ಅಕ್ಷಯ್ ಕದ್ರಾಪೂರಕರ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪ್ರದಾನ

ಅಕ್ಷಯ್ ಕದ್ರಾಪೂರಕರ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪ್ರದಾನ Akshay Kadrapurkar awarded doctorate degree by Karnataka University

ಸವದತ್ತಿ   27: ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಅಕ್ಷಯ್ ಕದ್ರಾಪೂರಕರ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರತಿಷ್ಠಿತ ಡಾಕ್ಟರೇಟ್ (ಪಿಎಚ್‌.ಡಿ) ಪದವಿಯನ್ನು ಪಡೆದಿದ್ದಾರೆ.ಏಪ್ರಿಲ್ 23 ರಂದು ಧಾರವಾಡದಲ್ಲಿ ನಡೆದ ವಿಶ್ವವಿದ್ಯಾಲಯದ 75ನೇ ವಾರ್ಷಿಕ ಘಟಿಕೋತ್ಸವದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಅಕ್ಷಯ್ ಅವರಿಗೆ ಪದವಿ ಪ್ರದಾನ ಮಾಡಿ ಗೌರವಿಸಿದರು.ಅಕ್ಷಯ್ ಅವರು ಕರ್ನಾಟಕ ಕಲಾ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ. ಡಿ. ಬಿ. ಕರಡೋಣಿ ಅವರ ಮಾರ್ಗದರ್ಶನದಲ್ಲಿ ಶಹಾಪೂರ ತಾಲೂಕಿನ ಸಾಂಸ್ಕೃತಿಕ ಅಧ್ಯಯನ ಎಂಬ ವಿಷಯದ ಕುರಿತು ಮಂಡಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಈ ಉನ್ನತ ಪದವಿ ಲಭಿಸಿದೆ.

ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ. ಸಿ. ಸುಧಾಕರ್, ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎ.ಎಂ. ಖಾನ್, ಕುಲಸಚಿವರಾದ ಡಾ. ಶಂಕರ್ ಮಣಿಕ್ಯಾಳ ಸೇರಿದಂತೆ ಶಿಕ್ಷಣ ಕ್ಷೇತ್ರದ ಹಲವು ಗಣ್ಯರು ಉಪಸ್ಥಿತರಿದ್ದರು.ಅಕ್ಷಯ್ ಅವರ ಈ ಶೈಕ್ಷಣಿಕ ಸಾಧನೆಗೆ ತಂದೆ ಭೀಮಪ್ಪ ಕದ್ರಾಪೂರಕರ ಮತ್ತು ತಾಯಿ ಹೊನ್ನಮ್ಮ ಕದ್ರಾಪೂರಕರ ಹಾಗೂ ಅವರ ಕುಟುಂಬದವರು ಅಪಾರ ಹರ್ಷ ವ್ಯಕ್ತಪಡಿಸಿದ್ದಾರೆ.ಇದೇ ಸಂದರ್ಭದಲ್ಲಿ ಹಿರಿಯರಾದ ಎಚ್‌.ಎ. ಕದ್ರಾಪೂರಕರ ಅವರು ಮಾತನಾಡಿ, ನನ್ನ ಸಹೋದರನ ಮಗ ಅಕ್ಷಯ್ ಶೈಕ್ಷಣಿಕ ಕ್ಷೇತ್ರದಲ್ಲಿ ಇಂತಹ ದೊಡ್ಡ ಸಾಧನೆ ಮಾಡಿರುವುದು ನಮ್ಮ ಇಡೀ ಕುಟುಂಬಕ್ಕೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ ಎಂದು ಹೇಳುತ್ತಾ ಅಭಿನಂದನೆ ಸಲ್ಲಿಸಿದರು.ಅಕ್ಷಯ್ ಅವರ ಸಾಧನೆಗೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಹಾಗೂ ಹಿತೈಷಿಗಳು ಶುಭ ಹಾರೈಸಿದ್ದಾರೆ.