ಕರ್ನಾಟಕ ಜಾಹೀರಾತು ನೀತಿ: ಪರಿಷ್ಕರಿಸಲು ಸಚಿವ ಸತೀಶ ಜಾರಕಿಹೊಳಿಗೆ ಮನವಿ

ಕರ್ನಾಟಕ ಜಾಹೀರಾತು ನೀತಿ: ಪರಿಷ್ಕರಿಸಲು ಸಚಿವ ಸತೀಶ ಜಾರಕಿಹೊಳಿಗೆ ಮನವಿ Karnataka Advertising Policy: Request to Minister Satish Jarkiholi to revise it

 ಬೆಳಗಾವಿ 23: ಕರ್ನಾಟಕ ಜಾಹೀರಾತು ನೀತಿ-2026 ರಲ್ಲಿ ಪತ್ರಿಕೆಗಳಿಗೆ ಮಾರಕವಾದ ನಿಯಮಗಳನ್ನು ಕೈಬಿಡುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಸಂಪಾದಕರ ಸಂಘ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಮನವಿ ಅರ​‍್ಿಸಿತು.  ರಾಜ್ಯ ಸರ್ಕಾರ ಪ್ರಸ್ತಾಪಿಸಿರುವ ಜಾಹೀರಾತು ನೀತಿಹಿ2026 ಕುರಿತು ಗಂಭೀರ ಅಕ್ಷೇಪವನ್ನು ವ್ಯಕ್ತಪಡಿಸಿದ ಜಿಲ್ಲಾ ಸಂಪಾದಕರ ಸಂಘ ವಿಶೇಷವಾಗಿ ಈ ನೀತಿಯಲ್ಲಿ ವಿಧಿಸಿರುವ ದಾಖಲೆಗಳ ಸಲ್ಲಿಕೆ ಹಾಗೂ ನಿಯಮಗಳ ಕಠಿಣತೆ ಮುದ್ರಣ ಮಾಧ್ಯಮ ಕ್ಷೇತ್ರಕ್ಕೆ ಬೆಳವಣಿಗೆಗೆ ಮಾರಕವಾಗುವಂಥವು ಆಗಿವೆ ಅವುಗಳಲ್ಲಿನ ಕೆಲವು ನಿಯಮಗಳು ರಾಜ್ಯಮಟ್ಟದ ಪತ್ರಿಕೆಗಳಿಗೂ ಪ್ರತಿ ವೃದ್ಧಿ ಆವೃತ್ತಿಗೆ ಅನುಷ್ಠಾನಗೊಳಿಸುವುದು ಅಸಾಧ್ಯವಾಗಿದೆ. ಉದಾಹರಣೆಗೆ ಸ್ವಂತ ಮುದ್ರಣಾಲಯ ಹೊಂದುವದು ಮತ್ತು ಖಾಯಂ ಸಿಬ್ಬಂದಿ ಸಂಬಂಧ ನಿಯಮಗಳು. ಜಾಹೀರಾತು ನೀತಿ ಪ್ರಕಾರ ಪತ್ರಿಕೆಗಳು ಕನಿಷ್ಟ ಎರಡು ವರ್ಷಕ್ಕೊಮ್ಮೆ ಹೊಸದಾಗಿ ಮಾಧ್ಯಮ ಪಟ್ಟಿಗೆ ಸೇರಿಸುವ ಕುರಿತು ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕೆಂಬುದು ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಇದು ಭಾರೀ ಹೊರೆ ಆಗುತ್ತದೆ.  

ಅನಗತ್ಯವಾಗಿ ಕಾಗದಪತ್ರಗಳ ಭಾರ ಹೆಚ್ಚಿಸುತ್ತದೆ. ಇದಕ್ಕೆ ಸಂಪೂರ್ಣ ಕೆಲಸ ಮೀಸಲಿಡುವಂತಾಗಿ ಪತ್ರಿಕೆಗಳ ನಿರಂತರ ಕಾರ್ಯನಿರ್ವಹಣೆಗೆ ತೀವ್ರ ಅಡ್ಡಿಯಾಗುತ್ತದೆ ಈ ನಿಯಮಗಳು ಜಾರಿಗೆ ಬಂದಲ್ಲಿ ಹೆಚ್ಚಿನ ಪತ್ರಿಕೆಗಳು ಅರ್ಹತೆ ಕಳೆದುಕೊಳ್ಳುವ ಸಾಧ್ಯತೆ ಇದ್ದು, ಇದು ರಾಜ್ಯದಲ್ಲಿ ಕನ್ನಡ ಮಾಧ್ಯಮ ಕ್ಷೇತ್ರದ ತೀವ್ರ ಕುಸಿತಕ್ಕೆ ಕಾರಣವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದೆ. 

ಎ ಕೆಟಗರಿಗೆ ಹದಿನೈದು ಖಾಯಂ ನೌಕರರು ಮತ್ತು ಬಿ ಕೆಟಗರಿಗೆ 10 ಜನ ಖಾಯಂ ನೌಕರರು ಕಡ್ಡಾಯವಾಗಿ ಇರಬೇಕು ಎಂಬುದನ್ನು ಪರಿಷ್ಕರಿಸಿ ಎ ಕೆಟಗರಿಗೆ 10 ಜನ ಮತ್ತು ಬಿ ಕೆಟಗರಿಗೆ ಐದು ಜನ ಎಂದು ಪರಿಷ್ಕರಿಸಬೇಕು. ಪ್ರತಿ ಎರಡು ವರ್ಷಗಳಿಗೊಮ್ಮೆ ಎಲ್ಲ ದಾಖಲೆ ಸಲ್ಲಿಕೆ ಮಾಡುವ ಷರತ್ತನ್ನು ಕೈಬಿಟ್ಟು ಅದನ್ನು ಪ್ರತಿ ಐದು ವರ್ಷಕ್ಕೊಮ್ಮೆ ಪರೀಶೀಲಿಸುವ ನಿಯಮ ಜಾರಿಗೆ ತರಬೇಕು. ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಅನುಗುಣವಾದ ಸರಳ ನಿಯಮಗಳನ್ನು ರೂಪಿಸಬೇಕು ಮಾಧ್ಯಮ ಸಮಿತಿಯಲ್ಲಿ ಈ ಮುಂಚೆ ಇದ್ದಂತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಜಿಲ್ಲಾ ವಾರ್ತಾಧಿಕಾರಿಗಳು ಮಾತ್ರ ಇರುವಂತೆ ಮತ್ತು ವಿದ್ಯುತ್ ಇಲಾಖೆ ಕಾರ್ಮಿಕ ಇಲಾಖೆ ಮತ್ತು ಆದಾಯಕರ ಇಲಾಖೆಗಳ ಅಧಿಕಾರಿಗಳನ್ನು ಸಮಿತಿಯಿಂದ ಕೈ ಬಿಡುವ ನಿಯಮ ರೂಪಿಸಬೇಕು.  

ಈ ಹಿಂದೆ ಇದ್ದಂತೆ ವಿಶೇಷವಾಗಿ ಭಾಷಾ ವಿವಾದ ಸುಪ್ರೀಂಕೋರ್ಟಿನಲ್ಲಿ ಇರುವಾಗ ಬೆಳಗಾವಿ ಜಿಲ್ಲೆಯಲ್ಲಿನ ಗಡಿ ಭಾಗದ ಕನ್ನಡ ದಿನಪತ್ರಿಕೆಗಳಿಗೆ ಗಡಿಭಾಗದ ಪ್ರೋತ್ಸಾಹಕರ ಒಂದು ಪುಟದ ಜಾಹೀರಾತನ್ನು ಕಡ್ಡಾಯವಾಗಿ ಮುಂದುವರಿಸಬೇಕೆಂದು ಮತ್ತು ಕಡಿಮೆ ಸಂಖ್ಯೆಯಲ್ಲಿರುವ ಬ್ರಾಹ್ಮಣ ಸಮುದಾಯದ ಪತ್ರಿಕೆಗಳಿಗೂ ಈ ಹಿಂದೆ ಇರುವಂತೆ ಯಥಾವತ್ತಾಗಿ ಮಾಸಿಕ ಎರಡು ಪುಟಗಳ ಜಾಹಿರಾತನ್ನು ಮುಂದುವರಿಸಬೇಕೆಂದು ವಿನಂತಿಸುತ್ತೇವೆ. ಅದೇ ರೀತಿ ಪ್ರಾದೇಶಿಕ ಪತ್ರಿಕೆಗಳಿಗೆ ಇರುವ ಮೂಲ ಜಿಲ್ಲೆಯಲ್ಲಿನ ಕನಿಷ್ಠ 6000 ಪ್ರಸಾರ ಸಂಖ್ಯೆಯನ್ನು ಕಡಿಮೆಗೊಳಿಸಿ 3000 ಕ್ಕೆ ನಿಗದಿಗೊಳಿಸಬೇಕೆಂದು ವಿನಂತಿಸಲಾಗಿದೆ.  

ದಿನದಿಂದ ದಿನಕ್ಕೆ ಎಲ್ಲ ದರಗಳು ತುಟ್ಟಿ ಯಾಗುತ್ತಿರುವ ಈ ಸಂದರ್ಭದಲ್ಲಿ ಜಾಹೀರಾತು ದರ ಇಳಿಕೆ ಮಾಡಿರುವುದು ಖೇದಕರ ವಿಷಯ. ಆದ್ದರಿಂದ ಜಾಹೀರಾತು ದರವನ್ನು ಈ ಹಿಂದೆ ಇದ್ದಂತೆ ಪ್ರತಿ ಎರಡು ವರ್ಷಕ್ಕೆ ಒಂದು ಬಾರಿ 12 ಪರ್ಸೆಂಟ್ ಎರಿಸಬೇಕು. ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳು ಪ್ರತ್ಯೇಕ ಆವೃತ್ತಿ ಮಾಡಿ ಮುದ್ರಿಸುತ್ತಿದ್ದರೆ ರಾಜ್ಯಮಟ್ಟದ ಪತ್ರಿಕೆಗಳಿಗೆ ಅನುಕರಿಸುವ ನಿಯಮಗಳನ್ನೇ ಇಲ್ಲಿಯೂ ಅನ್ವಯಿಸಬೇಕು. ಕನಿಷ್ಠ 20 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳಿಗೆ ಜಾಹೀರಾತು ದರ ಏರಿಕೆಗೆ ವಿಶೇಷ ವೇಟೇಜ ಹೆಚ್ಚಿನ ಮೌಲ್ಯ ಆದ್ಯತೆ ನೀಡಿ ಹಳೆಯ ಪತ್ರಿಕೆಗಳನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು ಈ ಹಿನ್ನೆಲೆಯಲ್ಲಿ ಪ್ರತಿವರ್ಷಕ್ಕೆ ಕನಿಷ್ಠ 10 ರೂಪಾಯಿಯಂತೆ ಜಾಹಿರಾತು ದರದಲ್ಲಿ ಹೆಚ್ಚಳ ನೀಡಬೇಕು. ಅಥವಾ ಒಂದು ಪುಟದ ಹೆಚ್ಚುವರಿ ಜಾಹಿರಾತನ್ನು ನೀಡಬೇಕು.  

ಪ್ರಾದೇಶಿಕ ಪತ್ರಿಕೆಯ ಎ ಕೆಟಗರಿ ಪತ್ರಿಕೆಗಳಿಗೆ ಸ್ವಂತ ಮುದ್ರಣಾಲಯ ಹೊಂದಿರಬೇಕೆಂಬ ನಿಯಮವನ್ನು ಕೈ ಬಿಡಬೇಕು. ಮತ್ತು ಬಿ ಗುಂಪಿನ ಎರಡನೇ ಆವೃತ್ತಿಗೆ ಎಬಿಸಿ ರಿಪೋರ್ಟ್‌ ಕಡ್ಡಾಯಗೊಳಿಸಲಾಗಿದೆ ಈ ಅಂಶವನ್ನು ಸಹ ಕೈ ಬಿಡಬೇಕು. ಮತ್ತು ಬಿ ಕೆಟಗರಿಯಲ್ಲಿ ಗರಿಷ್ಠ ಜಾಹೀರಾತು ದರವನ್ನು ರೂಪಾಯಿ 74ರ ಬದಲಿಗೆ ಒಂದು 100 ರೂ. ಗಳಿಗೆ ಹೆಚ್ಚಿಸಬೇಕು.  ಪ್ರತಿ ಎರಡು ವರ್ಷಗಳಿಗೊಮ್ಮೆ ಮಾಧ್ಯಮ ಪಟ್ಟಿಗೆ ಹೊಸದಾಗಿ ಸೇರೆ​‍್ಡ ಮಾಡುವ ಕುರಿತು ದಾಖಲೆಗಳನ್ನು ಕೇಳುವ ಬದಲಾಗಿ ಪ್ರತಿ ವರ್ಷದ ಸೆಪ್ಟೆಂಬರ್ ನಲ್ಲಿ ಸಲ್ಲಿಸುವ ಎವನ್ವಲ್ ರಿಟರ್ನ್‌ ಫೈಲಿಂಗ್‌ನಲ್ಲಿ ಸಲ್ಲಿಸುವ ದಾಖಲೆಗಳನ್ನು ಪರಿಗಣಿಸಬೇಕು.  ಪತ್ರಿಕಾ ಮಾಲೀಕತ್ವ ಬದಲಾವಣೆಯಾದಲ್ಲಿ ಮತ್ತು ಅನಿವಾರ್ಯ ಕಾರಣಗಳಿಂದ ಪತ್ರಿಕೆ ಮಾರಾಟವಾದಲ್ಲಿ ಅಂತಹ ಪತ್ರಿಕೆಗಳನ್ನು ಮಾಧ್ಯಮ ಪಟ್ಟಿಯಿಂದ ಕೈ ಬಿಡಬೇಕು ಎನ್ನುವದು ಅವೈಜ್ಞಾನಿಕವಾಗಿದೆ.  

ಬಾಡಿಗೆ ಮುದ್ರಣಾಲಯದಲ್ಲಿ ಪತ್ರಿಕೆ ಮುದ್ರಿಸುವ ಸಂಪಾದಕರು ಬಾಡಿಗೆ ಮುದ್ರಣಾಲಯದ ಸಿಬ್ಬಂದಿಗಳ ವಿವರ ನೀಡಬೇಕೆಂದು ಕೇಳುವುದು ಕೂಡ ಅಸಾಧುವಾಗಿರುತ್ತದೆ ಆದ್ದರಿಂದ ಈ ನಿಯಮವನ್ನು ಕೈ ಬಿಡಬೇಕು. ಈ ಹಿಂದಿನಂತೆ ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳಿಗೆ ವಿಶೇಷ ಸಂದರ್ಭಗಳಲ್ಲಿ ಬಹು ವರ್ಣಗಳಲ್ಲಿ ಡಿಸ್ಪ್ಲೇ ಜಾಹೀರಾತುಗಳನ್ನು ಮುದ್ರಿಸಿದಾಗ ಶೇ. 25 ಹೆಚ್ಚುವರಿ ದರವನ್ನು ಎಲ್ಲರಿಗೆ ನೀಡುವಂತೆ ಮುಂದುವರಿಸಬೇಕು ಎಂದು ಆಗ್ರಹಿಸಿದರು.  

ಈ ರೀತಿಯ ಅತಿಯಾದ ದಾಖಲೆ ನಿಯಮಗಳು ಜಾರಿಗೆ ಬಂದಲ್ಲಿ ಮಾಧ್ಯಮ ಕ್ಷೇತ್ರಕ್ಕೆ ಮುಖ್ಯವಾಗಿ ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳಿಗೆ ತೀವ್ರ ಹಾನಿ ಉಂಟಾಗುವುದು ಖಚಿತ. ಈ ಹಿಂದೆ ಸ್ಥಳೀಯ ಪತ್ರಿಕೆಗಳ ಅಭಿವೃದ್ಧಿ ಸಂಬಂಧ ನೇಮಕವಾಗಿದ್ದ ಎ. ಬಿ. ಸಿಂಗ್ ಸಮಿತಿ ವರದಿ ಮತ್ತು ಪಿ ರಾಮಯ್ಯ ಸಮಿತಿ ವರದಿಗಳು ಜಿಲ್ಲಾ ಪತ್ರಿಕೆಗಳಿಗೆ ಹೆಚ್ಚಿನ ಒತ್ತುಕೊಟ್ಟು ಅವುಗಳ ಅಭಿವೃದ್ಧಿಗೆ ವಿಶೇಷವಾದ ಯೋಜನೆಗಳನ್ನು ಕೈಗೊಳ್ಳಬೇಕೆಂದು ಶಿಫಾರಸ್ಸು ಮಾಡಿವೆ. ಆದ್ದರಿಂದ ಸರ್ಕಾರವು ತಕ್ಷಣವೇ ಈ ನಿಯಮಗಳನ್ನು ಮರುಪರೀಶೀಲಿಸಿ, ನ್ಯಾಯಸಮ್ಮತ ಹಾಗೂ ಅನುಸರಿಸಬಹುದಾದ ಕ್ರಮಗಳನ್ನು ಜಾರಿಗೆ ತರಬೇಕೆಂದು ಬೆಳಗಾವಿ ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷ ಮುರುಗೇಶ್ ಶಿವಪೂಜಿ, ಪ್ರಧಾನ ಕಾರ್ಯದರ್ಶಿ ಸಂಪತಕುಮಾರ್ ಮುಚಳಂಬಿ ಸಚಿವರನ್ನು ಒತ್ತಾಯಿಸಿದರು.