ಮೇ 31 ರ ವರೆಗೆ ವಿಶೇಷ ಲಸಿಕಾ ಅಭಿಯಾನ

Special vaccination campaign till May 31

ಮಗುವಿನ ವಯಸ್ಸಿಗನುಸಾರವಾಗಿ ತಪ್ಪದೇ ಲಸಿಕೆ ಹಾಕಿಸಿ: ಡಿಹೆಚ್‌ಓ ಡಾ.ಯಲ್ಲಾ ರಮೇಶ್ ಬಾಬು 

ಬಳ್ಳಾರಿ  26: ಜಿಲ್ಲೆಯಲ್ಲಿ ಮೇ 26 ರಿಂದ 31 ರವರೆಗೆ ಒಂದು ವಾರ ವಿಶೇಷ ಲಸಿಕಾ ಅಭಿಯಾನ ನಡೆಯುತ್ತಿದ್ದು, ಮಗುವಿನ ಬಾಲ್ಯದಲ್ಲಿ ಬರಬಹುದಾದಂತಹ 12 ಮಾರಕ ರೋಗಗಳನ್ನು ತಡೆಗಟ್ಟಲು ಮಗುವಿನ ವಯಸ್ಸಿಗನುಸಾರವಾಗಿ ತಪ್ಪದೇ ಲಸಿಕೆ ಹಾಕಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಕರೆ ನೀಡಿದರು. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮಿಲ್ಲರ್‌ಪೇಟೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಶೇಷಾವಲಿ ದರ್ಗಾ ಬಡಾವಣೆಯ ಅಂಗನವಾಡಿ ಕೇಂದ್ರದಲ್ಲಿ ಮೇ 31 ರ ವರೆಗೆ ನಡೆಯುವ ವಿಶೇಷ ಲಸಿಕಾ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಮಗುವಿನ ಜನನದ ನಂತರ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಲಕ್ಷಯ ತಡೆಗಟ್ಟಲು ಬಿಸಿಜಿ, ಪೋಲಿಯೋ ರೋಗ ತಡೆಗಟ್ಟಲು ಪೋಲಿಯೋ ಹನಿ, ಕಾಮಾಲೆ ರೋಗ ತಡೆಗಟ್ಟಲು ಹೆಪಟೈಟೀಸ್ ಹಾಗೂ ನವಜಾತ ಶಿಶುವಿನ ದೇಹದ ಒಳಗಡೆ ಆಂತರಿಕ ರಕ್ತಸ್ರಾವ ಸಾಧ್ಯತೆ ತಡೆಗಟ್ಟಲು ವಿಟಮಿನ್‌-ಕೆ ಚುಚ್ಚುಮದ್ದನ್ನು ಮೊದಲ ದಿನವೇ ನೀಡಲಾಗುತ್ತಿದೆ. ನಂತರ ವಯಸ್ಸಿಗೆ ಅನುಸಾರವಾಗಿ ಮಾರಕ ರೋಗಗಳನ್ನು ತಡೆಗಟ್ಟಲು ಒಂದು ವರ್ಷದೊಳಗಿನ ಎಲ್ಲಾ ಲಸಿಕೆಗಳನ್ನು ಉಚಿತವಾಗಿ ಹಾಕಲಾಗುತ್ತಿದೆ. ಪಾಲಕರು ತಮ್ಮ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಮಗುವಿಗೆ ಹಾಕಿಸಬೇಕಾದ ಲಸಿಕೆಗಳನ್ನು ತಪ್ಪದೇ ಹಾಕಿಸಬೇಕು ಎಂದರು. 

ಈಗಾಗಲೇ ಪ್ರತಿ ಗುರುವಾರ ಎಲ್ಲಾ ಗ್ರಾಮ, ವಾರ್ಡ್‌ಗಳಲ್ಲಿ ಲಸಿಕೆ ಹಾಕಲಾಗುತ್ತಿದ್ದು, ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿ ದಿನ ಲಸಿಕೆ ಹಾಕಲಾಗುತ್ತಿದೆ. ಮಗು ಲಸಿಕೆ ವಂಚಿತರಾಗಬಾರದೆಂಬ ಹಿನ್ನಲೆಯಲ್ಲಿ ಸರ್ಕಾರವು ಏಪ್ರಿಲ್, ಮೇ, ಜೂನ್ ಮೂರು ತಿಂಗಳ ಕಾಲ ನಿಗಧಿತ ಅವಧಿಯಲ್ಲಿ ಲಸಿಕೆ ಪಡೆಯದ ಹಾಗೂ ಒಂದು ಲಸಿಕೆಯನ್ನು ಪಡೆಯದೇ ಇರುವ ಮಕ್ಕಳನ್ನು ಗುರ್ತಿಸಿ ಲಸಿಕೆ ಹಾಕುವ ಕಾರ್ಯವನ್ನು ಮೇ 26 ರಿಂದ 31 ರ ವರೆಗೆ ಮಾಡಲಾಗುತ್ತಿದೆ ಎಂದು ತಿಳಿಸಿದರು. 

ಇತ್ತೀಚೆಗೆ ಕೆಲವು ಪ್ರದೇಶಗಳಲ್ಲಿ ಕಂಡುಬರುತ್ತಿರುವ ದಡಾರ ಪ್ರಕರಣಗಳ ನಿಯಂತ್ರಣಕ್ಕಾಗಿ ಮಗುವಿನ ವಯಸ್ಸು 9 ತಿಂಗಳು ತುಂಬಿದ ನಂತರ ಹಾಗೂ ಒಂದುವರೆ ವರ್ಷ ವಯಸ್ಸಿನಲ್ಲಿ ಎರಡು ಬಾರಿ ಲಸಿಕೆ ಹಾಕಿಸುವ ಮೂಲಕ ದಡಾರ ತಡೆಗಟ್ಟಬಹುದು ಎಂದರು. 

ಮಗುವಿನ ಒಂದುವರೆ ತಿಂಗಳು, ಎರಡುವರೆ ತಿಂಗಳು ಹಾಗೂ ಮೂರುವರೆ ತಿಂಗಳ ವಯಸ್ಸಿನಲ್ಲಿ ಕ್ರಮವಾಗಿ ಗಂಟಲು ಮಾರಿ, ನಾಯಿಕೆಮ್ಮು, ಧನುರ್ವಾಯು ರೋಟ ವೈರಸ್, ಹೆಚ್ ಇನ್‌ಫ್ಲ್ಯೂಯೆಂಜಾ, ಕಾಮಾಲೆ ಗಾಗಿ ಪೆಂಟಾವೈಲೆಂಟ್ ಲಸಿಕೆ, ರೋಟಾವೈರಸ್ ಅತಿಸಾರಬೇದಿ ಗೆ ನಿಮೋಕಾಕಲ್ ಲಸಿಕೆ ಹಾಕಲಾಗುತ್ತದೆ. ಅದೇರೀತಿಯಾಗಿ ಮಗುವಿನ ಒಂಬತ್ತು ತಿಂಗಳು ವಯಸ್ಸು ತುಂಬಿದ ನಂತರ ಮೆದುಳು ಜ್ವರ ರೋಗಕ್ಕೆ ಜಾಪನೀಸ್ ಎನ್ಸ-್ಪಲಿಟಿಸ್ ಲಸಿಕೆ, ದಡಾರ ರೂಬೇಲ್ಲಾ ರೋಗಕ್ಕೆ ಮಿಸಲ್ಸ್‌ ರೂಬೆಲ್ಲಾ ಲಸಿಕೆ, ಹಾಗೂ ಸಂಜೆಯ ಹೊತ್ತು ಕಂಡುಬರುವ ಇರುಳುಗಣ್ಣು ರೋಗಕ್ಕೆ ವಿಟಾಮಿನ್‌-ಎ ಅನ್ನಾಂಗ ದ್ರಾವಣ ನೀಡಲಾಗುತ್ತಿದ್ದು, ತಪ್ಪದೇ ಹಾಕಿಸಬೇಕು ಎಂದು ಅವರು ಹೇಳಿದರು. 

ಜಿಲ್ಲಾ ಆರ್‌.ಸಿ.ಹೆಚ್ ಅಧಿಕಾರಿ ಡಾ.ಹನುಮಂತಪ್ಪ ಅವರು ಮಾತನಾಡಿ, ಲಸಿಕೆ ನೀಡುವಲ್ಲಿ ಸಾರ್ವಜನಿಕರ ಅಭಿಪ್ರಾಯ ಮತ್ತು ಅನಿಸಿಕೆಗಳನ್ನು ಕ್ರೂಢೀಕರಿಸಿ ತಪ್ಪು ನಂಬಿಕೆಗಳ ಕುರಿತು ಜಾಗೃತಿ ನೀಡಲಾಗುತ್ತಿದ್ದು, ಗಾಳಿಸುದ್ದಿ ನಂಬಿ ಲಸಿಕೆ ಬೇಡವೆನ್ನುವವರಿಗೆ ವ್ಯಾಪಕವಾಗಿ ಮನೆ ಭೇಟಿ ಮೂಲಕ ಗುಂಪು ಸಭೆ, ಸಮುದಾಯ ಮುಖಂಡರ ಮೂಲಕ ಮಾಹಿತಿ ಒದಗಿಸಿ ಅವರಲ್ಲಿಯ ತಪ್ಪು ನಂಬಿಕೆಗಳನ್ನು ಹೋಗಲಾಡಿಸಿ ಎಲ್ಲಾ ಲಸಿಕೆಗಳನ್ನು ಹಾಕಿಸಬೇಕು ಎಂದು ಅವರು ಹೇಳಿದರು. 

ಈ ಸಂದರ್ಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಬಳ್ಳಾರಿ ವಲಯ ಪ್ರತಿನಿಧಿ ಆರ್‌.ಎಸ್‌.ಶ್ರೀಧರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಕ್ಷೇತ್ರ ಲಸಿಕಾ ಮೇಲ್ವಿಚಾರಕ ಕೋಟೇಶ್ವರಾವ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ರಾಜೇಶ್ವರಿ, ಆಶಾಕಾರ್ಯಕರ್ತೆ ತಾಯಮ್ಮ, ಅಂಗನವಾಡಿ ಕಾರ್ಯಕರ್ತೆ ಪುಷ್ಪ ಸೇರಿದಂತೆ ತಾಯಂದಿರು ಉಪಸ್ಥಿತರಿದ್ದರು.