ಲೋಕದರ್ಶನ ವರದಿ
ನ್ಯಾಯಾಲಯದ ಆವರಣದಲ್ಲಿ ವಿಶ್ವ ಭೂಮಿ ದಿನ ಆಚರಣೆ
ರಾಯಬಾಗ, 22: ಜೀವವೈವಿಧ್ಯವುಳ್ಳ ಏಕೈಕ ಗ್ರಹವಾದ ಭೂಮಿಯನ್ನು ನಮ್ಮ ಮುಂದಿನ ಪೀಳಿಗೆಗಳಿಗೆ ಸಂರಕ್ಷಿಸುವುದು ಪ್ರತಿಯೊಬ್ಬರ ಹೊಣೆಯಾಗಿದೆ ಎಂದು ಹೆಚ್ಚುವರಿ ದಿವಾಣಿ ನ್ಯಾಯಾಧೀಶ ದಾನಪ್ಪ ಹೇಳಿದರು.
ಮಂಗಳವಾರ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ವಿಶ್ವ ಭೂಮಿ ದಿನ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಬಾರಿ ವಿಶ್ವ ಭೂಮಿ ದಿನವನ್ನು ನಮ್ಮ ಸಾಮರ್ಥ್ಯ ನಮ್ಮ ಭೂಮಿ ಧ್ಯೇಯವಾಕ್ಯದೊಂದಿಗೆ ಜಾಗತಿಕಮಟ್ಟದಲ್ಲಿ ಆಚರಿಸಲಾಗುತ್ತಿದೆ. ಶುದ್ಧ ಗಾಳಿ, ಮಣ್ಣು, ಪರಿಸರ ಸಂರಕ್ಷಣೆಗೆ ಪಣತೊಟ್ಟು, ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣಕ್ಕೆ ಎಲ್ಲರೂ ಕಾರ್ಯೋನ್ಮುಖರಾಗೋಣ ಎಂದು ಕರೆ ನೀಡಿದರು.
ಪ್ರಧಾನ ದಿವಾಣಿ ನ್ಯಾಯಾಧೀಶೆ ಪ್ರಿಯಾ ಭಟ್ಟಡ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಕೀಲರ ಸಂಘದ ಅಧ್ಯಕ್ಷ ಪಿ.ಎಮ್.ದರೂರ ಅಧ್ಯಕ್ಷತೆಯನ್ನು ವಹಿಸಿದ್ದರು. ಸ.ಸ.ಅಭಿಯೋಜಕರಾದ ಛಾಯಾ ಬೇಡಕಿಹಾಳೆ, ಹನಮಂತ ಅಚಮಟ್ಟಿ, ವಕೀಲರ ಸಂಘದ ಕಾರ್ಯದರ್ಶಿ ಎಸ್.ಬಿ.ಬಿರಾದಾರಪಾಟೀಲ, ಸಹಕಾರ್ಯದರ್ಶಿ ಬಿ.ಕೆ.ಶಿಂಗಾಡೆ, ವಕೀಲರಾದ ಡಿ.ಎಚ್.ಯಲ್ಲಟ್ಟಿ, ಟಿ.ಕೆ.ಶಿಂಧೆ, ಎನ್.ಎಮ್.ಯಡವನ್ನವರ, ಪಿ.ಎಸ್.ಕುರಬೆಟ್ಟ ಸೇರಿ ಅನೇಕರು ಇದ್ದರು.