ಬೆಳಗಾವಿ 17: ಕೃಷಿ ಮಟ್ಟದಲ್ಲಿ ಸೌರ ಆಧಾರಿತ ಸಂಸ್ಕರಣಾ ಉಪಕರಣಗಳ ಅಗತ್ಯವಿದೆ. ಇವು ವೈಯಕ್ತಿಕ ರೈತರ ಕೃಷಿ ಉತ್ಪನ್ನಗಳ ಸಂಸ್ಕರಣೆಯನ್ನು ಉತ್ತೇಜಿಸುತ್ತವೆ ಮತ್ತು ದ್ವಿತೀಯ ಕೃಷಿಯನ್ನು ಬೆಂಬಲಿಸುತ್ತವೆ. ಕೃಷಿ ಕುಟುಂಬಗಳ ಆರ್ಥಿಕ ಸ್ಥಿರತೆಯನ್ನು ಹೆಚ್ಚಿಸುತ್ತವೆ ಎಂದು ಮಣ್ಣು ವಿಜ್ಞಾನಿ ಎಸ್. ಎಂ. ವಾರದ ಅವರು ಅಭಿಪ್ರಾಯ ಪಟ್ಟರು.
ಮತ್ತಿಕೊಪ್ಪದ ಐಸಿಎಆರ್- ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರ, ಬೆಂಗಳೂರಿನ ಸೆಲ್ಕೋ ಫೌಂಡೇಶನ್ ಮತ್ತು ಬೆಳಗಾವಿಯ ಸಿದ್ಧಗಿರಿ ಸಾವಯವ ಕೃಷಿಕರ ಬಳಗದ ಸಹಯೋಗದೊಂದಿಗೆ ಕೆವಿಕೆ ಆವರಣದಲ್ಲಿ ಡಿಆರ್ಇ ಆಧಾರಿತ (ವಿಕೇಂದ್ರೀಕೃತ ನವೀಕರಿಸಬಹುದಾದ ಇಂಧನ) ಆನ್-ಫಾರ್ಮ್ ಸಂಸ್ಕರಣಾ ತಂತ್ರಜ್ಞಾನಗಳ ಕುರಿತು ದಿ. 16ರಂದು ಆಯೋಜಿಸಲಾಗಿದ್ದ ಜಾಗೃತಿ ಮತ್ತು ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕೃಷಿ ಉತ್ಪನ್ನಗಳು ಮತ್ತು ಅವಶ್ಯಕತೆಗಳ ಆಧಾರದ ಮೇಲೆ ಸೂಕ್ತವಾದ ಉಪಕರಣಗಳನ್ನು ಆಯ್ಕೆ ಮಾಡಲು ಮತ್ತು ಲಾಭದಾಯಕತೆಯನ್ನು ಹೆಚ್ಚಿಸಲು ಅವುಗಳನ್ನು ಬಳಸಲು ಅವರು ಸೂಚಿಸಿದರು.
ಸಸ್ಯ ಸಂರಕ್ಷಣೆ ವಿಜ್ಞಾನಿ ಡಾ. ಎಸ್.ಎಸ್. ಹಿರೇಮಠ ಸ್ವಾಗತಿಸಿ ಸಸ್ಯ ಸಂರಕ್ಷಣೆ ಚಟುವಟಿಕೆಯಲ್ಲಿಯೂ ಕೂಡ ಸೌರ ಆಧಾರಿತ ಉಪಕರಣಗಳನ್ನು ಬಳಸಿಕೊಳ್ಳಲು ಸಲಹೆ ನೀಡಿದರು.
ಸೆಲ್ಕೋ ಫೌಂಡೇಶನ್ ತಂಡದ ಮಾಯಪ್ಪಾ ಮತ್ತು ನವ್ಯಾ ಅವರು ಕೃಷಿ ಕ್ಷೇತ್ರದಲ್ಲಿನ ಕಾರ್ಯಾಚರಣೆಗಳು ಮತ್ತು ಕೃಷಿ ಸಂಸ್ಕರಣೆಗೆ ಅನ್ವಯವಾಗುವ ವಿವಿಧ ಡಿ.ಆರ್.ಇ-ಆಧಾರಿತ ತಂತ್ರಜ್ಞಾನಗಳ ಬಗ್ಗೆ ವಿವರಿಸಿದರು. ಭೀಮಸೇನ ಜಿರಲಿ, ರವಿ ಕುರುಬೆಟ ಮತ್ತು ಈರನಗೌಡ ಪಾಟೀಲ ಮತ್ತಿತರರು ಭಾಗವಹಿಸಿದ್ದರು.
ಡಿ.ಆರ್.ಇ ತಂತ್ರಜ್ಞಾನಗಳ ಫಲಾನುಭವಿ ಕಲ್ಲೋಳಿಯ ಚಾಂಪಿಯನ್ ರೈತ ರಮೇಶ ಖಾನಗೌಡರ ತಮ್ಮ ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಜನ ರೈತರು ಭಾಗವಹಿಸಿದ್ದರು.