ವಿದ್ಯಾರ್ಥಿ ವೇತನ ವಿತರಿಸಲು ಆಗ್ರಹಿಸಿ ಮಾ.1 ರಂದು ರಾಜ್ಯ ಮಟ್ಟದ ಸಮಾವೇಶ
ಬಳ್ಳಾರಿ 24: ಪದವಿ, ಇಂಜಿನಿಯರಿಂಗ್, ಸ್ನಾತಕೋತ್ತರ, ಪದವಿ ಹಾಗೂ ಮೆಡಿಕಲ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲು ಆಗ್ರಹಿಸಿ ಮತ್ತು ಸಂಯೋಜನೆಯ ಹೆಸರಿನಲ್ಲಿ 6000ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚುವ ಸರ್ಕಾರದ ನಿರ್ಧಾರವನ್ನು ಖಂಡಿಸಿ ರಾಜ್ಯ ಮಟ್ಟದ ಸಮಾವೇಶವನ್ನು ಮಾರ್ಚ್ 1 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಹಮ್ಮಿಕೊಳ್ಳಲಾಗಿದೆ. ಕಳೆದ ಮೂರು ವರ್ಷಗಳಿಂದ ಹಿಂದುಳಿದ ವರ್ಗಗಳ ಹಾಗು ಹಲವು ಪರಿಶಿಷ್ಟ ಜಾತಿ/ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪೂರ್ಣ ಪ್ರಮಾಣದಲ್ಲಿ ಬಿಡುಗಡೆಗೊಂಡಿಲ್ಲ. ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ಉನ್ನತ ಶಿಕ್ಷಣ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನದ ಮೇಲೆ ಅವಲಂಬಿತರಾಗಿದ್ದು, ಅವರ ಶೈಕ್ಷಣಿಕ ಜೀವನ ಬಿಕ್ಕಟ್ಟಿಗೆ ಸಿಲುಕಿದೆ. ಮತ್ತೊಂದೆಡೆ ’ಸಂಯೋಜನೆ’ ಹೆಸರಿನಲ್ಲಿ ರಾಜ್ಯ ಸರ್ಕಾರ 6 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿರುವುದರಿಂದ 50 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತಂತ್ರಕ್ಕೆ ಸಿಲುಕಲಿದ್ದಾರೆ. ಈ ಗಂಭೀರ ವಿಷಯಗಳ ಕುರಿತು ನಡೆಯುತ್ತಿರುವ ಸಮಾವೇಶದಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಸಮಾವೇಶಕ್ಕೆ ಭಾಷಣಕಾರರಾಗಿ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜಸ್ಟಿಸ್ ಸಂತೋಷ್ ಹೆಗ್ಡೆ, ಹಂಪಿ ಕನ್ನಡ ವಿವಿಯ ಮಾಜಿ ಉಪ ಕುಲಪತಿಗಳಾದ ಪ್ರೊ. ಎ ಮುರಿಗೆಪ್ಪ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯಾಧ್ಯಕ್ಷರಾದ ಮಾವಳ್ಳಿ ಶಂಕರ್ ಹಾಗು ಸಾಮಾಜಿಕ ಹೋರಾಟಗಾರರಾದ ಉಗ್ರನರಸಿಂಹಗೌಡ ಅವರು ಆಗಮಿಸಲಿದ್ದಾರೆ. ಂಋಖಓ ರಾಜ್ಯ ಖಜಾಂಚಿಯಾದ ಸುಭಾಷ್ ಮಾತನಾಡಲಿದ್ದು, ರಾಜ್ಯ ಉಪಾಧ್ಯಕ್ಷೆ ಅಭಯ ದಿವಾಕರ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.ಪ್ರಕಟಣೆ ಇವರಿಂದ ಕಂಬಳಿ ಮಂಜುನಾಥ ಜಿಲ್ಲಾ ಕಾರ್ಯದರ್ಶಿ ಎಐಡಿಎಸ್ಓ ಬಳ್ಳಾರಿ