ಜುಲೈ 1ರಂದು ವಿಶೇಷ ಉಪನ್ಯಾಸ

ಜುಲೈ 1ರಂದು ವಿಶೇಷ ಉಪನ್ಯಾಸ Special lecture on July 1st

ಜುಲೈ 1ರಂದು ವಿಶೇಷ ಉಪನ್ಯಾಸ

ಬೆಳಗಾವಿ 27: ಗುರುದೇವ್ ಡಾ. ಆರ್‌. ಡಿ. ರಾನಡೆ ಅವರ 139ನೇ ಜಯಂತಿ ನಿಮಿತ್ತ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎಸಿಪಿಆರ್ ಜುಲೈ 1ರಂದು ವಿದ್ವಾಂಸರಿಂದ ಉಪನ್ಯಾಸ ವಿಶಿಷ್ಟ ಕಾರ್ಯಕ್ರಮವನ್ನು ಇಲ್ಲಿನ ಹಿಂದವಾಡಿ ಗುರುದೇವ ರಾನಡೆ ಮಂದಿರದ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಇದು 2024-25 ರ ಶತಮಾನೋತ್ಸವ ಆಚರಣೆಯ ಸರಣಿಯಲ್ಲಿ ಮತ್ತೊಂದು ಪ್ರಮುಖ ಕಾರ್ಯಕ್ರಮವಾಗಿದೆ.   

ಆಕ್ಸ್‌ಫರ್ಡ್‌ ವಿದ್ವಾಂಸೆ, ಯುನೈಟೆಡ್ ಕಿಂಗ್‌ಡಮ್ (ಯುಕೆ) ನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಹಿಂದೂ ಅಧ್ಯಯನ ಪ್ರಾಧ್ಯಾಪಕಿ ಡಾ. ಅಶ್ವಿನಿ ಮೊಕಾಶಿ ಅವರು ಭಾರತೀಯ ಮತ್ತು ಗ್ರೀಕ್ ತತ್ವಶಾಸ್ತ್ರದಲ್ಲಿನ ನೈತಿಕ ಆದರ್ಶಗಳ ಕುರಿತು ಮತ್ತು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಮತ್ತೊಬ್ಬ ಪ್ರಮುಖ ವಿದ್ವಾಂಸ, ತತ್ವಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಬಸವರಾಜ ಎಚ್‌. ಗುಜಲರ್ ಅವರು ಡಾ. ಆರ್‌. ಡಿ. ರಾನಡೆ ಅವರ ತತ್ವಶಾಸ್ತ್ರದಲ್ಲಿನ ನೈತಿಕ ಮೌಲ್ಯಗಳ ಕುರಿತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.  

ಬೆಳಗಾವಿಯ ಖ್ಯಾತ ಕೈಗಾರಿಕೋದ್ಯಮಿ ಜಯಂತ್ ಹುಂಬರವಾಡಿ ಅವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.  

ಕಾರ್ಯಕ್ರಮಕ್ಕೆ ಎಮ್‌ಎನ್‌ಆರ್‌ಎಸ್ ಮಹಾಂತೇಶ ನಗರ ಬಿ.ಎಡ್‌. ಕಾಲೇಜ್, ಸಾಗರ ಬಿ.ಎಡ್‌. ಕಾಲೇಜ್, ಜೈನ್ ಮಹಿಳಾ ಬಿ.ಎಡ್‌. ಕಾಲೇಜ್, ಕೆ.ಆರ್‌.ಎಸ್‌. ಬಿ.ಎಡ್‌. ಕಾಲೇಜ್, ಎ.ಎಮ್‌.ಶೇಖ ಬಿ.ಎಡ್‌. ಕಾಲೇಜ್, ಚಂದ್ರಗಿರಿ ನಾಗನೂರ ಬಿ.ಎಡ್‌. ಕಾಲೇಜ್, ಸರಕಾರಿ ಬಿ.ಎಡ್‌. ಕಾಲೇಜ್, ಕೆ.ಎಲ್‌ಇಎಸ್ ಬಿ.ಎಡ್‌. ಕಾಲೇಜ್, ಆರ್‌ಸಿಯು ಅಧ್ಯಯನ ಮತ್ತು ಸಂಶೋಧನ ಮರಾಠಿ ವಿಭಾಗ ಬೆಂಬಲ ಸೂಚಿಸಿವೆ.   

ಬೆಳಗಾವಿ ವಿದ್ಯಾರ್ಥಿಗಳಿಗೆ ಇದೊಂದು ಅಪರೂಪದ ಅವಕಾಶವಾಗಿದ್ದು ಆಸಕ್ತ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.