ಗುರುವಿನ ಸ್ಮರಣೆಯಿಂದ ಆತ್ಮಜ್ಞಾನ ಸಾಧ್ಯ: ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ

ಗುರುವಿನ ಸ್ಮರಣೆಯಿಂದ ಆತ್ಮಜ್ಞಾನ ಸಾಧ್ಯ: ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ  Self-realization is possible through the remembrance of the Guru: Abhinava Shantalinga Shivacharya S

ಗುರುವಿನ ಸ್ಮರಣೆಯಿಂದ ಆತ್ಮಜ್ಞಾನ ಸಾಧ್ಯ: ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ  

ಧಾರವಾಡ 16: ಜನನ ಹಿ ಮರಣಗಳ ಚಕ್ರದಿಂದ ಮುಕ್ತರಾಗಿ ಬದುಕಿನ ಸಾರ್ಥಕತೆಯನ್ನು ಸಾಧಿಸಲು ಗುರುವಿನ ಕೃಪೆ ಅತ್ಯಗತ್ಯ ಎಂದು ತಾಲೂಕಿನ ಅಮ್ಮಿನಭಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕಿರಿಯ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.  

ಸಂಸ್ಥಾನದ ಲಿಂಗೈಕ್ಯ ಮಠಾಧೀಶರಾದ ಶ್ರೀಗುರು ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರ 90ನೇ ಪುಣ್ಯಾರಾಧನೆ ಅಂಗವಾಗಿ ಗುರುವಾರ ಯೋಗಸಮಾಧಿಗೆ ಪುಷ್ಪನಮನ ಸಲ್ಲಿಸಿ ಅವರು ಧರ್ಮಸಂದೇಶ ನೀಡಿದರು.  

"ಗುರುಕೃಪೆಯಿಲ್ಲದೆ ಆತ್ಮಜ್ಞಾನ ಲಭಿಸುವುದಿಲ್ಲ. ಆತ್ಮಜ್ಞಾನದಿಂದಲೇ ಸಾಕ್ಷಾತ್ಕಾರ ಸಾಧ್ಯವಾಗುತ್ತದೆ. ಆದ್ದರಿಂದ ಪ್ರತಿನಿತ್ಯ ಶ್ರೀಗುರುವಿನ ಸ್ಮರಣೆ ಹಾಗೂ ಅನುಸಂಧಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು" ಎಂದು ಹೇಳಿದರು.  

ಆಶೀರ್ವಚನ ನೀಡಿದ ಹಿರಿಯ  ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಲಿಂಗೈಕ್ಯ ಶ್ರೀಗುರು ಶಾಂತಲಿಂಗ ಶಿವಾಚಾರ್ಯರು ಇಷ್ಟಲಿಂಗಾರ್ಚನೆ, ಶಿವಪಂಚಾಕ್ಷರಿ ಮಹಾಮಂತ್ರ ಹಾಗೂ ಧರ್ಮಮಾರ್ಗದ ಮಹತ್ವವನ್ನು ಭಕ್ತರಿಗೆ ತಿಳಿಸಿ ಸನ್ಮಾರ್ಗದಲ್ಲಿ ನಡೆಯುವಂತೆ ಮಾರ್ಗದರ್ಶನ ನೀಡಿದ ಮಹನೀಯರು ಎಂದು ಸ್ಮರಿಸಿದರು.  

ವಿಶೇಷ ಪೂಜೆ  

ಪುಣ್ಯಾರಾಧನೆ ಅಂಗವಾಗಿ ಲಿಂಗೈಕ್ಯ ಶ್ರೀಗುರು ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರ ಯೋಗಸಮಾಧಿಯಲ್ಲಿ ಏಕಾದಶ ಮಹಾರುದ್ರಾಭಿಷೇಕ, ಅಷ್ಟೋತ್ತರ, ನೂತನಾಂಬರ ಧಾರಣೆ, ಪುಷ್ಪಾಲಂಕಾರ ಹಾಗೂ ಮಹಾಮಂಗಳಾರತಿ ಸೇರಿದಂತೆ ವಿವಿಧ ವಿಶೇಷ ಪೂಜಾ ಕೈಂಕರ್ಯಗಳು ಸೋಮಲಿಂಗಲಿಂಗ ಶಾಸ್ತ್ರಿ ಗುಡ್ಡದಮಠ ಅವರ ವೈದಿಕ ನೇತೃತ್ವದಲ್ಲಿ ನೆರವೇರಿದವು.  

ಶ್ರೀಮಠದ ಶಿವಾನಂದ ಸ್ವಾಮೀಜಿ, ಶಿವಯೋಗಿ, ವಿನಾಯಕ, ರೇಣುಕಾಚಾರ್ಯ ಹಾಗೂ ಈರಯ್ಯ ಹಿರೇಮಠ ಸೇರಿದಂತೆ ಅನೇಕರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.  

ಅಮ್ಮಿನಭಾವಿ, ಮರೇವಾಡ, ತಿಮ್ಮಾಪುರ, ಕರಡಿಗುಡ್ಡ, ಕವಲಗೇರಿ, ಚಂದನಮಟ್ಟಿ, ಹಾರೋಬೆಳವಡಿ ಸೇರಿದಂತೆ ಅವಳಿ ನಗರಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಹಾಪ್ರಸಾದ ಸ್ವೀಕರಿಸಿದರು.