ಮಂಜುನಾಥೇಶ್ವರ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತು ರಚನೆ ಕಾರ್ಯಕ್ರಮ

ಮಂಜುನಾಥೇಶ್ವರ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತು ರಚನೆ ಕಾರ್ಯಕ್ರಮ Student Parliament Formation Program at Manjunatheshwara School

ಲೋಕದರ್ಶನ ವರದಿ 

ಧಾರವಾಡ 25 :  ವಿದ್ಯಾಗಿರಿಯ ಜೆ.ಎಸ್‌.ಎಸ್ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸಂಸತ್ತು ರಚನೆ ಕಾರ್ಯಕ್ರಮವು ಜರುಗಿತು. ಸನ್ನಿಧಿ ಕಲಾ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಧಾರವಾಡ ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸುಜಾತಾ ಎಚ್‌. ತಿಮ್ಮಾಪುರ ಅವರು ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವ ಗುಣ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸಿಕೊಳ್ಳಲು ವಿದ್ಯಾರ್ಥಿ ಸಂಸತ್ತು ಉತ್ತಮ ವೇದಿಕೆಯಾಗಿದೆ. ಇದರಿಂದ ವಿದ್ಯಾರ್ಥಿಗಳು ಜವಾಬ್ದಾರಿಗಳನ್ನು ನಿರ್ವಹಿಸುವುದನ್ನು ಕಲಿಯುತ್ತಾರೆ. ಶಾಲೆಯ ಶಿಸ್ತು, ಸ್ವಚ್ಛತೆ ಹಾಗೂ ಕಾರ್ಯಕ್ರಮಗಳ ನಿರ್ವಹಣೆಯಲ್ಲಿ ಭಾಗವಹಿಸುವದರಿಂದ ಶಾಲೆಯ ಸ್ವಾಸ್ಥ್ಯ ಕಾಪಾಡಿಕೊಂಡು ಹೋಗಬಹುದು. "ಶಾಲಾ ಸಂಸತ್ತು ವಿದ್ಯಾರ್ಥಿಗಳಲ್ಲಿ ನಾಯಕತ್ವ, ಜವಾಬ್ದಾರಿ, ಆತ್ಮವಿಶ್ವಾಸ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸಿ ಅವರ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು. 

ಜೆ.ಎಸ್‌.ಎಸ್ ನ ಆಡಳಿತಾಧಿಕಾರಿಯಾದ ಅರಿಹಂತ ಪ್ರಸಾದ ಮಾತನಾಡಿ ಶಾಲಾ ಸಂಸತ್ತು ರಚನೆಯಿಂದ ಮಕ್ಕಳಲ್ಲಿ ಒಗ್ಗಟು ಬೆಳೆಯುತ್ತದೆ. ಸಂಸತ್ತಿನಲ್ಲಿ ಆಯ್ಕೆಯಾದ ಮಕ್ಕಳು ತಮಗೆ ಕೊಟ್ಟ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿ, ಶಾಲೆಯಲ್ಲಿರುವ ಸಮಸ್ಯೆಗಳನ್ನು ಸಣ್ಣದಿರುವಾಗಲೇ ಬಗೆಹರಿಸಿ, ಶಿಸ್ತು ಮತ್ತು ಐಕ್ಯತೆಯನ್ನು ಕಾಪಾಡಿ, ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳಿ ಇದು ಕೇವಲ ಶಾಲೆಗೆ ಸೀಮಿತವಾಗಿರದೇ ನಿಮಗೆ ಮನೆಯ ಮತ್ತು ಸಮಾಜದ ಜವಬ್ದಾರಿಯನ್ನು ಹೇಗೆ ನಿಭಾಯಿಸಬೇಕೆಂದು ಕಲಿಸಿಕೊಡುತ್ತದೆ ಎಂದು ಹೇಳಿದರು.  ಐ.ಟಿ.ಐ ಕಾಲೇಜಿನ ಪ್ರಾಚಾರ್ಯರಾದ ಮಹಾವೀರ ಉಪಾದ್ಯೆ ಅವರು ಉಪಸ್ಥಿತರಿದ್ದು, ನೂತನ ವಿದ್ಯಾರ್ಥಿ ಸಂಸತ್ತಿನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ವೇದಿಕೆಯ ಮೇಲೆ ಶಾಲೆಯ ಪ್ರಾಚಾರ್ಯರಾದ ಡಯಾನಾ ಜೋಗಿನ್, ಶಾಲೆಯ ಸಹ ಸಂಯೋಜಕಿಯರಾದ ನಿರ್ಮಲಾ ಪಾಟೀಲ್, ಕಮಲಾಕ್ಷಿ ಸಣ್ಣಕ್ಕಿ ಹಾಗೂ ಪ್ರಿಯಾಂಕಾ ನಾಯಕ್ ಉಪಸ್ಥಿತರಿದ್ದರು. ಲೀನಾ ವಾಸ್ ನಿರೂಪಿಸಿದರು. ನಂದಾ ಡಿ. ಕುಕನೂರ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದು, ನೂತನ ವಿದ್ಯಾರ್ಥಿ ನಾಯಕರಿಗೆ ಪ್ರೋತ್ಸಾಹ ನೀಡಿದರು.