ಉಚ್ಛಾಟನೆಯಿಂದ ಯತ್ನಾಳ ಹತಾಷ: ಎಂ.ಸಿ.ಮುಲ್ಲಾ

ಉಚ್ಛಾಟನೆಯಿಂದ ಯತ್ನಾಳ ಹತಾಷ: ಎಂ.ಸಿ.ಮುಲ್ಲಾ Yatnal is frustrated by the expulsion: M.C.Mulla

ಅಧಿಕಾರ ಸಿಕ್ಕಾಗ ಏನೂ ಮಾಡದ ಯತ್ನಾಳ ಪಲಾಯನವಾದಿ 

ವಿಜಯಪುರ 17: ತಮ್ಮ ನಾಲಿಗೆ ಸಂಸ್ಕೃತಿಯಿಂದ ಬಿಜೆಪಿ ಪಕ್ಷದಿಂದ ಉಚ್ಛಾಟನೆಗೊಂಡು ಹತಾಷರಾಗಿರುವ ಶಾಸಕ ಯತ್ನಾಳ ಅವರು, ಜಿಲ್ಲೆಯ ಅಭಿವೃದ್ಧಿಪರ ಚಿಂತನೆಯ ರಾಜಕೀಯ ನಾಯಕರು, ಸಚಿವರಾದ ಶಿವಾನಂದ ಪಾಟೀಲ ಅವರ ವಿರುದ್ಧ ವ್ಯರ್ಥ ಆರೋಪ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಎಂ.ಸಿ.ಮುಲ್ಲಾ ಟೀಕಿಸಿದ್ದಾರೆ. 

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಮುಲ್ಲಾ ಅವರು, ಜಿಲ್ಲೆಯಲ್ಲಿ ಶಿವಾನಂದ ಪಾಟೀಲ ಅವರದ್ದು ಏನೂ ನಡೆಯದಂತಾಗಿ ಹತಾಷರಾಗಿದ್ದಾರೆ ಎಂದು ಯತ್ನಾಳ ಟೀಕಿಸುವ ಮೂಲಕ ತಮ್ಮವಅಭಿವೃದ್ಧಿ ಹೀನ ಮನಸ್ಥಿತಿ ಪ್ರದರ್ಶನ ಮಾಡುತ್ತಿದ್ದಾರೆ. ಶಿವಾನಂದ ಪಾಟೀಲ ಅವರು ಶಾಸಕರಾಗಿ, ವಿವಿಧ ಖಾತೆಗಳ ಸಚಿವರಾಗಿ ಜಿಲ್ಲೆಗೆ, ರಾಜ್ಯಕ್ಕೆ ಮಾಡಿರುವ ಕೆಲಸಗಳನ್ನು ಸಹಿಸದೇ ಹತಾಷರಾಗಿ ರಾಜಕೀಯ ಪ್ರೇರಿತ ಟೀಕೆ ಮಾಡುತ್ತಿದ್ದಾರೆ. ಯತ್ನಾಳ ಅವರು ಶಿವಾನಂದ ಪಾಟೀಲರು ಮಾಡಿರುವ ಕೆಲಸಗಳನ್ನು ಕಣ್ತೆರೆದು ನೋಡಲಿ ಎಂದು ಮುಲ್ಲಾ ಆಗ್ರಹಿಸಿದ್ದಾರೆ. 

ಅಧಿಕಾರ ಸಿಕ್ಕಾಗ ಒಂದೂ ಅಭಿವೃದ್ಧಿ ಮಾಡದ ಯತ್ನಾಳ, ಕೇಂದ್ರದಲ್ಲಿ ರೈಲ್ವೇ ಸಚಿವರಾಗಿದ್ದಾಗ ಜಿಲ್ಲೆಯಲ್ಲಿ ಒಂದೂ ರೈಲ್ವೇ ಹೊಸ ನಿಲ್ದಾಣ ನಿರ್ಮಿಸಿಲ್ಲ. ಒಂದೇ ಒಂದು ರೈಲ್ವೇ ಮೇಲ್ಸೇತುವೆ ಹಾಗೂ ಕೆಳ ಸೇತುವೆ ಕಟ್ಟಿದ ಒಂದೂ ಉದಾಹರಣೆ ಇಲ್ಲ. ಒಂದೂ ಹೊಸ ರೈಲು ಓಡಿಸದೇ ಮಾತಿನಲ್ಲೇ ರೈಲು ಓಡಿಸಿ, ಜಿಲ್ಲೆಯ ಜನರಿಗೆ ರೀಲು ಬಿಟ್ಟಿದ್ದರು. ಇಂಥ ದುರ್ಬಲ, ಅಸಹಾಯಕ ಯತ್ನಾಳ ಅವರು ಸಚಿವರಾದ ಶಿವಾನಂದ ಪಾಟೀಲ ಅವರ ತಾಕತ್ತಿನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಮುಲ್ಲಾ ಎದಿರೇಟು ನೀಡಿದ್ದಾರೆ. 

ಮಾತೆತ್ತಿದರೆ ನಾನು ಪಾಜಪೇಯಿ ಅವರ ಸರ್ಕಾರದಲ್ಲಿ ಮಂತ್ರಿಯಾಗಿದ್ದೆ ಎಂದು ಮುತ್ಸದ್ಧಿ ರಾಜಕೀಯ ನೇತಾರನ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿರುವ ಯತ್ನಾಳ, ಕೇಂದ್ರದಲ್ಲಿ ಜವಳಿ ಸಚಿವರಾಗಿ ಜಿಲ್ಲೆಗೆ ಮಾತ್ರವಲ್ಲ ಕರ್ನಾಟಕ ರಾಜ್ಯಕ್ಕೆ ನೀಡಿದ ಕೊಡುಗೆ ಏನು ಎಂಬುದನ್ನು ಜನತೆಯ ಮುಂದಿಡಲಿ ಎಂದು ಮುಲ್ಲಾ ಸವಾಲು ಎಸೆದಿದ್ದಾರೆ. 

ನನಗೆ ಖಾಸಗಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವ ಶಕ್ತಿ ಎನ್ನುತ್ತಲೇ ಯತ್ನಾಳ ಪಿಪಿಪಿ ಮಾದರಿ ವೈದ್ಯಕೀಯ ಕಾಲೇಜು ನಡೆಸುವಷ್ಟು ಶಕ್ತಿ ಇದೆ ಎನ್ನುತ್ತ ತಮ್ಮ ಮನದಿಂಗಿತ ವ್ಯಕ್ತಪಡಿಸಿದ್ದೀರಿ. ಈ ಮೂಲಕ ಜಿಲ್ಲೆಯ ಜನಹಿತದ ಸರ್ಕಾರಿ ಕಾಲೇಜನ್ನು ಕಬಳಿಸುವ ಸ್ವಾರ್ಥಿ ಮನಸ್ಥಿತಿ ಬಹಿರಂಗ ಮಾಡಿದ್ದೀರಿ ಎಂದು ವಾಗ್ದಾಳಿ ನಡೆಸಿದ್ದಾರೆ. 

ಮಹಾನಗರ ಪಾಲಿಕೆ ಚುನಾಯಿತ ಪ್ರತಿನಿಧಿಗಳಿದ್ದರೂ ಅಧಿಕಾರ ವಿಕೇಂದ್ರೀಕರಣ ಆಡಳಿತದ ನಡೆಸದಂತೆ ರಾಜಕೀಯ ಕುಯುಕ್ತಿ ಮಾಡುತ್ತಲೇ ಬಂದಿದ್ದೀರಿ. ಬಡ ಮಕ್ಕಳ ವೈದ್ಯಕೀಯ ಶಿಕ್ಷಣ ಸಿಗಬೇಕೆಂಬ ಆಶಯದ ಶಿವಾನಂದ ಪಾಟೀಲರನ್ನು ವಿರೋಧಿಸುವುದು ಎಂದರೆ ಜಿಲ್ಲೆಯ ಜನತೆಯ ಭಾವನೆಯನ್ನೇ ವಿರೋಧಿಸಿದಂತೆ. ಸಾಮರಸ್ಯದ ವಿಜಯಪುರ ಜಿಲ್ಲೆಯಲ್ಲಿ ಮತೀಯ ಗಲಭೆಗಳಿಗೆ ಪ್ರಚೋದನೆ ನೀಡುವ ನಿಮ್ಮಂಥವರನ್ನು ನಗರ ಜನತೆ ಅರಿಯದಷ್ಟು ಮೂರ್ಖರಲ್ಲ ಎಂದು ಮುಲ್ಲಾ ಟೀಕಿಸಿದ್ದಾರೆ. 

ಸಂಘ ಪರಿವಾರದ ಹಿನ್ನೆಲೆಯ ಎಬಿವಿಪಿ ಪಿಪಿಪಿ ಮಾದರಿ ವೈದ್ಯಕೀಯ ಕಾಲೇಜು ವಿರೋಧಿಸಿ ಬೀದಿಗೆ ಇಳಿದು ಖಂಡಿಸಿದೆ. ಎಬಿವಿಪಿ ಸಂಘಟನೆ ಏನು ಸಚಿವರಾದ ಶಿವಾನಂದ ಪಾಟೀಲ ಅವರು ಹುಟ್ಟು ಹಾಕಿದ್ದೇ ಎಂದು ಪ್ರಶ್ನಿಸಿರುವ ಮುಲ್ಲಾ, ಪಲಾಯನವಾದಿ ಯತ್ನಾಳ ಈ ವರೆಗೆ ಹಿಟ್ ಎಂಡ್ ರನ್ ಮಾಡುತ್ತಲೇ ಬಂದಿದ್ದಾರೆ. ಜನತೆ ಕೇಳುವ ಯಾವೊಂದು ಪ್ರಶ್ನೆಗೂ ಈ ವರೆಗೆ ಪ್ರಾಮಾಣಿಕ ಉತ್ತರ ನೀಡುವ ಶಕ್ತಿ ತೋರಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.