ಸಮಾಜಸೇವಕ ಹಾಗೂ ಯುವಮುಖಂಡ ಮಂಜುನಾಥ.ಎಸ್.ಕಟ್ಟಿಮನಿ ಸರ್ಕಾರಕ್ಕೆ ಆಗ್ರಹ
ವಿಜಯಪುರ 4 : ಇತ್ತೀಚಿನ ದಿನಗಳಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಅಕ್ಷರಶಃ ಯಮಕಿಂಕರರಂತೆ ಕಂಡು ಬರುತ್ತಿರುವ ಈ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಕಠಿಣ ಕಾನೂನು ಜಾರಿಗೆ ತಂದು ನಾಡನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸಬೇಕು ಎಂದು ಜಿಲ್ಲೆಯ ಸಮಾಜಸೇವಕರೂ ಆಗಿರುವ ಯುವಮುಖಂಡ ಮಂಜುನಾಥ.ಎಸ್.ಕಟ್ಟಿಮನಿ ಅವರು ಸರ್ಕಾರಕ್ಕೆ ಬಲವಾಗಿ ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿಯೂ ಕೂಡ ಅನೇಕ ಕುಟುಂಬಗಳಿಗೆ ಮೈಕ್ರೋ ಫೈನಾನ್ಸ್ನಿಂದ ಬಹಳ ತೊಂದರೆ ಆಗುತ್ತಿದೆ. ಮೈಕ್ರೋ ಫೈನಾನ್ಸ್ ಸಂಬಂಧ ಈಗ ಇರುವ ನಿಯಮಗಳು ಅಷ್ಟು ಕಠಿಣವಾಗಿ ಇಲ್ಲ. ಬ್ಯಾಂಕ್ ನಿಯಮಗಳ ಪ್ರಕಾರ ಹಣ ರಿಕವರಿ ಮಾಡಲು ಕಾನೂನು ಇದೆ. ಅದೇ ರೀತಿ ಅವರ ರಕ್ಷಣೆ ಮಾಡಲು ಸಹ ಕಾನೂನು ಇದೆ. ಈಗ ಇರುವ ಕಾನೂನು ಸಾಕಾಗುತ್ತಿಲ್ಲ. ಅಲ್ಲದೇ ಇದು ಕಠಿಣವಾಗಿಯೂ ಇಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಕಠಿಣ ಕಾನೂನು ಮಾಡೋ ಅಗತ್ಯವಿದೆ. ಮೈಕ್ರೋ ಫೈನಾನ್ಸ್ಗಳ ದುರಾಡಳಿತವನ್ನು ಹತ್ತಿಕ್ಕಲು ಸದ್ಯ ಇರುವ ಕಾನೂನು ಪರಿಣಾಮಕಾರಿಯಾಗಿಲ್ಲ. ಹೀಗಾಗಿ ಸರ್ಕಾರ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಕಡಿವಾಣಕ್ಕೆ ಕೂಡಲೇ ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ರಾಜ್ಯದಾದ್ಯಂತ ಈ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳ ಹಾಗೂ ಆಟಾಟೋಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅಲ್ಲಲ್ಲಿ ಆತ್ಮಹತ್ಯೆ ಘಟನೆಗಳು ಕೂಡ ವರದಿಯಾಗಿವೆ. ರಾಜ್ಯದಾದ್ಯಂತ ಈ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳದ ಬಗ್ಗೆ ಸರ್ಕಾರಕ್ಕೆ ದೂರುಗಳು ಬಂದಿವೆ. ಬ್ಯಾಂಕ್ ನಿಯಮಾನುಸಾರ ಸಾಲ ವಸೂಲಾತಿ ಹಾಗೂ ಅವುಗಳ ರಕ್ಷಣೆಗೆ ಕಾನೂನು ಇದೆ. ಆದರೆ, ಮೈಕ್ರೋ ಫೈನಾನ್ಸ್ ಸಂಸ್ಥೆಗಳನ್ನು ಎದುರಿಸಲು ಸದ್ಯ ಇರುವ ಕಾನೂನುಗಳು ಪರಿಣಾಮಕಾರಿಯಾಗಿಲ್ಲ ಮತ್ತು ಅವುಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಅವು ಕಠಿಣವಾಗಿಲ್ಲ. ಭವಿಷ್ಯದಲ್ಲಿ, ಮೈಕ್ರೋ ಫೈನಾನ್ಸ್ಗಳನ್ನು ನಿಯಂತ್ರಿಸಲು ಕಟ್ಟುನಿಟ್ಟಾದ ಕಾನೂನುಗಳನ್ನು ರಚಿಸುವ ಅವಶ್ಯಕತೆಯಿದೆ ಎಂದು ಅವರು ವಿವರಿಸಿದ್ದಾರೆ.
ವಸೂಲಿ ಮಾಡುವ ಸಮಯದಲ್ಲಿ ಏನಾಗುತ್ತದೆ ಎಂದರೆ, ಜನರಿಂದ ಅಂಡರ್ಟೇಕಿಂಗ್ ಮಾಡಿದ ನಂತರವೇ ಸಾಲವನ್ನು ನೀಡಲಾಗುತ್ತದೆ. ಬ್ಯಾಂಕ್ನಿಂದ ಸಾಲ ಪಡೆಯುವಾಗಲೂ, ಅವರು ಅನೇಕ ಸಹಿಗಳನ್ನು ಪಡೆಯುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ, ಆ ಸಹಿಗಳನ್ನು ಪಡೆಯುವ ಉದ್ದೇಶ ಏನೆಂದು ಗ್ರಾಹಕರಿಗೆ ತಿಳಿದಿರುವುದಿಲ್ಲ. ಅದೊಂದು ಬದ್ಧತೆ ಮತ್ತು ಅದರ ಆಧಾರದ ಮೇಲೆಯೇ ಕಂಪನಿಗಳು ಸಾಲಗಾರರ ಮನೆಗಳಿಗೆ ತೆರಳಿ ದಾಳಿ ನಡೆಸುತ್ತವೆ. ಆದ್ದರಿಂದ ಇದಕ್ಕೆ ಕಾನೂನಿನಡಿಯಲ್ಲಿ ಸೂಕ್ತ ಪರಿಹಾರವನ್ನು ಕಂಡುಹಿಡಿಯಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಇನ್ನು ಇದೆಲ್ಲದರ ಹಿನ್ನೆಲೆಯಲ್ಲಿ ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರೂ ಕೂಡ ಈ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಈಗಿರುವ ಕಾನೂನಿಗೆ ತಿದ್ದುಪಡಿ ತರಲಾಗುವುದು. ಅಲ್ಲದೇ ಪರಿಣಾಮಕಾರಿ ಕಾನೂನಿನ ಕೊರತೆಯ ಕುರಿತೂ ಚರ್ಚಿಸುತ್ತೇವೆ ಎಂದು ಹೇಳಿರುವುದು ಅನೇಕರಿಗೆ ಹೊಸ ಭರವಸೆ ಮೂಡಿಸಿದೆ ಎಂದೂ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.