‘ಮೌಲ್ಯಗಳು ವಿದ್ಯಾರ್ಥಿಗಳ ಅಂತರಂಗದ ಜೀವನದಲ್ಲಿ ಹುದುಗಿರುವ ಸಂಪತ್ತಾಗಿದೆ’
ಲೋಕದರ್ಶನ ವರದಿ
ಧಾರವಾಡ 31: ವಿದ್ಯಾರ್ಥಿಗಳ ನೈತಿಕ ಜೀವನಕ್ಕೆ ಮೌಲ್ಯಗಳೇ ಚೌಕಟ್ಟು. ಮೌಲ್ಯಗಳು ವಿದ್ಯಾರ್ಥಿಗಳ ಅಂತರಂಗದ ಜೀವನದಲ್ಲಿ ಹುದುಗಿರುವ ಸಂಪತ್ತಾಗಿದೆ ಎಂದು ಶಿಕ್ಷಣ ತಜ್ಞ ಡಾ. ಎಂ.ವೈ. ಸಾವಂತ ಅಭಿಪ್ರಾಯಪಟ್ಟರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಶತಾಯುಷಿ ಲಿ. ಜಿ. ಜಿ. ದೊಡವಾಡ ಇವರ ತಂದೆ ಪೂಜ್ಯ ಶರಣ ಲಿಂ. ಗುರುಪಾದ ದುಂಡಪ್ಪ ದೊಡವಾಡ ದತ್ತಿ ಕಾರ್ಯಕ್ರಮದಲ್ಲಿ ‘ಮೌಲ್ಯಯುತ ಶಿಕ್ಷಣ ಇಂದಿನ ಅಗತ್ಯತೆ’ ಕುರಿತು ಉಪನ್ಯಾಸ ನೀಡಿದರು.
ಮೌಲ್ಯ ಶಿಕ್ಷಣವನ್ನು ಕುಟುಂಬದಲ್ಲಿ ಮಕ್ಕಳಿಗೆ ಬಾಲ್ಯಾವಸ್ಥೆಯಲ್ಲಿ ತಾಯಿ ಬೆಳೆಸಬೇಕು. ಪ್ರೀತಿ, ಶಾಂತಿ, ಕರುಣೆ, ಸಹಬಾಳ್ವೆ, ಸತ್ಯ, ಸೌಹಾರ್ಧತೆ ಮುಂತಾದ ಜೀವನ ಮೌಲ್ಯಗಳನ್ನು ಎಳೆಯ ವಯಸ್ಸಿನಲ್ಲಿ ಬೆಳೆಸಿದರೆ ಮಕ್ಕಳು ಭವಿಷ್ಯದಲ್ಲಿ ಭರವಸೆಯ ವ್ಯಕ್ತಿಗಳಾಗಬಹುದು. ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರು ತಮ್ಮ ವೃತ್ತಿಧರ್ಮ ಕಾಪಾಡಿಕೊಳ್ಳುವುದರೊಂದಿಗೆ ಒಳ್ಳೆಯ ನಡೆ, ನುಡಿ, ಪ್ರಾಮಾಣಿಕತೆಯನ್ನು ಮಕ್ಕಳಲ್ಲಿ ಬೆಳೆಸಬೇಕು.
ಇಂದಿನ ಸಂಕೀರ್ಣ ಪರಿಸ್ಥಿತಿಯಲ್ಲಿ ನೈತಿಕ ಮೌಲ್ಯಗಳ ಅಧಃಪತನವಾಗುತ್ತಿರುವುದು ವಿಷಾದನೀಯ. ದಿನ ಬೆಳಗಾದರೆ ಪತ್ರಿಕೆಯಲ್ಲಿ ಸಮಾಜದಲ್ಲಿ ನಡೆಯಬಾರದಂತಹ ದುಷ್ಕೃತ್ಯಗಳ ವರದಿಗಳನ್ನೇ ಓದುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆಲ್ಲಾ ಕಾರಣ ಮೌಲ್ಯರಹಿತ ಶಿಕ್ಷಣದ ವಿಧಾನವಾಗಿದೆ. ಸತ್ಯ ಮೌಲ್ಯ ಶಿಕ್ಷಣದ ಮೊದಲ ಹೆಜ್ಜೆಯಾದರೆ, ಪ್ರಾಮಾಣಿಕತೆ ಎರಡನೇ ಮೌಲ್ಯವಾಗಿದೆ. ಪ್ರಾಮಾಣಿಕತೆ ನಮ್ಮ ಮುಂದೆ ಮಾತ್ರವಲ್ಲ ಬೆನ್ನು ಹಿಂದೆಯೂ ಇದ್ದರೆ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ. ಬಸವಾದಿ ಶರಣರ ವಚನಗಳಲ್ಲಿಯೂ ಸಹ ಜೀವನ ಮೌಲ್ಯಗಳಿವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕರಣ ದೊಡವಾಡ ಮಾತನಾಡಿ, ದೊಡವಾಡ ಕುಟುಂಬಕ್ಕೆ ಸುದೀರ್ಘವಾದ ಇತಿಹಾಸವಿದೆ. ನಮ್ಮೆಲ್ಲಾ ಹಿರಿಯರು ಸದಾಕಾಲ ಸಮಾಜಮುಖಿ ಕಾರ್ಯ ಮಾಡುತ್ತಾ ಬಂದವರು. ಸಾರ್ವಜನಿಕ ಜೀವನದಲ್ಲೂ ಆಧ್ಯಾತ್ಮಿಕ ಚಿಂತನೆಯ ಕುಟುಂಬವಾಗಿದೆ. ನಮ್ಮ ಹಿರಿಯರು ಯೋಜನಾ-ಯೋಚನಾ ಬದ್ಧ ಜೀವನ ಕ್ರಮ ಅನುಸರಿಸಿದವರಾಗಿದ್ದರು. ಅವರು ಸಾಗಿದ ಮಾರ್ಗದಲ್ಲಿ ನಾವೂ ಸಹ ಮುನ್ನಡೆಯುತ್ತಿದ್ದೇವೆ ಎಂದು ಹೇಳಿದರು.
ವೀರಣ್ಣ ಒಡ್ಡೀನ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶೈಲಜಾ ಅಮರಶೆಟ್ಟಿ ನಿರ್ವಹಿಸಿದರು. ಗುರು ಹಿರೇಮಠ ವಂದಿಸಿದರು.
ಬಸವಪ್ರಭು ಹೊಸಕೇರಿ, ಶಶಿಭೂಷಣ ದೊಡವಾಡ, ವಿಜಯಾನಂದ ದೊಡವಾಡ, ವಿನಯ ದೊಡವಾಡ, ಜಯದೇವ ದೊಡವಾಡ, ಸುಮಂಗಲಾ ಪಾಟೀಲ, ಚಿಂತನ ಹತ್ತಿಕಾಳ, ಶಿವಾನಂದ ಹೂಗಾರ, ನಿಂಗಪ್ಪ ಮಾಯಕೊಂಡ ಸೇರಿದಂತೆ ಮುಂತಾದವರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 