ಲೋಕದರ್ಶನ ವರದಿ
ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಜಲ ದಿನಾಚರಣೆ
ಯರಗಟ್ಟಿ, 25 : ಬೇಸಿಗೆ ಕಾಲದಲ್ಲಿ ನೀರಿಗಾಗಿ ಪ್ರಾಣಿ ಪಕ್ಷಿಗಳು ಪರಿತಪಿಸುವ ಸಾಧ್ಯತೆ ಇದೆ. ಮಾನವೀಯ ದೃಷ್ಠಿಯಿಂದ ಪಕ್ಷಿಗಳಿಗೆ ನೀರಿಡುವ ಕೆಲಸ ಮಾಡಬೇಕು ಎಂದು ಎಸ್ಡಿಎಂಸಿ ಸದಸ್ಯೆ ಸುಜಾತಾ ಸರದಾರ ಹೇಳಿದರು.
ಸಮೀಪದ ತಲ್ಲೂರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿಗೆ ನೀರು ಹಾಕುವದರ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಬೇಸಿಗೆಯಲ್ಲಿ ಪಕ್ಷಿಗಳು ನೀರಿಗಾಗಿ ಅಲೆದಾಡುತ್ತವೆ. ಒಂದು ಗುಟುಕು ನೀರು ಪಕ್ಷಿಗಳಿಗೆ ದೊರೆತರೆ ಅವುಗಳ ಜೀವ ಉಳಿಯುತ್ತದೆ. ಇದಕ್ಕಾಗಿ ಒಂದು ಪಾತ್ರೆಯಲ್ಲಿ ನೀರು, ಧಾನ್ಯಗಳನ್ನು ಇಡಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಮುಖ್ಯ ಶಿಕ್ಷಕ ಡಿ.ಡಿ.ಭೋವಿ ಮಾತನಾಡಿ, ಕೆರೆ, ಹಳ್ಳ, ಕೊಳ್ಳಗಳು ಬತ್ತುವದರಿಂದ ಪಕ್ಷಿಗಳು ನೀರು ಹುಡುಕಿಕೊಂಡು ಜನವಸತಿ ಪ್ರದೇಶಗಳತ್ತ ಬರುತ್ತವೆ. ನಾವು ಇಟ್ಟ ನೀರಿನಿಂದ ಪಕ್ಷಿಗಳ ಜೀವ ಉಳಿಸಲು ಸಾಧ್ಯ ಎಂದು ಹೇಳಿದರು.
ಎಸ್ಡಿಎಂಸಿ ಸದಸ್ಯೆ ಹುಸೇನಬಿ ಕುದರಿ, ಯಶೋಧಾ ಕಾಶಪ್ಪನವರ, ಪವಿತ್ರಾ ಈಟಿ, ಶಿಕ್ಷಕ ಎಸ್.ಎಂ.ಮಾಳೈನವರ, ಎಂ.ಎ.ಬಸರಿಮರದ, ಸಿದ್ದು ಹಂಜಿ, ಎಸ್.ಎಫ್.ಮುರಗನ್ನವರ, ವಿಜಯಲಕ್ಷ್ಮಿ ಕಳಸನ್ನವರ, ಆರ್.ಎಚ್.ಅತ್ತಾರ, ಲಕ್ಷ್ಮಿ ರಾಯನ್ನವರ, ಅಶ್ವಿನಿ ಹಿರೇಮಠ, ಚೆನ್ನಮ್ಮ ತುಪ್ಪದ, ಪ್ರೀತಿ ಪಾಟೀಲ, ಪುಷ್ಪಾ ಬಳ್ಳಾರಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.