ಐಪಿಎಲ್‌ನಿಂದ ಎಂಎಸ್ ಧೋನಿ ನಿವೃತ್ತಿ?

ಬೆಂಗಳೂರು 19: ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ನಡೆದ ಚೆನ್ನೈ ಸೂಪರ್ ಕಿಂಗ್ಸ್  ಪಂದ್ಯವೇ ಎಂಎಸ್ ಧೋನಿ ಅವರ ಅಂತಿಮ ಪಂದ್ಯವಾಗಿತ್ತು ಎನ್ನುವ ಮಾತುಗಳು ಕೇಳಿಬರುತ್ತಿದ್ದು, ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ಐಪಿಎಲ್ 2024ನೇ ಆವೃತ್ತಿಯ ಲೀಗ್ ಹಂತದ ತಮ್ಮ ಅಂತಿಮ ಪಂದ್ಯದಲ್ಲಿ ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ 27 ರನ್‌ಗಳ ಅಂತರದಿಂದ ಸೋತ ನಂತರ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿಜೆ. ಧೋನಿಯವರ 13 ಎಸೆತಗಳಲ್ಲಿ 25 ರನ್‌ಗಳ ಕಲೆಹಾಕುವಿಕೆಯು ತಂಡದ ಗೆಲುವಿಗೆ ನೆರವಾಗಲಿಲ್ಲ. ಆರ್‌ಸಿಬಿಯ ಯಶ್ ದಯಾಳ್ ಎಸೆದ ಕೊನೆಯ ಓವರ್‌ನಲ್ಲಿ ಸಿಎಸ್‌ಕೆಗೆ 17 ರನ್‌ಗಳ ಅಗತ್ಯವಿದ್ದಾಗ 110 ಮೀ. ಸಿಕ್ಸರ್ ಬಾರಿಸಿದ ಧೋನಿ, ನಂತರದ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.

ತಾವು ಔಟಾಗಿದ್ದಕ್ಕೆ ಕೋಪಗೊಂಡ ಧೋನಿ ತಮ್ಮ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗದೇ, ಡಗೌಟ್‌ಗೆ ಹಿಂತಿರುಗುವಾಗ ತಮ್ಮ ಬ್ಯಾಟ್‌ಗೆ ಗುದ್ದಿದರು. ಯಶ್ ದಯಾಳ್ ಅಂತಿಮ ಓವರ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಆರ್‌ಸಿಬಿ ಗೆಲುವಿಗೆ ಕಾರಣವಾದಾಗಲೂ ಡಗೌಟ್‌ನಲ್ಲಿ ಕುಳಿತಿದ್ದ ಧೋನಿ ಮುಖದಲ್ಲಿ ಉದ್ವಿಗ್ನತೆ ಕಂಡುಬಂತು.

ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಸೋಲು ಕಂಡ ನಂತರ ಎಂಎಸ್ ಧೋನಿ ಅವರು ಪಂದ್ಯದ ನಂತರದ ಹ್ಯಾಂಡ್‌ಶೇಕ್‌ ನೀಡಲು ಬರಲಿಲ್ಲ. ಈ ವೇಳೆ ಮೈದಾನಕ್ಕೆ ಬಂದರೂ ಹ್ಯಾಂಡ್‌ಶೇಕ್‌ ನೀಡದೆ ಹೊರನಡೆಯುತ್ತಿರುವುದು ಕಂಡುಬಂತು. ಈ ವಿಡಿಯೋ ವೈರಲ್ ಆಗಿದ್ದು, ಧೋನಿ ಅವರಿಗಿದು ಕೊನೆಯ ಐಪಿಎಲ್ ಪಂದ್ಯವಾಗಿತ್ತು ಎನ್ನುವ ಮಾತುಗಳು ಕೇಳಿಬರುತ್ತಿವೆ.

ಕೆಲವು ಅಭಿಮಾನಿಗಳು ಎಂಎಸ್ ಧೋನಿ ನಿವೃತ್ತಿಯಾಗದಂತೆ ಮತ್ತು 42 ವರ್ಷದ ಧೋನಿಯವರು ಐಪಿಎಲ್‌ನಲ್ಲಿ ಕನಿಷ್ಠ ಇನ್ನೊಂದು ವರ್ಷ ಆಡಬೇಕು ಎಂದು ಮನವಿ ಮಾಡಿದ್ದಾರೆ. 2019 ರಲ್ಲಿ ನ್ಯೂಜಿಲೆಂಡ್ ವಿರುದ್ಧದ ODI ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ಸೋತ ಬಳಿಕ ಅನುಭವಿ ವಿಕೆಟ್‌ಕೀಪರ್-ಬ್ಯಾಟರ್‌‌ ಎಂಎಸ್ ಧೋನಿ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನಕ್ಕೆ 2020ರ ಆಗಸ್ಟ್ 15ರಲ್ಲಿ ವಿದಾಯ ಹೇಳಿದ್ದರು. ಇದೀಗ ಸಿಎಸ್‌ಕೆ ತಂಡದ ಸೋಲಿನೊಂದಿಗೆ ಅವರು ಐಪಿಎಲ್‌ಗೂ ವಿದಾಯ ಹೇಳುತ್ತಿದ್ದಾರೆ ಎನ್ನುವ ವಿಚಾರವು ಅಭಿಮಾನಿಗಳ ಆಘಾತಕ್ಕೆ ಕಾರಣವಾಗಿದೆ.

2020 ನೇ ಆವೃತ್ತಿಯ ಕೊನೆಯಲ್ಲಿ ಧೋನಿ ಅವರು ಐಪಿಎಲ್‌ನಿಂದ 'ಖಂಡಿತವಾಗಿಯೂ ನಿವೃತ್ತಿಯಾಗುವುದಿಲ್ಲ' ಎಂದು ಹೇಳಿದ್ದರು. ಬಳಿಕ 2023 ರಲ್ಲಿ ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ ಪ್ರಶಸ್ತಿ ಗೆದ್ದಿತು. ಅದುವೇ ಬಹುಶಃ ಅವರ ಕೊನೆಯ ಐಪಿಎಲ್ ಆಗಲಿದೆ ಎನ್ನಲಾಗಿತ್ತು. ಆದರೆ, 2024ನೇ ಆವೃತ್ತಿಯಲ್ಲೂ ಧೋನಿ ಸಿಎಸ್‌ಕೆ ಪರವಾಗಿ ಆಡಿದ್ದರು. ಆದರೆ, ನಾಯಕತ್ವದಿಂದ ಹೊರನಡೆದಿದ್ದರು.