ತಂಬಾಕು ಮುಕ್ತ ಶಿಕ್ಷಣ ಸಂಸ್ಥೆಗಳನ್ನಾಗಿ ಘೋಷಿಸಲು ಕ್ರಮವಹಿಸಿ
Take steps to declare educational institutions as tobacco-free
ಬಳ್ಳಾರಿ: ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಸಭೆಯಲ್ಲಿ ಎಡಿಸಿ ಮಹಮ್ಮದ್ ಎನ್.ಝುಬೇರ್ ಸೂಚನೆ
ಬಳ್ಳಾರಿ 19: ಜಿಲ್ಲೆಯಲ್ಲಿನ ಪ್ರಾಥಮಿಕ, ಪ್ರೌಢ ಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಗಳಡಿ ಬರುವ ಎಲ್ಲಾ ಶಾಲಾ-ಕಾಲೇಜುಗಳನ್ನು ತಂಬಾಕು ಮುಕ್ತ ಶಿಕ್ಷಣ ಸಂಸ್ಥೆಗಳನ್ನಾಗಿ ಘೋಷಿಸಲು ಈ ಕೂಡಲೇ ಕ್ರಮವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಅವರು ಡಿಡಿಪಿಐ, ಡಿಡಿಪಿಯು ಅಧಿಕಾರಿಗಳಿಗೆ ಸೂಚಿಸಿದರು.
ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯ ಎಲ್ಲಾ ಸಾರ್ವಜನಿಕ ಪ್ರದೇಶಗಳಲ್ಲಿ ಕೋಟ್ಪಾ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಕುರಿತಂತೆ ಚರ್ಚಿಸಲು ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ವೀಡೀಯೋ ಸಭಾಂಗಣದಲ್ಲಿ ಗುರುವಾರ ಏರಿ್ಡಸಿದ್ದ ತಂಬಾಕು ನಿಯಂತ್ರಣ ಕೋಶದ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಂಬಾಕು ಮುಕ್ತ ಶಿಕ್ಷಣ ಸಂಸ್ಥೆಗಳನ್ನಾಗಿ ಘೋಷಿಸಲು ಟಿಒಎಫ್ಇಐ ಆಪ್ ಲಿಂಕ್ ಸೃಷ್ಟಿಸಲಾಗಿದ್ದು, ಎಲ್ಲಾ ಶಾಲಾ-ಕಾಲೇಜುಗಳಿಗೆ ಲಿಂಕ್ ಕಳುಹಿಸಲಾಗಿದೆ. ಅದರಲ್ಲಿ ತಪ್ಪದೇ ಮಾಹಿತಿ ನಮೂದಿಸಬೇಕು ಎಂದು ತಿಳಿಸಿದರು.
*ತಂಬಾಕು ಉತ್ಪನ್ನಗಳ ಜಾಹೀರಾತು ತೆರವುಗೊಳಿಸುವ ಕಾರ್ಯವಾಗಲಿ:*
ಕಕರಸಾನಿ ಬಳ್ಳಾರಿ ವಿಭಾಗ ವ್ಯಾಪ್ತಿಯಲ್ಲಿ ಬರುವ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧ ಮತ್ತು ಬಸ್ಗಳ ಮೇಲೆ ಮುದ್ರಿಸಲಾಗಿರುವ ಜಾಹೀರಾತು ಫಲಕಗಳು ಕಂಡುಬರುತ್ತಿದ್ದು, ಫಲಕಗಳನ್ನು ಕೂಡಲೇ ತೆರವುಗೊಳಿಸುವ ಕಾರ್ಯ ಮಾಡಬೇಕು ಎಂದು ಸಾರಿಗೆ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು.
ವಿವಿಧ ಮಾನದಂಡಗಳಡಿ ಜಿಲ್ಲೆಯಲ್ಲಿ ತಂಬಾಕು ಮುಕ್ತ ಗ್ರಾಮವನ್ನಾಗಿ ಘೋಷಿಸಲು ಒಟ್ಟು 25 ಗ್ರಾಮಗಳನ್ನು ಗುರುತಿಸಲಾಗಿದ್ದು, ಆಯ್ಕೆ ಮಾಡಲು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಯವರ ಶಿಫಾರಸ್ಸಿಗೆ ಕೂಡಲೇ ಕಳುಹಿಸುವಂತೆ ಜಿಪಂ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು.
ಬೆಂಗಳೂರಿನ ತಂಬಾಕು ನಿಯಂತ್ರಣ ಕೋಶದ ಸಹ-ಸಂಯೋಜಕರಾದ ಮಹಾಂತೇಶ್ ಉಳ್ಳಾಗಡ್ಡಿ ಅವರು ಮಾತನಾಡಿ, ಟಿಒಎಫ್ಇಐ ಮಾರ್ಗಸೂಚಿಗಳು ಶಾಲೆಗಳು ಮತ್ತು ಕಾಲೇಜುಗಳು ತಮ್ಮ ಕ್ಯಾಂಪಸ್ಗಳನ್ನು ತಂಬಾಕು ಮುಕ್ತವಾಗಿಡಲು ಕೈಗೊಳ್ಳಬೇಕಾದ ಒಂಬತ್ತು ಚಟುವಟಿಕೆಗಳನ್ನು ಸಭೆಗೆ ವಿವರಿಸಿದರು.
ಶಾಲಾ ಆವರಣದೊಳಗೆ ‘ತಂಬಾಕು ಮುಕ್ತ ಪ್ರದೇಶ' ಎಂಬ ಫಲಕದ ಪ್ರದರ್ಶನ, ಪ್ರವೇಶದ್ವಾರದಲ್ಲಿ ‘ತಂಬಾಕು ಮುಕ್ತ ಶಿಕ್ಷಣಸಂಸ್ಥೆ' ಎಂಬ ಫಲಕದ ಪ್ರದರ್ಶನ, ಆವರಣದಲ್ಲಿ ತಂಬಾಕು ಬಳಕೆಯ ಯಾವುದೇ ಪುರಾವೆಗಳಿಲ್ಲ, ತಂಬಾಕಿನ ಹಾನಿಗಳ ಕುರಿತು ಜಾಗೃತಿ ಸಾಮಗ್ರಿಗಳ ಪ್ರದರ್ಶನ, ಪ್ರತಿ ಆರು ತಿಂಗಳಿಗೊಮ್ಮೆ ಕನಿಷ್ಠ ಒಂದು ತಂಬಾಕು ನಿಯಂತ್ರಣ ಚಟುವಟಿಕೆ, ತಂಬಾಕು ಮೇಲ್ವಿಚಾರಕರ ನಾಮನಿರ್ದೇಶನ, ಶಾಲಾ ನೀತಿ ಸಂಹಿತೆಯಲ್ಲಿ ತಂಬಾಕು ಮುಕ್ತನೀತಿಯನ್ನು ಸೇರಿಸುವುದು, ತಂಬಾಕು ಮುಕ್ತ ವಲಯವನ್ನು ಗೊತ್ತುಪಡಿಸಲು ಶಿಕ್ಷಣ ಸಂಸ್ಥೆಗಳ ಸುತ್ತ 100 ಅಡಿ ಸುತ್ತ ಹಳದಿರೇಖೆಯನ್ನು ಗುರುತಿಸುವುದು ಮತ್ತು ಆ 100 ಅಡಿ ಅಂತರ ವಲಯದೊಳಗೆ ಯಾವುದೇ ಅಂಗಡಿಗಳು ಅಥವಾ ಮಾರಾಟಗಾರರು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಂತೆ ನೋಡಿಕೊಳ್ಳುವುದು ಸೇರಿದಂತೆ ಸರ್ಕಾರದ 9 ಮಾರ್ಗಸೂಚಿಗಳನ್ವಯ ಲಿಂಕ್ ನಲ್ಲಿ ನಮೂದಿಸಿ ಅಪ್ಲೋಡ್ ಮಾಡಬೇಕು ಎಂದು ಸಭೆಗೆ ತಿಳಿಸಿದರು.
ಎಡಿಸಿ ಮಹಮ್ಮದ್ ಝುಬೇರ್ ಅವರು ಮಾತನಾಡಿ, ಜಿಲ್ಲೆಯ ಎಲ್ಲಾ ಬಾರ್ ಮತ್ತು ರೆಸ್ಟೋರೆಂಟ್ಗಳಲ್ಲಿ ಕಡ್ಡಾಯವಾಗಿ ಧೂಮಪಾನ ಪ್ರದೇಶವನ್ನು ಪ್ರತ್ಯೇಕವಾಗಿ ಸ್ಥಾಪಿಸಬೇಕು ಮತ್ತು ಅದರ ಕ್ರಮಬದ್ಧತೆ ಕುರಿತು ನಿಯಮಿತವಾಗಿ ಪರೀಶೀಲನೆ ನಡೆಸುತ್ತಿರಬೇಕು ಎಂದು ಅಬಕಾರಿ ಅಧಿಕಾರಿಗಳಿಗೆ ತಿಳಿಸಿದರು.
ಅದೇರೀತಿಯಾಗಿ ಆಹಾರ ಮಾರಾಟಕ್ಕೆ ಪರವಾನಿಗೆ ಪಡೆದ ಅಂಗಡಿ, ಹೋಟೆಲ್, ಬೇಕರಿ, ಬಾರ್ ಅಂಡ್ ರೆಸ್ಟೋರೆಂಟ್, ವಾಣಿಜ್ಯ ಮಳಿಗೆಗಳು ಮತ್ತು ಎಲ್ಲಾ ಓಷಧಿ ಅಂಗಡಿಗಳಲ್ಲಿ ಕೋಟ್ಪಾ ಕಾಯ್ದೆಯ ಸೆಕ್ಷನ್-4 ಮತ್ತು ಸೆಕ್ಷನ್-6 ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿಯೂ ಆದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ವಿ.ಕೆ ಅವರು ಪ್ರಗತಿ ವರದಿಯೊಂದಿಗೆ ಸಭೆ ನಿರ್ವಹಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಮೌನೇಶ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಂಯೋಜಕ ಪ್ರಶಾಂತ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ವಿವಿಧ ಕಾರ್ಯಕ್ರಮ ಅಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 