ದಾಂಡೇಲಿ ಅಂಬೇವಾಡಿಯ ಎ.ಆರ್‌.ಟಿ.ಓ ಕಛೇರಿಯಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ ಉದ್ಘಾಟನೆ

ದಾಂಡೇಲಿ ಅಂಬೇವಾಡಿಯ ಎ.ಆರ್‌.ಟಿ.ಓ ಕಛೇರಿಯಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ ಉದ್ಘಾಟನೆ Self-propelled driving test track inaugurated at ARTO office, Dandeli Ambewadi

ದಾಂಡೇಲಿ - ಮಾ. 20 : ದಾಂಡೇಲಿ ನಗರಕ್ಕೆ  ನೂತನ ಹೈಟೆಕ್ ಬಸ್ ನಿಲ್ದಾಣವನ್ನು ಈ ವರ್ಷ ನಿರ್ಮಿಸಿ ಉದ್ಘಾಟಿಸಲಾಗುವದು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ನುಡಿದರು. ಅವರು ದಾಂಡೇಲಿಯ ಅಂಬೇವಾಡಿಯಲ್ಲಿ ಶುಕ್ರವಾರ ಸಂಜೆ ಸಹಾಯಕ ಪ್ರಾದೇಶಿಕ ಸಾರಿಗೆ ಕಛೇರಿಯ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ ಉದ್ಘಾಟಿಸಿ ಮಾತನಾಡಿದರು.

             ಮುಂದುವರೆದು ಮಾತನಾಡಿದ ಅವರು ದಾಂಡೇಲಿಯಿಂದ ಬೆಂಗಳೂರಿಗೆ ಪಲ್ಲಕ್ಕಿ ಬಸ್‌ನ್ನು ಸದ್ಯದಲ್ಲೇ ಬಿಡಲಾಗುವದು ಎಂದರು.  ದಾಂಡೇಲಿಯ ಎ.ಆರ್‌.ಟಿ.ಓ ಕಛೇರಿಯಲ್ಲಿ ಇದೇ ಪ್ರಥಮ ಬಾರಿಗೆ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥವನ್ನು ಸ್ಥಾಪಿಸಲಾಗಿದೆ.  ಇಷ್ಟೊಂದು ದೊಡ್ಡ ಎಆರ್‌.ಟಿ.ಓ ಕಚೇರಿ ಬೇರೆಲ್ಲೂ ಇಲ್ಲ. ಆಟೋಮೇಟಿಕ್ ಟೆಸ್ಟಿಂಗ್ ಟ್ರಾಕ್ ನಿರ್ಮಿಸಲಾಗಿದೆ. ಇದರಿಂದ ಮಧ್ಯವರ್ತಿಗಳ ಹಾವಳಿಯನ್ನು  ತಡೆಗಟ್ಟಬಹುದಾಗಿದೆ. 

ಈ ಬಗ್ಗೆ ಸಾಕಷ್ಟು ದೂರುಗಳು ಇರುವದರಿಂದ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಆದೇಶ ನೀಡಲಾಗಿದೆ. ಮಧ್ಯವರ್ತಿಗಳ ಹಾವಳಿಯ ಕುರಿತು ದೂರುಗಳು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವದು. ರಾಜ್ಯದಲ್ಲಿ  20 ಆಟೋಮ್ಯಾಟಿಕ್ ಟೆಸ್ಟಿಂಗ್ ಟ್ರ್ಯಾಕ್ ಆರಂಭಗೊಂಡಿದೆ ಇನ್ನು 25 ಕೆಲಸ ನಡೆದಿದ್ದು ಅವು ಸದ್ಯದಲ್ಲೇ ಪೂರ್ಣಗೊಳ್ಳಲಿದೆ ಎಂದರು.  

      ಶಾಸಕ ಆರ್‌.ವಿ ದೇಶಪಾಂಡೆ ಅಧ್ಯಕ್ಷತೆ ವಹಿಸಿ ಮಾತನಾಡಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ದಾಂಡೇಲಿಗೆ  ಎ.ಆರ್‌.ಟಿ.ಓ ಕಛೇರಿ ಮತ್ತು ಸ್ವಯಂ ಚಾಲಿತ ಚಾಲನಾ ಪರೀಕ್ಷಾಪಥ  ಸ್ಥಾಪನೆಗೆ ಅವರ ಕೊಡುಗೆ ಮಹತ್ವದ್ದು. ದಾಂಡೇಲಿಗೆ ಹೈಟೆಕ್ ಬಸ್ ನಿಲ್ದಾಣ ಸ್ಥಾಪನೆಯ ಬಗ್ಗೆ ಕೂಡಾ ಅವರ ಭರವಸೆ ನೀಡಿದ್ದಾರೆ. ಅವರು ಅದನ್ನು ಮಾಡಿಯೇ ತೀರುತ್ತಾರೆನ್ನುವ ಭರವಸೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅಪರ ಆಯುಕ್ತ ಕೆ.ಟಿ ಹಾಲಸ್ವಾಮಿ, ಜಂಟಿ ಸಾರಿಗೆ ಆಯುಕ್ತ ಸಿದ್ದಪ್ಪ, ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ, ತಹಶೀಲದಾರ ಶೈಲೇಶ್ ಪರಮಾನಂದ, ತಾಪಂ ಇ.ಓ ಟಿ.ಸಿ ಹಾದಿಮನಿ, ಎ.ಆರ್‌.ಟಿ.ಓ ಅವಿನಾಶ್ ಕಾವೇರಿ, ಡಿ.ವಾಯ್ ಎಸ್ಪಿ ಶಿವಾನಂದ ಮದರಕಂಡಿ ಮತ್ತಿತರರು ಉಪಸ್ಥಿತರಿದ್ದರು.