ರಾಯಬಾಗ 19: ತಾಲೂಕಿನ ಬೆಕ್ಕೇರಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಎರಡು ಗುಂಪುಗಳ ಮಧ್ಯೆ ಸೋಮವಾರ ರಾತ್ರಿ ಕಲ್ಲು ತೂರಾಟ ನಡೆದಿದ್ದು, ಎಂಟು ಆರೋಪಿಗಳನ್ನು ರಾಯಬಾಗ ಪೋಲಿಸರು ಬಂಧಿಸಿದ್ದಾರೆ.
ಬೆಕ್ಕೇರಿ ಗ್ರಾಮದಲ್ಲಿ ರಂಗಪಂಚಮಿ ವೇಳೆ ಡಿಜೆ ಸೌಂಡ ಹಚ್ಚುವ ವಿಷಯವಾಗಿ ಎರಡೂ ಕೋಮಿನವರ ಮಧ್ಯ ಮಾತಿನ ಚಕಮಕಿ ನಡೆದಿತ್ತು. ಒಂದು ಕೋಮಿನ ಯುವಕರು ಇನ್ನೊಂದು ಕೋಮಿನ ಯುವಕನಿಗೆ ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿ ಕಲ್ಲಿನಿಂದ ಹೊಡೆಯಲು ಪ್ರಾರಂಭಿಸಿದ್ದಾರೆ. ಆಗ ಇನ್ನೊಂದು ಕೋಮಿನ ಯುವಕರು ಗುಂಪು ಕಟ್ಟಿ ಕೊಂಡು ಬಂದುಮಾತಿಗೆ ಮಾತು ಬೆಳೆಸಿ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ವಿಷಯ ತಿಳಿದ ಪೊಲೀಸರು ಕೂಡಲೇ ದೌಡಾಯಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಆದರೂ ಗ್ರಾಮದಲ್ಲಿ ಈಗ ಬೂದಿ ಮುಚ್ಚಿದ ಕೆಂಡದಂತಿದೆ. ಎರಡೂ ಕೋಮಿನವರು ಪ್ರತ್ಯೇಕ ಪ್ರಕರಣವನ್ನು ದಾಖಲಿಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡ ಪೋಲಿಸರು ತನಿಖೆಯನ್ನು ಕೈಗೊಂಡಿದ್ದಾರೆ.
ಸಿಪಿಐ ಬಿ. ಎಸ್. ಮಂಟೂರ, ಪಿಎಸ್ಐಗಳಾದ ಶಿವಶಂಕರ ಮುಕಾರಿ, ನರಸಿಂಹರಾಜು ಅವರ ನೇತೃತ್ವದಲ್ಲಿ ಬಿಗಿ ಪೊಲೀಸ ಬಂದೋಬಸ್ತ ಕೈಗೊಂಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪೋಲಿಸ್ ತುಕಡಿಗಳನ್ನು ನಿಯೋಜಿಸಲಾಗಿದೆ.