ಏರ್ ಗನ್ ತಾಗಿ ಬಾಲಕ ಸಾವು

ಏರ್ ಗನ್ ತಾಗಿ ಬಾಲಕ ಸಾವು Boy dies after being hit by air gun

ಏರ್ ಗನ್ ತಾಗಿ ಬಾಲಕ ಸಾವು 

ಕಾರವಾರ 05: ತೋಟದ ಮನೆಯ ಅಂಗಳದಲ್ಲಿ ಮಕ್ಕಳು ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಅಣ್ಣನ  ಕೈಯ್ಯಿಂದ ಏರ್ ಗನ್ ಗುಂಡು ಹಾರಿ ಸಹೋದರನ ಎದೆಗೆ ತಾಗಿ ಆತ  ಮೃತಪಟ್ಟ ದುರ್ಘಟನೆ  ಶುಕ್ರವಾರ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸೋಮನಹಳ್ಳಿಯಲ್ಲಿ ನಡೆದಿದೆ. 

ಶಿರಸಿಯ ಸೋಮನಳ್ಳಿಯ ರಾಘವೇಂದ್ರ ಕೇಶವ ಹೆಗಡೆ ಎಂಬುವರ  ತೋಟದ ಮನೆಯಲ್ಲಿ  ಕೂಲಿ ಕಾರ್ಮಿಕರಾಗಿದ್ದ  ಬಸಪ್ಪ ಉಂಡಿ ಕುಟುಂಬ ನೆಲಸಿತ್ತು. ಇವರ   ಮಕ್ಕಳು  ಆಟವಾಡುತ್ತಿದ್ದ ಸಂದರ್ಭದಲ್ಲಿ ದುರ್ಘಟನೆ ನಡೆದಿದೆ.  ಅಣ್ಣ ತಮ್ಮ ತೋಟದ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ 7 ವರ್ಷದ ತಮ್ಮನಿಂದ ಆಕಸ್ಮಿಕವಾಗಿ ಗುಂಡು ಹಾರಿದ್ದು, ಪರಿಣಾಮ ಕ್ಷಣಾರ್ಧದಲ್ಲಿ  ಅಣ್ಣ ಮೃತಪಟ್ಟ. ಮೃತ ಬಾಲಕ  ಕರಿಯಪ್ಪ (9)   ಎಂದು ತಿಳಿದು ಬಂದಿದೆ. ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.  

ಘಟನೆ ಸಿಸಿಟಿವಿಯಲ್ಲಿ  ದಾಖಲಾಗಿದೆ. ಬಸಪ್ಪ ಉಂಡಿ ಹಾವೇರಿ ಜಿಲ್ಲೆಯ ಹಿರೇ ಕಿತ್ತೂರು ಗ್ರಾಮದವರು. ಕೂಲಿ ಕಾರ್ಮಿಕರಾಗಿ ಸೋಮನಹಳ್ಳಿಯಲ್ಲಿ ನೆಲಸಿದ್ದರು.  ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸಿಪಿಐ ಶಶಿಕಾಂತ ವರ್ಮಾ, ಪಿಎಸ್‌ಐ ಸಂತೋಷ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ.