ಬೆಳಧಡಿ ಗ್ರಾಮ ಪಂಚಾಯತ ಕಾಯಕ ಬಂಧುಗಳ ತರಬೇತಿ
ಗದಗ 28: ನರೇಗಾ ಯೋಜನೆ ಕಾರ್ಮಿಕರಿಗೆ ಆಶಾಕಿರಣವಾಗಿದ್ದು ಕಾರ್ಮಿಕರ ಕುಟುಂಬದ ಆರ್ಥಿಕ ಪರಿಸ್ಥಿತಿ ಸದೃಢಗೊಳ್ಳಲು ಸಹಕಾರಿಯಾಗಿದೆ ಎಂದು ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿ ಕೇಶವ ಲಮಾಣಿ ಹೇಳಿದರು. ತಾಲ್ಲೂಕಿನ ಬೆಳಧಡಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಗ್ರಾಮ ಪಂಚಾಯತ ಮಟ್ಟದ ಕಾಯಕ ಬಂಧುಗಳ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿ ಕಾಯಕ ಬಂಧುಗಳ ಕರ್ತವ್ಯ ಹಾಗೂ ಹಕ್ಕುಗಳನ್ನು ಪ್ರತಿಯೊಬ್ಬರು ಪಾಲನೆ ಮಾಡಬೇಕು ಎಂದರು. ಯೋಜನೆಯ ಸ್ವರೂಪ, ಕಾಯ್ದೆ ರೂಪರೇಷೆಗಳು ಹಾಗೂ ಒಗ್ಗೂಡಿಸುವಿಕೆ ಬಗ್ಗೆ ವಿವರವಾದ ಮಾಹಿತಿ ನೀಡಿದರು.ಐಇಸಿ ಸಂಯೋಜಕ ವಿರೇಶ ಮಾತನಾಡಿ ಕಾಯಕ ಬಂಧುಗಳ ಜವಾಬ್ದಾರಿ ಮಹತ್ವದಾಗಿದ್ದು, ನಲವತ್ತು ಕೂಲಿಕಾರರ ಮೇಲೆ ಒಬ್ಬರನ್ನು ಮೇಟಿ ಎಂದು ನೇಮಕ ಮಾಡಲಾಗುವದು. ಉದ್ಯೋಗ ಬೇಡಿಕೆ ಅರ್ಜಿ ಸಂಖ್ಯೆ 6 ಮತ್ತು ಹಾಜರಾತಿ ತೆಗೆದುಕೊಳ್ಳುವ ಬಗೆ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಮಾಹಿತಿ ನೀಡಿದರು..ಇದೇ ಸಂರ್ದಭದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ, ಮಹಿಳಾ ಸಹಭಾಗಿತ್ವ ಹಾಗೂ ಕೂಲಿಕಾರರು ಕಾಮಗಾರಿ ಸ್ಥಳದಲ್ಲಿ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಮಾಹಿತಿ ನೀಡಲಾಯಿತು ಮತ್ತು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಜನರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಚರ್ಚಿಸಲಾಯಿತು.