ಶಿವರಾತ್ರಿ ಹಬ್ಬದ ಪೂಜೆ ಮತ್ತು ಜಾಗರಣೆ ಸಂಭ್ರಮ

ಶಿವರಾತ್ರಿ ಹಬ್ಬದ ಪೂಜೆ ಮತ್ತು ಜಾಗರಣೆ ಸಂಭ್ರಮ  Shivaratri festival worship and vigil celebration

ತಾಳಿಕೋಟೆ 16 :  ಪಟ್ಟಣದಲ್ಲಿ ಭಾನುವಾರ ಮಹಾಶಿವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಶಿವರಾತ್ರಿ ಪೂಜೆ ಮತ್ತು ಜಾಗರಣೆ ನಿಮಿತ್ತ ಖಾಸ್ಗತೇಶ್ವರಮಠ, ಬಜಾರ ಬಸವೇಶ್ವರ ದೇವಸ್ಥಾನ, ಶಿವಭವಾನಿ ಮಂದಿರ, ಮಹಾದೇವ ದೇವಸ್ಥಾನ, ಡೋಣಿ ಸಿದ್ದಲಿಂಗೇಶ್ವರ ದೇವಸ್ಥಾನ, ಅನಂತಪುರ ಪೇಟೆ ಮಲ್ಲಯ್ಯನ ದೇವಸ್ಥಾನ, ವಿಜಯಪುರ ರಸ್ತೆಯಲ್ಲಿರುವ ಪರೂತ ಮಲ್ಲಯ್ಯನ ದೇವಸ್ಥಾನಗಳು ಸೇರಿದಂತೆ ವಿವಿಧೆಡೆ ವಿಶೇಷ ಪೂಜಾ ಕಾರ್ಯಗಳು ಜರುಗಿದವು.

ಭಕ್ತಾದಿಗಳು ಬೆಳಿಗ್ಗೆಯಿಂದಲೆ ದೇವಸ್ಥಾನಗಳಿಗೆ ದಾಂಗುಡಿಯಿಟ್ಟಿದ್ದರು. ಶಿವಭಕ್ತರು ಬೆಳಿಗ್ಗೆಯಿಂದಲೇ ಸ್ನಾನಮುಗಿಸಿ ಉಪವಾಸ ವ್ರತಾಚರಣೆಯಲ್ಲಿ ತೊಡಗಿದ್ದರು. ಸಂಜೆಯ ಮಹಾಶಿವರಾತ್ರಿ ಪೂಜೆಗಾಗಿ ಮತ್ತು ಉಪವಾಸ ವ್ರತಾಚರಣೆ ಬಿಡಲು ಮಾರುಕಟ್ಟೆಯಲ್ಲಿ ಅಗತ್ಯದ ಖರೀದಿಯ ಭರಾಟೆಯೂ ತುಂಬಿತ್ತು. ಖರ್ಜೂರ, ದ್ರಾಕ್ಷಿ, ಸಪೋಟಾ, ಸೇಬು, ಗೆಣಸು, ಬಾಳೆ, ಕಲ್ಲಂಗಡಿ, ಕರಬುಜ್ ಮೊದಲಾದ ಹಣ್ಣುಗಳು ತಮ್ಮ ಬೆಲೆಯೇರಿಸಿಕೊಂಡರೂ ಭಕ್ತರ ಖರೀದಿಗೆ ಕಡಿವಾಣ ಬೀಳಲಿಲ್ಲ. ಬಸ್ ನಿಲ್ದಾಣದ ಬೀದಿಯಿಂದ ಆರಂಭಿಸಿ, ರಾಣಾಪ್ರತಾಪಸಿಂಹ ವೃತ್ತ, ಶಿವಾಜಿ ವೃತ್ತ, ವಿಠ್ಠಲ ಮಂದಿರ, ಕತ್ತರಿ ಬಜಾರ ಅಂಬಾಭವಾನಿ ಮಂದಿರವರೆಗಿನ ರಸ್ತೆಗಳಲ್ಲಿ ಖರೀದಿಗೆ ಜನತೆ ಕಿಕ್ಕಿರಿದು ಸೇರಿದ್ದರು. ಸಂಜೆ ಪಟ್ಟಣದ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ಮನೆಗೆ ತೆರಳಿ ಲಿಂಗಪೂಜೆಗೈದು ಉಪವಾಸ ವ್ರತಾಚರಣೆಯನ್ನು ಸಮಾಪ್ತ ಮಾಡಿದರು.

ಖಾಸ್ಗತೇಶ್ವರಮಠದಲ್ಲಿ ಭಕ್ತಾದಿಗಳಿಗೆ ಪೀಠಾಧಿಪತಿ ಸಿದ್ದಲಿಂಗದೇವರು ಆಶೀರ್ವಚನ ನೀಡಿದರು. ಶ್ರಿಮಠದಲ್ಲಿ ಪೂಜಾ ಸಾಮಗ್ರಿಗಳಾದ ಉತ್ರಾಣಿ ಬತ್ತಿ, ಬಿಲ್ವಪತ್ರೆ, ಅಭಿಷೇಕಗಳನ್ನು ಭಕ್ತಾದಿಗಳಿಗೆ ವಿತರಣೆ ಮಾಡಲಾಯಿತು. ರಾತ್ರಿಯೆಲ್ಲ ದೇವಸ್ಥಾನಗಳಲ್ಲಿ ಭಜನೆ, ಶಿವನಾಮಸ್ಮರಣೆ ಮೊದಲಾದವುಗಳನ್ನು ನಡೆಸಲಾಯಿತು.