ರಾಮತೀರ್ಥ ಗುಡ್ಡದಲ್ಲಿ ಆಕಸ್ಮಿಕ ಬೆಂಕಿ: ಎಕರೆ ಪ್ರದೇಶದಲ್ಲಿದ್ದ ಗಿಡಮರಗಳು ಅಗ್ನಿಗಾಹುತಿ

ರಾಮತೀರ್ಥ ಗುಡ್ಡದಲ್ಲಿ ಆಕಸ್ಮಿಕ ಬೆಂಕಿ: ಎಕರೆ ಪ್ರದೇಶದಲ್ಲಿದ್ದ ಗಿಡಮರಗಳು ಅಗ್ನಿಗಾಹುತಿ Accidental fire at Ramatirtha Hill: Trees in an acre area gutted

ಲೋಕದರ್ಶನ ವರದಿ, 

ಜಮಖಂಡಿ 15: ನಗರದ ಹೊರವಲಯದ ಅರಣ್ಯ ಪ್ರದೇಶ ರಾಮತೀರ್ಥದ ಗುಡ್ಡದಲ್ಲಿ ತಡರಾತ್ರಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಅಂದಾಜು ಎರಡು ಎಕರೆ ಪ್ರದೇಶದಲ್ಲಿದ್ದ ಗಿಡಮರಗಳು ಅಗ್ನಿಗೆ ಆಹುತಿಯಾಗಿರುವ ಘಟನೆ ಜರುಗಿದೆ. 

ಬೇಸಿಗೆಯ ತೀವ್ರ ಬಿಸಿಲಿನಿಂದಾಗಿ ಗುಡ್ಡದ ಮೇಲಿನ ಹುಲ್ಲು ಸಂಪೂರ್ಣ ಒಣಗಿ ನಿಂತಿತ್ತು. ಮಧ್ಯರಾತ್ರಿಯ ಸುಮಾರಿಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಅರಣ್ಯದಾದ್ಯಂತ ವ್ಯಾಪಿಸಿದೆ. ಬೆಂಕಿಯ ಜ್ವಾಲೆಗಳು ರಭಸವಾಗಿ ಹರಡಿದ್ದರಿಂದ ಸುತ್ತಮುತ್ತಲ  ಪ್ರದೇಶದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. 

ಅರಣ್ಯ ಪ್ರದೇಶದ ಪಕ್ಕದಲ್ಲೇ ಕಿಡಿಗೇಡಿಗಳು ಯಾರಾದರೂ ಉದ್ದೇಶ ಪೂರ್ವಕವಾಗಿ ಬೆಂಕಿ ಹಚ್ಚಿರಬಹುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನೆಯಲ್ಲಿ ಸಣ್ಣಪುಟ್ಟ ಗಿಡಗಳು ಸೇರಿ ಹಲವು ಮರಗಳಿಗೆ ಹಾನಿಯಾಗಿದ್ದು. ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು ಬೆಂಕಿ ಹತ್ತಿ ಉರಿಯುತ್ತಿರುವುದನ್ನು ಗಮನಿಸಿ ಕೂಡಲೇ ಅಗ್ನಿಶಾಮಕ ದಳ ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಅರಣ್ಯಾಧಿಕಾರಿಗಳು ಹರಸಾಹಸ ಪಟ್ಟು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅನಾಹುತ ತಪ್ಪಿದಂತಾಗಿದೆ.