ಸರಕಾರಿ ಶಾಲೆಗೆ ಅಭಿನಂದನಾ ಗ್ರಂಥ ಸಲ್ಲಿಸಿದ ಹಳೆಯ ವಿದ್ಯಾರ್ಥಿಗಳು

ಆಲಮಟ್ಟಿ 29: ಇಲ್ಲಿನ ಸರಕಾರಿ  ಶಾಲೆಯ ಹಳೆಯ ವಿದ್ಯಾರ್ಥಿಗಳು ತಮ್ಮ ಶಾಲೆಯ 60ನೆಯ ವರ್ಷಾಚರಣೆಯ ಸಂದರ್ಭದಲ್ಲಿ ಕಲಿತ ಶಾಲೆ ಅಕ್ಷರ ತೋರಣ ಎಂಬ ಅಭಿನಂದನ ಗ್ರಂಥವನ್ನು ಅರ್ಪಿಸಿರುವುದು ಇಡೀ ರಾಜ್ಯಕ್ಕೆ ಮಾದರಿ ಕೆಲಸವಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಬಣ್ಣಿಸಿದರು.  

ಇಲ್ಲಿನ ಸಮುದಾಯ ಭವನದಲ್ಲಿ ಕರ್ನಾಟಕ ಗಾಂ ಮಂಜಪ್ಪ ಹರ್ಡೇಕರ ಪ್ರೇರಿತ ಎಂಪಿಎಸ್ ಮತ್ತು ಎಂಎಚ್‌ಎ.  ಶಾಲೆಗಳ ಹಳೆಯ ವಿದ್ಯಾರ್ಥಿಗಳ ಬಳಗದಿಂದ ಹಮ್ಮಿಕೊಂಡ ’ಕಲಿತ ಶಾಲೆಗೆ ಅಕ್ಷರ ತೋರಣ’ ಹಾಗೂ ಗುರು ಶಿಷ್ಯರ ಮಹಾಸಂಗಮ ಕಾರ್ಯಕ್ರಮದಲ್ಲಿ ಶುಕ್ರವಾರ  ಗ್ರಂಥ ಬಿಡುಗಡೆಗೊಳಿಸಿ ಅವರು ಮಾತನಾಡಿದ ಅವರು, ಹುಟ್ಟಿದ ಊರು, ಹೆತ್ತ ತಂದೆ ತಾಯಿ, ಕಲಿತ ಶಾಲೆ, ಕಷ್ಟದಲ್ಲಿ ಸಹಾಯ ಮಾಡಿದವರನ್ನು ಎಂದೂ ಮರೆಯಬಾರದು. ಉತ್ತಮ ತಾಯಿ ನೂರು ಜನ ಶಿಕ್ಷಕರಿಗೆ ಸಮ. ಗುರು ಶಿಷ್ಯರ ಸಂಬಂಧ ಉತ್ತಮವಾಗಿರಬೇಕು ಎಂದು ಹೇಳಿದರು.ಸರಕಾರೀ ಶಾಲೆಗಳ ಅಗತ್ಯವನ್ನು ಒತ್ತಿ ಹೇಳುತ್ತ, ತಾವು  ಶಿಕ್ಷಣ ಸಚಿವನಾಗಿದ್ದಾಗ 1039 ಪ್ರೌಢ ಶಾಲೆ ಮತ್ತು 500 ಪಿಯು ಕಾಲೇಜ್‌ಗಳು ಮಂಜೂರು ಮಾಡಿ 5 ಸಾವಿರ ಕೋಟಿ ರೂ.ಗಳನ್ನು ಕಟ್ಟಡಕ್ಕಾಗಿ ದೊರಕಿಸಿಕೊಟ್ಟಿದ್ದನ್ನು ನೆನಪಿಸಿಕೊಂಡರಲ್ಲದೆ, ಆಲಮಟ್ಟಿಯ ಎಂಎಚ್‌ಎಂ. ಶಿಕ್ಷಣ ಸಂಸ್ಥೆಯವರು ಡಿಪ್ಲೋಮಾ ಹಾಗೂ ಐಟಿಐ ಕಾಲೇಜ್ ಆರಂಭಿಸಲು ಪ್ರಸ್ತಾವನೆ  ಸಲ್ಲಿಸಿದರೆ ಮಂಜೂರು ಮಾಡಿಸುವ ಜವಾಬ್ದಾರಿ ನನ್ನದಾಗಿದೆ ಎಂದರು. ಮುಂದುವರಿದು ಮಾತನಾಡಿದ ಅವರು  ಗುರು ಶಿಷ್ಯರ ನಡುವಿನ ಸಂಬಂಧ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠವಾದದ್ದು, ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು, ಗುರು ಶಿಷ್ಯರ ನಡುವಿನ ಸಂಬಂಧದ ಶ್ರೇಷ್ಠತೆಯನ್ನು ಇಂದಿನ ಯುವ ಜನಾಂಗ ಅರಿಯಬೇಕು ಎಂದು ಕರೆ ನೀಡಿದರು. ಓದಿ ಉನ್ನತ ಮಟ್ಟದ ಹುದ್ದೆ ಅಲಂಕರಿಸಿದವರು ಇಂದು ತಮ್ಮ ಗುರುಗಳನ್ನು ನೆನೆದು ಓದಿದ ಶಾಲೆಗೆ ಅಕ್ಷರ ತೋರಣ ಕಟ್ಟಿದ ಹಳೆಯ ವಿದ್ಯಾರ್ಥಿಗಳ ಕಾರ್ಯ ಅಭಿನಂದನೀಯ ಹಾಗೂ ಅನುಕರಣೀಯ ವಾಗಿದ್ದು ಎಂದು ಅಭಿಪ್ರಾಯಪಟ್ಟರು.ಕೃಷಿ ಪ್ರಧಾನವಾದ ಕುಟುಂಬದಲ್ಲಿ ಬೆಳೆದಿದ್ದ ತಾವು  8 ನೇ ತರಗತಿಯಲ್ಲಿರುವಾಗಲೇ ಅನಕ್ಷರಸ್ಥೆಯಾಗಿದ್ದ ತಮ್ಮ ಅಕ್ಕನಿಗೆ ಬಾಲ್ಯವಿವಾಹವಾಗಿದ್ದನ್ನು ನೆನಪಿಸಿಕೊಂಡ ಅವರು, " ಇದು ನನ್ನ ಮನಸ್ಸಿನ ಮೇಲೆ ಗಾ ಢವಾದ ಪರಿಣಾಮ ಬೀರಿತು. ಮುಂದೆ ನಾನು ಶಿಕ್ಷಣ ಸಚಿವನಾದ ಬಳಿಕ ಹೆಣ್ಣು ಮಕ್ಕಳ ಕಲಿಕೆಗೆ ಹೆಚ್ಚಿನ ಒತ್ತು ನೀಡಿದೆ. ಅಕ್ಕನ ಅನಕ್ಷರತೆಯೇ ಹೆಣ್ಣು ಮಕ್ಕಳ ಕಲಿಕೆಗೆ ಆದ್ಯತೆ ನೀಡಲು ಮೂಲ ಕಾರಣವಾಯ್ತು"  ಎಂದು ವಿವರಿಸಿದರು. 

ಮುಂಡರಗಿ ತೋಂಟದಾರ್ಯಮಠದ ನಿಜಗುಣಪ್ರಭು ತೋಂಟದಾರ್ಯ ಶ್ರೀಗಳು ಮಾತನಾಡಿ, ಬಸವಣ್ಣನವರು ಸಾವಿರ ವರ್ಷಗಳ ಹಿಂದೆ ಅಕ್ಷರದ ಕ್ರಾಂತಿ ಮಾಡಿದರು. ಹೀಗಾಗಿ ಕೆಳವರ್ಗದ ಜನರೂ ಕೂಡ ವಚನ ಬರೆಯುಂತಾಯಿತು. ಕನ್ನಡ ಭಾಷೆ ಉಳಿವಿಗೆ ಬಸವಣ್ಣನವರು ಅನ್ಯ ರಾಜ್ಯಗಳಿಂದ ವಚನಕಾರರಿಂದ ಕನ್ನಡದಲ್ಲಿಯೇ ವಚನಗಳನ್ನು ಬರೆಯಿಸಿದರು. ಪ್ರಜಾಪ್ರಭುತ್ವ ಚಿಂತನೆ ಆರಂಭವಾಗಿದ್ದೆ ಬಸವನಬಾಗೇವಾಡಿಯಲ್ಲಿ ಅದನ್ನು ಕಟ್ಟಿದವರು ಬಸವಣ್ಣನವರು. ಪ್ರಜಾಪ್ರಭುತ್ವ ಜಾರಿಗಾಗಿಯೇ ವಚನಕ್ರಾಂತಿ ಮಾಡಿದರು ಎಂದರಲ್ಲದೆ ವಿಜಯಪುರ ಜಿಲ್ಲೆ ಶರಣರ ಕಾಲದಲ್ಲಿಯೇ ಶಿಕ್ಷಣ ಕ್ರಾಂತಿ ಮಾಡಿದ ಜಿಲ್ಲೆಯಾಗಿದೆ ಎಂದು ವಿಶ್ಲೇಷಿಸಿದರು.ಆಲಮಟ್ಟಿಯಲ್ಲಿ  ಹರ್ಡೇಕರ ಮಂಜಪ್ಪನವರ ಜೀವನವನ್ನು ಸಾರುವ ಥೀಮ್ ಪಾರ್ಕ್‌ ಅವಶ್ಯಕತೆಯನ್ನು ಒತ್ತಿ ಹೇಳಿದ ಶ್ರೀಗಳು, ಹರ್ಡೇಕರ ಅವರ ಆಶಯದಂತೆ ನಿಸರ್ಗ ಚಿಕಿತ್ಸಾ ಕೇಂದ್ರದ ಸ್ಥಾಪನೆ ಮಾಡುವಂತೆ ಸರಕಾರಕ್ಕೆ ಒತ್ತಾಯಿಸಿದರು.  

ವಿಜಯಪುರ ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕಿ ಸಂಯುಕ್ತಾ ಪಾಟೀಲ ಮಾತನಾಡಿ, ಬಹುತೇಕ ಶಾಸಕರು ತಮ್ಮ ಅನುದಾನವನ್ನು ಕೇವಲ ದೇವಸ್ಥಾನ ಮತ್ತು ಸಮುದಾಯ ಭವನಗಳಿಗೆ ನೀಡುವ ಬದಲು ಶಿಕ್ಷಣ ಕ್ಷೇತ್ರಕ್ಕೆ ನೀಡಬೇಕು. ದೇಶ ಮುಂದುವರೆಯಲು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಕೊಡಬೇಕಾಗಿದೆ. ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನವನ್ನು ಮೀಸಲಿಡಬೇಕು ಎಂದು ಪ್ರತಿಪಾಸಿದರು. ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣ  ಮಾತನಾಡಿ, ಇದೊಂದು ಹೃದಯ ಸ್ಪರ್ಶಿ ಹಾಗೂ ಮಾದರಿಯಾದ ಕಾರ್ಯಕ್ರಮ. ಕಲಿತ ಶಾಲೆಯನ್ನು ನೆನಪಿಸಿಕೊಂಡು ಗುರುನಮನ ಜತೆಗೆ ಶಾಲೆ ಕುರಿತ ಅಭಿನಂದನ ಗ್ರಂಥ ಬಿಡುಗಡೆ ಮಾಡಿರುವುದು ಸಂತೋಷ ತಂದಿದೆ. ಆಲಮಟ್ಟಿ ಶಿಕ್ಷಣ ಕ್ಷೇತ್ರವಾಗಿ ಹಾಗೂ ಪ್ರಮುಖ ಪ್ರವಾಸಿ ತಾಣವಾಗಿ ಇನ್ನಷ್ಟು ಬೆಳೆಯಲು, ಆಲಮಟ್ಟಿಯಲ್ಲಿ ಯಾತ್ರಿ ನಿವಾಸ ಹಾಗೂ ಕಲ್ಯಾಣ ಮಂಟಪದ  ಅವಶ್ಯಕತೆ ಇದೆ ಅಂದು ಅಭಿಪ್ರಾಯ ಪಟ್ಟರು.  

ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮೋಹನರಾಜ್ ಕೆ.ಪಿ.  ಮಾತನಾಡಿ ಸಾಮಾನ್ಯವಾಗಿ ಒಂದೊಂದು ಬ್ಯಾಚಿನವರು ಗುರುವಂದನ ಮಾಡುವುದನ್ನು ಕಾಣುತ್ತೇವೆ, ಆದರೆ 60 ವರ್ಷಗಳ ಎಲ್ಲ ಬ್ಯಾಚಿನವರು ಸೇರಿ ಗುರುಶಿಷ್ಯರ ಮಹಾಸಂಗಮ ಬಹುಷಃ ಕರ್ನಾಟಕದಲ್ಲಿ ಎಲ್ಲಿಯೂ ನಡೆದಿಲ್ಲ ಎಂದು ಹೇಳಿದರು. ಮಾಜಿ ಸಚಿವರಾದ ಎಸ್‌.ಕೆ.ಬೆಳ್ಳುಬ್ಬಿ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ, ಬೇಲೂರಿನ ಗುರುಬಸವ ಮಠದ ಮಹಾಂತ ಸ್ವಾಮೀಜಿ, ಗದಗದ ತೋಂಟದಾರ್ಯ ವಿದ್ಯಾಪೀಠದ ಆಡಳಿತಾಧಿಕಾರಿ ಶಿವಾನಂದ ಪಟ್ಟಣಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ, ಸದಾಶಿವ ದಳವಾಯಿ ಸೇರಿದಂತೆ ಇತರರಿದ್ದರು.ಇದೇ ಸಂದರ್ಭದಲ್ಲಿ ಎಂಪಿಎಸ್ ಮತ್ತು ಎಂಎಚ್‌ಎಂ  ಪ್ರೌಢ ಶಾಲೆಯ ಸುಮಾರು 70 ನಿವೃತ್ತ ಹಾಗೂ ಹಾಲಿ  ಗುರುಗಳು-ಗುರುಮಾತೆಯರನ್ನು ಸನ್ಮಾನಿಸಲಾಯಿತು.  ಚಂದ್ರಶೇಖರ ನುಗ್ಲಿ, ಸಂಗಮೇಶ ಮೆಣಸಿನಕಾಯಿ, ವಿಠ್ಠಲ್ ಪಾಟೀಲ್, ಸಾವಿತ್ರಿ ಹಿರೆಗೊಂಡ, ಶೈಲಶ್ರೀ ಜೋಶಿ, ತನುಜಾ ಪೂಜಾರಿ, ಸಂಗಮೇಶ್ ಚನ್ನಿಗಾವಿ ಮುಂತಾದವರು ಉಪಸ್ಥಿತರಿದ್ದರು. ಮಧ್ಯಾಹ್ನ ’ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಹೇಗೆ?’ ಎಂಬ ವಿಷಯಾಗಿ ಸದ್ಯದ ವಿದ್ಯಾರ್ಥಿಗಳೊಂದಿಗೆ ಹಳೆಯ ಸಾಧಕ ವಿದ್ಯಾರ್ಥಿಗಳಾದ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ಪ್ರಾಧ್ಯಾಪಕ ಡಾ.ಅರುಣ ಉಳ್ಳಾಗಡ್ಡಿ, ಹಿರಿಯ ಕೆ. ಎ. ಎಸ್‌. ಅಧಿಕಾರಿ  ಮಮತಾ ಹೊಸಗೌಡರ, ಪೊಲೀಸ್ ಇನ್ಸ್ಪೆಕ್ಟರ್ ಗಳಾದ ರಮೇಶ ರೊಟ್ಟಿ, ಸಚಿನ ಚಲವಾದಿ, ಸಂಗಮೇಶ ದಿಡಗಿನಾಳ, ಪುಣೆಯ ಚಾರ್ಟರ್ಡ್‌ ಅಕೌಂಟಂಟ್ ವಾಣಿಶ್ರೀ ಅಮರಗೊಂಡ, ಸರಕಾರೀ ಅಭಿಯೋಜಕಿ ಗೀತಾ ಹೊಸಗಣಿಗೇರ, ಆರ್ಕಿಟೆಕ್ಟ್‌ ಸತೀಶ್ ನಡುವಿನಮನಿ, ಸಂವಾದ ನಡೆಸಿದರು.