ಇಂಡಿ 17: 2023ನೇ ಸಾಲಿನ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಕೊಡಮಾಡುವ "ಡಾ. ಜಿ. ಚಂದ್ರಮೌಳೇಶ್ವರ ದತ್ತಿ 2023ರಲ್ಲಿ ಪ್ರಕಟವಾದ ಶ್ರೇಷ್ಠ ಕಾವ್ಯ ಪ್ರಕಾರ ಕೃತಿಗೆ ಹಲಸಂಗಿಯ ಕವಿ ಸುಮಿತ್ ಮೇತ್ರಿ ಆಯ್ಕೆ. ’ಥಟ್ ಅಂತ ಬರೆದು ಕೊಡುವ ರಶೀದಿಯಲ್ಲ ಕವಿತೆ’ (2019), ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಣೆಯ ’ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕ-ಹಲಸಂಗಿ (2022) ’ಈ ಕಣ್ಣುಗಳಿಗೆ ಸದಾ ನೀರಡಿಕೆ’(2023), ಬಿಸಿಲು ಹೂವುಗಳು (2024) ಪ್ರಕಟಿತ ಕೃತಿಗಳು.
ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಗೆ ಬರೆದ ’ಅರಗಿನ ಅರಮನೆ’ (2017) ಅಪ್ರಕಟಿತ ನಾಟಕ. 2019ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಯುವಕವಿ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ಪ್ರೊ. ಡಿ ಸಿ ಅನಂತಸ್ವಾಮಿ ದತ್ತಿ, ಎರಡು ಬಾರಿ 2019, 2023ರ ಅಖಂಡ ವಿಜಯಪುರ (ಬಾಗಲಕೋಟೆ) ಜಿಲ್ಲೆಯ ಸಮೀರವಾಡಿ ದತ್ತಿ ಪುರಸ್ಕಾರ, ಸಾಹಿತ್ಯ ಸಂಗಮ ಕೊಡಮಾಡುವ ಹರಿಹರಶ್ರೀ ಪ್ರಶಸ್ತಿ, ಸಾಹಿತ್ಯ ಚಿಗುರು, ಸಾಹಿತ್ಯ ಸಿರಿ ಪ್ರಶಸ್ತಿ, ತ್ರಿವೇಣಿ ಶೆಲ್ಲಿಕೇರಿ ಬಹುಮಾನ, ಸಹೃದಯ ಕಾವ್ಯ ಪ್ರಶಸ್ತಿ, ಸೃಷ್ಟಿ ಕಾವ್ಯ ಪ್ರಶಸ್ತಿ, ಕುರಾಡಿ ಸೀತಾರಾಮ ಅಡಿಗ ಕಾವ್ಯ ಪುರಸ್ಕಾರ, ಅಡ್ವೈಸರ್ ಕಾವ್ಯ ಪ್ರಶಸ್ತಿ ಸೇರಿದಂತೆ ಹಲವು ಪುಸ್ತಕ ಬಹುಮಾನ ಹಾಗೂ ಜನಮಿತ್ರ, ಜನಶಕ್ತಿ ಹೀಗೆ ಹಲವು ಕಾವ್ಯ ಸ್ಪರ್ಧೆಗಳಲ್ಲಿ ವಿಜೇತ ಇವರ ಕವಿತೆಗಳು ಇಂಗ್ಲಿಷ್ ಸೇರಿದಂತೆ ಭಾರತದ ಇತರ ಭಾಷೆಗಳಿಗೂ ಅನುವಾದಗೊಂಡಿವೆ.
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಪದವಿ ವಿದ್ಯಾರ್ಥಿಗಳಿಗೆ ’ಐಗೋಳ ಹುಸೇನ್’ ಕವಿತೆ ಪಠ್ಯವಾಗಿದೆ. ಹೊಸ ಕನ್ನಡ ಕಾವ್ಯದ ಅತ್ಯಾಕರ್ಷಕ ಧ್ವನಿಗಳಲ್ಲಿ ಒಬ್ಬರಾಗಿ, ಧಗಧಗಿಸುವ ನಿಶ್ಯಬ್ದದೊಂದಿಗೆ ಆತ್ಮವಿಶ್ವಾಸ, ನಿರ್ಭೀತವಾಗಿ ಹೊಸ ಸಾಧ್ಯತೆಗಳ ಹುಡುಕಾಟದಲ್ಲಿ ಇರುವ ಇವರ ಕವಿತೆಗಳು ಕಾವ್ಯಾಸಕ್ತರ ಗಮನ ಸೆಳೆದಿವೆ. ಈಗ ಇವರ "ಈ ಕಣ್ಣುಗಳಿಗೆ ಸದಾ ನೀರಡಿಕೆ" ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಕೊಡಮಾಡುವ "ಡಾ. ಜಿ. ಚಂದ್ರಮೌಳೇಶ್ವರ ದತ್ತಿ 2023ರಲ್ಲಿ ಪ್ರಕಟವಾದ ಶ್ರೇಷ್ಠ ಕಾವ್ಯ ಪ್ರಕಾರ ಕೃತಿಗೆ ಪ್ರಶಸ್ತಿ ಸಂದಿದೆ.