಿ ಮಾಡುವ ತಂತ್ರ ಕೂಡ ಪ್ರಚಲಿತದಲ್ಲಿದೆ. ಹೀಗೆ ಲಿವರ್ ಅನ್ನು ವಿಭಜಿಸಿದಾಗ ಬಲಭಾಗವನ್ನು ವಯಸ್ಕರಿಗೆ, ಎಡಭಾಗವನ್ನು ಮಕ್ಕಳಿಗೆ ಕಸಿ ಮಾಡಲಾಗುತ್ತದೆ,” ಎಂದು ಒಟ್ಟಾರೆ ಈ ಪ್ರಕ್ರಿಯೆಯ ಹಂತಗಳನ್ನು  ಯಶವಂತಪುರದ ಸ್ಪರ್ಶ್‌ ಆಸ್ಪತ್ರೆಯ ಪಿತ್ತಜನಕಾಂಗ ಕಸಿ ಮತ್ತು ಊಕಃ ಶಸ್ತ್ರಚಿಕಿತ್ಸೆಯ ಪ್ರಮುಖ ಸಲಹೆಗಾರ ಡಾ. ಗೌತಮ್ ಕುಮಾರ್ ವಿವರಿಸಿದರು.   

ಶಸ್ತ್ರಚಿಕಿತ್ಸೆಯ ಬಗ್ಗೆ ಮಾತನಾಡಿದ ಯಶವಂತಪುರದ ಸ್ಪರ್ಶ್‌ ಆಸ್ಪತ್ರೆಯ ಸಿಒಒ ಕರ್ನಲ್ ರಾಹುಲ್ ತಿವಾರಿ, "ದಾನಿಯ ಪಿತ್ತಜನಕಾಂಗವನ್ನು ವಿಭಜಿಸಿ ಇಬ್ಬರು ವಯಸ್ಕರಿಗೆ ಯಶಸ್ವಿಯಾಗಿ ಕಸಿ ಮಾಡುವುದು ಬಹಳ ಅಪರೂಪದ ಸಾಧನೆ ಎಂದು ನಾನು ನಂಬುತ್ತೇನೆ.  ಇವುಗಳನ್ನು ಪಡೆಯುವ ಅರ್ಹ ರೋಗಿಗಳನ್ನು ಗುರುತಿಸುವುದು ತುಂಬ ನಿರ್ಣಾಯಕವಾಗಿರುತ್ತದೆ. ಪಿತ್ತಜನಕಾಂಗವನ್ನು ಹೊರ ತೆಗೆದು ಅದನ್ನು ಇನ್ನೊಬ್ಬರಿಗೆ ಕಸಿ ಮಾಡದೆ ತುಂಬ ದೀರ್ಘಕಾಲ ಹೊರಗೆ ಇಡದಂತೆ ನೋಡಿಕೊಳ್ಳಬೇಕಾಗುತ್ತದೆ. ಇಲ್ಲಿ ಸಮಯಾವಕಾಶ ಕಡಿಮೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಅತ್ಯಾಧುನಿಕ ಸೌಲಭ್ಯಗಳು ಮತ್ತು ತಜ್ಞರ ಅಗತ್ಯ ತುಂಬಾ ಇರುತ್ತದೆ. ಸ್ಪರ್ಶ್‌ ನಲ್ಲಿ ಇದಕ್ಕೆ ಬೇಕಾದ ಪೂರಕ ಸೌಲಭ್ಯಗಳಿವೆ. ಹೀಗಾಗಿ ಮೊದಲ ಬಾರಿಗೆ ಪಿತ್ತ ಜನಕಾಂಗದ ಕಸಿಯನ್ನು ನೆರವೇರಿಸಲಾಯಿತು. ಇದಕ್ಕೆ ತಜ್ಞ ವೈದ್ಯರ ತಂಡ ಒತ್ತಾಸೆ ನೀಡಿತು,” ಎಂದು ಹೇಳಿದರು.   

“ಮಿದುಳು ನಿಷ್ಕ್ರಿಯಗೊಂಡ ಯುವಕನ ಬಲ ಮೂತ್ರಪಿಂಡ (ಕಿಡ್ನಿ) ಮತ್ತು ಹೃದಯವನ್ನು ನಗರದ ಇತರ ಆರೋಗ್ಯ ಸಂಸ್ಥೆಗಳಿಗೆ ಕಳುಹಿಸಲಾಯಿತು. ಈ ಸಹಯೋಗದ ಪ್ರಯತ್ನವು ನವೀನ ಪರಿಹಾರಗಳ ಮೂಲಕ ವೈದ್ಯಕೀಯ ಆರೈಕೆ ಮಾಡುವ ಆಸ್ಪತ್ರೆಯ ಬದ್ಧತೆಯನ್ನು ಎಲ್ಲಿರಿಗೂ ಸಾಕ್ಷಾತ್ಕರಿಸಿತು,” ಎಂದು ಸ್ಪರ್ಶ್‌ ಆಸ್ಪತ್ರೆಯ ಗ್ರೂಪ್ ಸಿಒಒ ಆದ ಜೋಸೆಫ್ ಪಸಂಗ ತಿಳಿಸಿದರು.  ಅಂಗಾಂಗ ದಾನಕ್ಕೆ ಕುಟುಂಬದ ಸದಸ್ಯರಿಂದ ಅನುಮತಿ ಸಿಕ್ಕ ಕೂಡಲೇ ಸ್ಪರ್ಶ್‌ ಆಸ್ಪತ್ರೆಯ ತಜ್ಞರ ತಂಡ ಮಿಂಚಿನ ವೇಗದಲ್ಲಿ ಕಾರ್ಯಶೀಲವಾಯಿತು. ಇಬ್ಬರ ಜೀವವನ್ನು ಉಳಿಸಿತು. ಈ ಸಂದರ್ಭದಲ್ಲಿ ಕರ್ನಾಟಕ ಸರಕಾರದ ರಾಜ್ಯ ಅಂಗಾಂಗ ಮತ್ತು ಜೀವ ಸತ್ವ ಕಸಿ ಸಂಘಟನೆ (ಎಸ್‌ಒಟಿಟಿಒ) ಆರೋಗ್ಯ ಇಲಾಖೆ ನೀಡಿದ ಸಹಕಾರ ತುಂಬ ಮುಖ್ಯವಾಗಿತ್ತು. ಕಸಿ ಮಾಡುವ ಶಸ್ತ್ರಚಿಕಿತ್ಸೆಯಲ್ಲಿ ಸ್ಪರ್ಶ್‌ ತಂಡದ ಕಾರ್ಯತತ್ಪರತೆ, ಬದ್ಧತೆ, ಶ್ರದ್ಧತೆಯನ್ನು ಮಾತುಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ವೈದ್ಯಕೀಯ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವುದರಲ್ಲಿ ಸ್ಪರ್ಶ್‌ ಆಸ್ಪತ್ರೆಯು ಮುಂಚೂಣಿಯಲ್ಲಿದೆ,ಎಂದು ಅವರು ಹೇಳಿದ್ದಾರೆ.