ಬಂಟರ ಸಮುದಾಯದವರು ಅತ್ಯಂತ ಶ್ರಮಜೀವಿಗಳು: ಸಚಿವೆ ಹೆಬ್ಬಾಳಕರ್

The Bunt community is very hardworking: Minister Hebbalkar

ಬಂಟರ ಸಮುದಾಯದವರು ಅತ್ಯಂತ ಶ್ರಮಜೀವಿಗಳು: ಸಚಿವೆ ಹೆಬ್ಬಾಳಕರ್  

ಬೆಳಗಾವಿ 15: ಯಾವುದೇ ಭೇದ ಭಾವವಿಲ್ಲದೆ ಆತಿಥ್ಯ ನೀಡುವುದರಲ್ಲಿ ಬಂಟರ ಸಮುದಾಯ ಹೆಸರುವಾಸಿ. ಈ ಸಮುದಾಯದವರು ಅತ್ಯಂತ ಶ್ರಮಜೀವಿಗಳು, ಅತಿಥಿ ದೇವೋಭವ ಎನ್ನುವ ಹಾಗೆ ಅತಿಥಿಗಳನ್ನು ದೇವರ ರೀತಿ ಭಾವಿಸುತ್ತಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.   

ಬೆಳಗಾವಿಯ ಬಂಟರ ಯಾನೆ ನಾಡವರ ಸಂಘದ ವತಿಯಿಂದ ರಾಷ್ಟ್ರೀಯ ಹೆದ್ದಾರಿ 4 ರ  ನ್ಯೂ ಗಾಂಧಿ ನಗರದಲ್ಲಿ ನವೀಕೃತಗೊಂಡಿರುವ ಬಂಟರ ಭವನದ ಉದ್ಘಾಟನಾ ಸಮಾರಂಭ ಹಾಗೂ ಮಾಣಿಕ್ಯ ಸಂಭ್ರಮದಲ್ಲಿ ಮಾತನಾಡಿದ ಸಚಿವರು, ಚಿಕ್ಕ ವಯಸ್ಸಿನಲ್ಲೇ ಮನೆಬಿಟ್ಟು ಹೋಗಿ ಸ್ವಂತ ಕಾಲಮೇಲೆ ನಿಲ್ಲುವ ಸ್ವಾಭಿಮಾನಿಗಳು. ದೇಶದ ವಿವಿಧೆಡೆ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡಿದ್ದಾರೆ ಎಂದು ಹೇಳಿದರು.   

ಸಂಸ್ಕೃತಿ, ಕಲೆಯಲ್ಲಿ ನಿಮ್ಮ ಸಮಾಜಕ್ಕೆ ಇರುವ ಆಸಕ್ತಿ ನೋಡಿ ಮಂತ್ರಮುಗ್ಧಳಾಗಿದ್ದೇನೆ. ಈ ಸಮುದಾಯದವರು ನಿಸ್ವಾರ್ಥಗಳು, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆಯಾಗಿರುವುದು ನನ್ನ ಪೂರ್ವ ಜನ್ಮದ ಪುಣ್ಯ. ಉಡುಪಿ ಶ್ರೀ ಕೃಷ್ಣ, ಕಟೀಲು ದುರ್ಗಾಪರಮೇಶ್ವರಿ, ಕಾಪು ಮಾರಿಗುಡಿ ದೇವರ ದರ್ಶನ ಭಾಗ್ಯ ನನಗೆ ಸಿಗುತ್ತಿದೆ. ಭೂತಾರಾಧನೆ ಸೇರಿದಂತೆ ಕರಾವಳಿಯ ಸಂಸ್ಕೃತಿ ಬಂಟರ ಸಮುದಾಯದವರಿಂದ ಶ್ರೀಮಂತವಾಗಿದೆ ಎಂದು ಹೇಳಿದರು.   

ಬಂಟರ ಸಮುದಾಯದ ಸಂಖ್ಯೆ ಕಡಿಮೆ ಇದ್ದರೂ ಇಡೀ ವಿಶ್ವದ ಹೃದಯವನ್ನು ಗೆದ್ದಿದ್ದೀರಾ. ದೇಶಕ್ಕೆ ರಾಜ್ಯಕ್ಕೆ ಬಂಟರು ಗುರುತರ ಕಾಣಿಕೆ ನೀಡಿದ್ದಾರೆ. ಸ್ವಾತಂತ್ರ್ಯ ಹೋರಾಟಕ್ಕೆ, ಕಲೆ, ಸಾಹಿತ್ಯಕ್ಕೂ ಕೊಡುಗೆ ನೀಡಿದ್ದಾರೆ. ಹೃದಯ ಶ್ರೀಮಂತಿಕೆ ಮರೆವ, ಆತಿಥ್ಯಕ್ಕೆ ಹೆಸರಾದ ಸಮಾಜ ನಿಮ್ಮದು. ಹೊಟೆಲ್ ಉದ್ಯಮವನ್ನು ಯಶಸ್ವಿಯಾಗಿ ನಿರ್ವಹಿಸುವುದರಲ್ಲಿ ಬಂಟರು ನಿಸ್ಸೀಮರು ಎಂದು ಹೇಳಿದರು.   

ಭಗವಂತನ ಕೃಪಾಶೀರ್ವಾದ ನಿಮ್ಮ ಮೇಲಿದೆ. ಯಾವುದೇ ಊರಿಗೆ ಹೋದರೂ ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ನೋಡುತ್ತೀರಿ. ಎಲ್ಲರನ್ನು ಒಟ್ಟಿಗೆ ಕರೆದೊಯ್ಯುತ್ತೀರಿ. ಇದು ಬಂಟರ ಸಮುದಾಯದವರಿಗೆ ಇರುವ ಕಲೆ ಎಂದರು.  

ಸಿಎಂಡಿ ಅಂಡ್ ಎಂಆರ್ ಜಿ ಗ್ರೂಪ್ ನ ಡಾ.ಕೆ ಪ್ರಕಾಶ ಶೆಟ್ಟಿ, ಶಾಸಕರಾದ ಆಸಿಫ್ ಸೇಠ್, ಉದ್ಯಮಿಗಳಾದ ಜಯಶೀಲ ಶೆಟ್ಟಿ, ಮುಂಬೈ ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ ಬೋಜ್ ಶೆಟ್ಟಿ, ಸಂಗೀತ ನಿರ್ದೇಶಕರಾದ ಗುರುಕಿರಣ್, ಡಾ.ಮಹಾಬಳೇಶ್ ಶೆಟ್ಟಿ, ಗೌರವಾಧ್ಯಕ್ಷರಾದ ವಿಠ್ಠಲ ಹೆಗ್ಡೆ, ಅಧ್ಯಕ್ಷರಾದ ವಿಜಯ ಶೆಟ್ಟಿ, ಶ್ರೀಧರ್ ಶೆಟ್ಟಿ, ಹಸ್ತ ಶೆಟ್ಟಿ, ಪ್ರಸನ್ನ ಶೆಟ್ಟಿ, ಚೇತನ ಶೆಟ್ಟಿ, ಕರುಣಾಕರ್ ಶೆಟ್ಟಿ, ಪ್ರಣಯ ಶೆಟ್ಟಿ ಬಂಟ ಸಮುದಾಯದ ಅನೇಕರು ಉಪಸ್ಥಿತರಿದ್ದರು. 


ಇತ್ತೀಚಿನ ಸುದ್ದಿ