ಮಹಿಳೆಯರು ತಮ್ಮ ಹಕ್ಕುಗಳ ಅರಿವು ಪಡೆದು ಮುಖ್ಯವಾಹಿನಿಗೆ ಬರಲಿ: ದಾನೇಶ ಅವಟಿ

ಮಹಿಳೆಯರು ತಮ್ಮ ಹಕ್ಕುಗಳ ಅರಿವು ಪಡೆದು ಮುಖ್ಯವಾಹಿನಿಗೆ ಬರಲಿ: ದಾನೇಶ ಅವಟಿ  Women should be aware of their rights and come into the mainstream: Danesh Avati

ಲೋಕದರ್ಶನ ವರದಿ 

ವಿಜಯಪುರ 13:  ಮಹಿಳೆಯರು ಯಾವುದೇ ರೀತಿಯ ಶೋಷಣೆಗೆ ಒಳಗಾಗದೆ, ತಮ್ಮ ಸಂವಿಧಾನಬದ್ಧ ಹಕ್ಕುಗಳು ಹಾಗೂ ಸೌಲಭ್ಯಗಳ ಬಗ್ಗೆ ಅರಿವು ಹೊಂದಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ನ್ಯಾಯವಾದಿ ದಾನೇಶ ಅವಟಿ ಹೇಳಿದರು.  

ನಗರದ ಸಿಂದಗಿ ನಾಕಾ ಜೈ ಕರ್ನಾಟಕ ಕಾಲೋನಿಯಲ್ಲಿ ಅನೌಪಚಾರಿಕ ಶಿಕ್ಷಣ ಸಂಸ್ಥೆ ವತಿಯಿಂದ ನಗರ ಸ್ಲಂ ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟದ ಸದಸ್ಯರಿಗಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.  

ಮಹಿಳೆಯರಿಗಾಗಿ ಇರುವ ವಿವಿಧ ಕಾನೂನುಗಳು ಹಾಗೂ ಸರ್ಕಾರದ ಸೌಲಭ್ಯಗಳ ಕುರಿತು ಮಾಹಿತಿ ನೀಡಿದ ಅವರು, ಹಕ್ಕುಗಳ ಅರಿವು ಮತ್ತು ಶಿಕ್ಷಣದಿಂದ ಮಹಿಳೆಯರ ಸಬಲೀಕರಣ ಸಾಧ್ಯ ಎಂದು ತಿಳಿಸಿದರು.

ಕಾರ್ಯಕ್ರಮದ ಸಂಯೋಜಕಿ ಗೀತಾ ಕಟ್ಟಿ ಮಾತನಾಡಿ, ಮಹಿಳೆಯರು ಶಿಕ್ಷಣ, ಕಾನೂನು ಅರಿವು ಹಾಗೂ ಸರ್ಕಾರಿ ಯೋಜನೆಗಳ ಮಾಹಿತಿಯ ಕೊರತೆಯಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅನೌಪಚಾರಿಕ ಶಿಕ್ಷಣ ಸಂಸ್ಥೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.  

ಕಾರ್ಯಕ್ರಮಕ್ಕೂ ಮುನ್ನ ತೇಜಸ್ವಿನಿ ವಗಾನವರ ಅವರು ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ಆರತಿ, ಭಾರತಿ, ರಿಯಾನಾ, ರೇಷ್ಮಾ, ಹೀನಾ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಲಕ್ಷ್ಮೀ ಸಾವನೂರ ನಿರೂಪಿಸಿದರು. ಶಬಾನಾ ಕುಣಬಿ ವಂದಿಸಿದರು.