ವಡ್ಡರಹಟ್ಟಿಯಲ್ಲಿ ನರೇಗಾ ಯೋಜನೆಯ ಜಾಗೃತಿ ಕಾರ್ಯಕ್ರಮ

ಉದ್ಯೋಗ ಖಾತರಿ ನಡಿಗೆ, ಸಬಲತೆಯಡೆಗೆ ಅಭಿಯಾನ 

ಕೊಪ್ಪಳ 15: 2025-26ನೇ ಸಾಲಿನ ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಕಾರ್ಮಿಕ ಆಯವ್ಯಯ ತಯಾರಿಕೆಯ ಕುರಿತು ಹಾಗೂ ಕಾಮಗಾರಿಗಳ ಬೇಡಿಕೆ ಸ್ವೀಕಾರ ಕುರಿತು ಉದ್ಯೋಗ ಖಾತರಿ ನಡಿಗೆ, ಸಬಲತೆಯಡೆಗೆ ಅಭಿಯಾನದ ಮೂಲಕ ಯೋಜನೆಯ ಜಾಗೃತಿ ಕಾರ್ಯಕ್ರಮವು ಅಕ್ಟೋಬರ್ 15 ರಂದು ಇರಕಲ್ಲಗಡಾ ಗ್ರಾಮ ಪಂಚಾಯತ ವ್ಯಾಪ್ತಿಯ ವಡ್ಡರಹಟ್ಟಿ ಗ್ರಾಮದಲ್ಲಿ ನಡೆಯಿತು. 

 ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ ಮಾತನಾಡಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯು ಗ್ರಾಮೀಣ ಪ್ರದೇಶದ ರೈತರ, ಕೂಲಿಕಾರರ, ಮಹಿಳೆಯರ ಸಬಲತೆಗಾಗಿ ಜಾರಿಯಾದ ಯೋಜನೆಯಾಗಿದ್ದು 100 ದಿನಗಳ ಕೆಲಸವನ್ನು ನಿರ್ವಹಿಸಬಹುದಾಗಿದೆ. ಪ್ರಸಕ್ತದಲ್ಲಿ “ಉದ್ಯೋಗ ಖಾತರಿ ನಡಿಗೆ, ಸಬಲತೆಯಡೆಗೆ ಅಭಿಯಾನ”ದ ಭಾಗವಾಗಿದೆ. ನರೇಗಾ ಯೋಜನೆಯ ಮಾಹಿತಿ, ಕಾಮಗಾರಿಗಳ ಕುರಿತು ಮನೆ ಮನೆ ಭೇಟಿ ಮೂಲಕ ಕುಟುಂಬಗಳಿಗೆ ಮಾಹಿತಿ ನೀಡಿ ಯೋಜನೆಯಡಿ ಗ್ರಾಮ ಪಂಚಾಯತಿ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಅರಣ್ಯ ಇಲಾಖೆ, ರೇಷ್ಮೆ ಇಲಾಖೆಯಿಂದ ವೈಯಕ್ತಿಕ ಕಾಮಗಾರಿಗಳನ್ನು ಅನುಷ್ಠಾನಿಸಲು ಅವಕಾಶವಿದ್ದು,  ಮೊದಲು ಯಾವ ಕಾಮಗಾರಿಯನ್ನು ಅನುಷ್ಠಾನಗೊಳಿಸಬೇಕೆಂದು ಆಯ್ಕೆ ಮಾಡಿ ನಮೂನೆಯಲ್ಲಿ ಭರ್ತಿ ಮಾಡಿ ಗ್ರಾಮ ಪಂಚಾಯತಗಳಿಗೆ ಸಲ್ಲಿಸಬೇಕು. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತಿಯ ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಕಾಮಗಾರಿಗಳನ್ನು ಸೇರೆ​‍್ಡ ಮಾಡಲಾಗುತ್ತದೆ ಎಂದು ಹೇಳಿದರು 

 ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ ಮಾತನಾಡಿ ಗ್ರಾಮದಲ್ಲಿ ಮನೆ ಮನೆ ಭೇಟಿ ಮೂಲಕ ಯೋಜನೆಯ ಜಾಗೃತಿ ಮೂಡಿಸಿ ಯೋಜನೆಯಡಿ ಇರುವ ಅವಕಾಶಗಳ ಕುರಿತು ಮನವರಿಕೆ ಮಾಡಿದ ನಂತರ ಗ್ರಾಮ ಪಂಚಾಯತಿ ಹಾಗೂ ಅನುಷ್ಠಾನ ಇಲಾಖೆಯ ಕಾಮಗಾರಿಗಳ ಬೇಡಿಕೆ ಪಡೆದ ಮೇಲೆ ಪ್ರತಿ ಗ್ರಾಮದಲ್ಲಿ ಜರುಗುವ ವಾರ್ಡ ಸಭೆ, ಗ್ರಾಮ ಸಭೆಯಲ್ಲಿ ಅನುಮೋದನೆಯೊಂದಿಗೆ ಸಮಗ್ರ ಕ್ರಿಯಾ ಯೋಜನೆಯನ್ನು ಸಿದ್ದಪಡಿಸಿ ಜಿಲ್ಲಾ ಪಂಚಾಯತಿಯಿಂದ ಅನುಮೋದನೆ ಪಡೆಯಲಾಗುತ್ತದೆ ಎಂದು ತಿಳಿಸಿದರು. ಮನೆ ಮನೆ ಭೇಟಿ ಸಂದರ್ಭದಲ್ಲಿ ರೈತರು ಮತ್ತು ಮಹಿಳೆಯರಿಂದ ದನದಶೆಡ್, ಕುರಿಶೆಡ್, ಕೊಳಿ ಶೆಡ್, ಬದು ನಿರ್ಮಾಣ, ತೆಂಗು ಸೇರಿದಂತೆ ಒಟ್ಟು 30 ವೈಯಕ್ತಿಕ ಕಾಮಗಾರಿಗಳ ಬೇಡಿಕೆಯನ್ನು ಸ್ವೀಕರಿಸಲಾಯಿತು. 

 ಕಾರ್ಯಕ್ರಮದಲ್ಲಿ ಡಿಇಒ ಮೌನೇಶ, ಗ್ರಾಮ ಕಾಯಕ ಮಿತ್ರ ಶ್ರೀದೇವಿ ಹಟ್ಟಿ ಸೇರಿದಂತೆ ಇತರರು ಹಾಜರಿದ್ದರು.