ಕಾರವಾರ 04: ಕಾರವಾರ ತಾಲೂಕಿನ ಕಿನ್ನರ ಗ್ರಾಮಕ್ಕೆ ಕಾಳಿ ನದಿಯ ಹಿನ್ನೀರು ನುಗ್ಗಿದ್ದು, ಗ್ರಾಮದ ಕೃಷಿ ಜಮೀನು, ಬಾವಿಗಳು ಉಪ್ಪು ನೀರು ಮಿಶ್ರಿತವಾಗಿವೆ. ಪರಿಣಾನ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ.
ರವಿವಾರ ಕಿನ್ನರ ಗ್ರಾಮಕ್ಕೆ ನುಗ್ಗಿದ ನೀರಿನಿಂದ ಕೃಷಿ ಜಮೀನು ಸಂಪೂರ್ಣ ಉಪ್ಪು ನೀರು ಮಿಶ್ರಿತವಾಗಿತ್ತು. ಇದಕ್ಕೆ ಬಿಸಿಲ ಝಳ ಹೆಚ್ಚಿದ್ದು ಪ್ರಮುಖ ಕಾರಣ ಎಂದು ಹೇಳಲಾಗಿದೆ. ಪ್ರತಿ ದಿನ ಸಮುದ್ರದ ಭರತದ ಸಂದರ್ಭದಲ್ಲಿ ಕಾಳಿ ನದಿ ನೀರು ಉಕ್ಕುತ್ತದೆ. ಭರತ ಮತ್ತು ಇಳಿತ ಸಮುದ್ರ, ನದಿ ಸೇರುವ ತಾಣದಲ್ಲಿ ಸಹಜ ಕ್ರಿಯೆ. ಇದು ನದಿ ದಡದ ಹಳ್ಳಿಗಳಲ್ಲಿ ಕಾಣುವ ಕ್ರಿಯೆ. ಆದರೆ ಈ ಬಾರಿ ಬಿಸಿಲ ತಾಪ ಹೆಚ್ಚಾಗಿರುವುದರಿಂದ ನದಿ ಹಿನ್ನೀರು, ನದಿ ದಂಡೆಯ ಗ್ರಾಮಗಳಿಗೂ ನುಗ್ಗಿದ್ದು ಸಮಸ್ಯೆಯನ್ನು ಮಾರ್ಚ್ನಲ್ಲಿ ಸೃಷ್ಟಿಸಿದೆ. ಮೇ ತಿಂಗಳಲ್ಲಿ ನದಿ ದಂಡೆಯ ಹಿನ್ನೀರು ಗ್ರಾಮಗಳಲ್ಲಿ ಆಗುವ ಸಮಸ್ಯೆ ಈಗಲೇ ಎದುರಾಗಿದೆ. ಇದರಿಂದ ಕಿನ್ನರ ಗ್ರಾಮದ ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಿದೆ.