ಸೋತವರಿಗೆ ಸಚಿವ ಸ್ಥಾನ ನೀಡಿದರೆ ಹೈದರಾಬಾದ್‌ ಭಾಗಕ್ಕೆ ಅನ್ಯಾಯ: ರಾಜುಗೌಡ

ಸೋತವರಿಗೆ ಸಚಿವ ಸ್ಥಾನ ನೀಡಿದರೆ ಹೈದರಾಬಾದ್‌ ಭಾಗಕ್ಕೆ ಅನ್ಯಾಯ: ರಾಜುಗೌಡ

ಬೆಂಗಳೂರು, ಫೆ. 3 :        ಚುನಾವಣೆಯಲ್ಲಿ ಸೋತವರಿಗೆ  ಸಚಿವ ಸ್ಥಾನ ನೀಡುವ ಸುದ್ದಿಗಳು ಬರುತ್ತಿವೆ. ಸೋತವರಿಗೆ ಸಚಿವ ಸ್ಥಾನ ನೀಡಿದರೆ  ಹೈದರಾಬಾದ್ ಭಾಗಕ್ಕೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಬಿಜೆಪಿ ಶಾಸಕ ರಾಜುಗೌಡ  ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಾಸಕರ ಭವನದಲ್ಲಿ ಮಾತನಾಡಿದ ಅವರು, ಹೈದರಾಬಾದ್  ಕರ್ನಾಟಕ ಬಹಳ ಹಿಂದುಳಿದ ಪ್ರದೇಶ. ಈ ಭಾಗದಲ್ಲಿ ಆಡಳಿತಕ್ಕೆ ಬಂದಿದ್ದ ಕಾಂಗ್ರೆಸ್,  ಜೆಡಿಎಸ್ ಸರ್ಕಾರ  ಕೆಲಸ ಮಾಡಿದೆ. ಈಗ ಬಿಜೆಪಿ ಸರ್ಕಾರ ಹೈದರಾಬಾದ್ ಕರ್ನಾಟಕಕ್ಕೆ ಒತ್ತು  ಕೊಟ್ಟು ಈ ಭಾಗದವರಿಗೆ ಸಚಿವ ಸ್ಥಾನ ನೀಡಬೇಕು. ಹೈದರಾಬಾದ್ ಭಾಗಕ್ಕೆ ಒಂದು ಆದ್ಯತೆ  ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡುತ್ತೇನೆ ಎಂದರು.

ಸಂಪುಟ ವಿಸ್ತರಣೆ ಸ್ಥಾನಮಾನ ಸಂಬಂಧ ಭಾಗದ ನಾಯಕರೆಲ್ಲ ಸೇರಿ ಸಭೆ ಮಾಡಿದ್ದೇವೆ. ನಾಳೆಯೂ ಸಭೆ ನಡೆಸಿ ತೀರ್ಮಾನ ಮಾಡಿ ಬಳಿಕ ಮುಖ್ಯಮಂತ್ರಿ ಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತೇವೆ ಎಂದರು.

ತಾವು  ಪಕ್ಷ ವಿರೋಧಿ ಚಟುವಟಿಕೆ  ಮಾಡುತ್ತಿಲ್ಲ. ಸೋತ ಸಿ‌.ಪಿ.ಯೋಗೇಶ್ವರ್ ಸೇರಿದಂತೆ  ಕೆಲವರಿಗೆ ಮಂತ್ರಿಮಂಡಲದಲ್ಲಿ ಸೇರ್ಪಡೆ ಆದರೆ ಸೋತವರಿಗೆ ಸಚಿವ ಸ್ಥಾನ ನೀಡುವುದು  ಅನ್ಯಾಯ ಎಂದು ಖಂಡಿಸುತ್ತೇನೆ ಎಂದು ರಾಜುಗೌಡ ಹೇಳಿದರು.