ಬಳ್ಳಾರಿ 16: ಮಕ್ಕಳು ದಿನಾಲೂ ಶಾಲೆಗೆ ಬರಬೇಕು. ಯಾವುದೇ ಕಾರಣಕ್ಕೂ ಶಾಲೆಗೆ ತಪ್ಪಿಸಬಾರದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಮಧು ಬಂಗಾರಪ್ಪ ಅವರು ಹೇಳಿದರು.
ನಗರದ ಪಟೇಲ್ ನಗರ ಬಡಾವಣೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, 7 ತರಗತಿಯ ಮಕ್ಕಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.
ಮನೆಯಲ್ಲಿ ಶಾಲೆಗೆ ಹೋಗಲು ಅಡ್ಡಿಪಡಿಸಿದರೆ, ನಾನು ತಪ್ಪದೇ ಶಾಲೆಗೆ ಹೋಗುತ್ತೇನೆ ಎಂದು ಹೇಳಬೇಕು. ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಪಡೆಯಬೇಕು. ಆರೋಗ್ಯದಿಂದಿರಬೇಕು. ಶಿಕ್ಷಣ ಪಡೆದುಕೊಂಡು ಉನ್ನತ ವ್ಯಕ್ತಿಗಳಾಗಿ ಹೊರಹೊಮ್ಮಬೇಕು ಎಂದು ಸಚಿವರು ಆಶಿಸಿದರು.
*ಸಂವಿಧಾನ ಪೀಠಿಕೆ ಪ್ರಸ್ತುತಪಡಿಸಿದ ರಿತಿಕಾ:*
ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆ ಯಾರೂ ಹೇಳುತ್ತೀರಾ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಎಸ್.ಮಧು ಬಂಗಾರ್ಪ ಅವರು ಕೇಳಿದಾಗ, ಶಾಲೆಯ ಐದನೇ ತರಗತಿ ವಿದ್ಯಾರ್ಥಿನಿ ರಿತಿಕಾ ಅವರು ಸಂವಿಧಾನ ಪೀಠಿಕೆಯನ್ನು ವಿಸ್ತಾರವಾಗಿ ವಾಚನ ಮಾಡಿದರು.
*ಮಕ್ಕಳೊಂದಿಗೆ ಊಟ ಸವಿದ ಸಚಿವರು:*
ಶಾಲೆಯ ವಿವಿಧ ಕೊಠಡಿಗಳಿಗೆ ಭೇಟಿ ನೀಡಿ ಪರೀಶೀಲನೆ ನಡೆಸಿದ ಸಚಿವರು, ಬಳಿಕ ಮಕ್ಕಳೊಂದಿಗೆ ಮಧ್ಯಾಹ್ನದ ಬಿಸಿಯೂಟ ಸವಿದರು. ಊಟದಲ್ಲಿ ಅನ್ನ, ಸಾಂಬಾರು ಜೊತೆಗೆ ಉಪ್ಪಿನಕಾಯಿ ಮತ್ತು ಮೊಟ್ಟೆ ನೀಡಲಾಗಿತ್ತು. ಇದೇ ವೇಳೆ ಊಟದ ರುಚಿಯ ಬಗ್ಗೆ ಮಕ್ಕಳ ಅಭಿಪ್ರಾಯ ಪಡೆದುಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರೀಸ್ ಸುಮೈರ್, ಕಲಬುರಗಿ ವಿಭಾಗದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಪರ ಆಯುಕ್ತ ಡಾ.ಆಕಾಶ್ ಶಂಕರ್, ಡಿಡಿಪಿಐ ಬಿ.ಉಮಾದೇವಿ, ವಿಷಯ ಪರೀವೀಕ್ಷಕಿ ವೇದಾವತಿ, ಶಾಲೆಯ ಮುಖ್ಯಗುರುಗಳಾದ ಜಯಶ್ರೀ ಸೇರಿದಂತೆ ಬಿಇಒ, ಎಸ್ಡಿಎಂಸಿ ಅಧ್ಯಕ್ಷರು, ಶಾಲಾ ಶಿಕ್ಷಕರು, ಶಾಲಾ ಶಿಕ್ಷಕರು ಹಾಗೂ ಇತರರು ಇದ್ದರು.