ಜೆರುಸೆಲೆಂ 14: ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ಮುಂದುವರಿಸಿದರೆ "ಟೆಹ್ರಾನ್ ಸುಟ್ಟುಹೋಗುತ್ತದೆ" ಎಂದು ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಇರಾನ್ಗೆ ಎಚ್ಚರಿಕೆ ನೀಡಿದ್ದಾರೆ.
ಇರಾನ್ನ ಪರಮಾಣು, ಕ್ಷಿಪಣಿ ಮತ್ತು ಮಿಲಿಟರಿ ಸಂಕೀರ್ಣದ ಮೇಲೆ ಇಸ್ರೇಲ್ ದಾಳಿ ನಂತರ ಇರಾನ್ ಪ್ರತೀಕಾರದ ದಾಳಿ ಆರಂಭಿಸುತ್ತಿದ್ದಂತೆಯೇ ಕಾಟ್ಜ್ ಈ ರೀತಿಯ ಹೇಳಿಕೆ ನೀಡಿದ್ದಾರೆ.
ಇಸ್ರೇಲ್ ರಕ್ಷಣಾ ಪಡೆಗಳ (ಐಡಿಎಫ್) ಮುಖ್ಯಸ್ಥ ಇಯಾಲ್ ಜಮೀರ್, ಮೊಸಾದ್ ನಿರ್ದೇಶಕ ಡೇವಿಡ್ ಬರ್ನಿಯಾ ಮತ್ತಿತರ ಉನ್ನತ ಮಿಲಿಟರಿ ಅಧಿಕಾರಿಗಳೊಂದಿಗೆ ಪರಿಸ್ಥಿತಿಯ ಮೌಲ್ಯಮಾಪನದ ಸಂದರ್ಭದಲ್ಲಿ ಮಾತನಾಡಿದ ಕಾಟ್ಜ್, ಇರಾನ್ನ ಸರ್ವಾಧಿಕಾರಿಯು ಅಲ್ಲಿನ ನಾಗರಿಕರನ್ನು ಒತ್ತೆಯಾಳುಗಳಾಗಿ ಪರಿವರ್ತಿಸುತ್ತಿದ್ದಾರೆ. ಇಸ್ರೇಲಿ ನಾಗರಿಕರ ಮೇಲಿನ ಕ್ರಿಮಿನಲ್ ದಾಳಿಗೆ ವಿಶೇಷವಾಗಿ ಟೆಹ್ರಾನ್ನ ನಿವಾಸಿಗಳು ಭಾರೀ ಬೆಲೆ ತೆರಬೇಕಾದ ಪರಿಸ್ಥಿತಿಯನ್ನು ಸೃಷ್ಟಿಸಿದ್ದಾರೆ ಎಂದರು.
ಇಸ್ರೇಲ್ ಇಲ್ಲಿಯವರೆಗೆ ತನ್ನ ದಾಳಿಗಳನ್ನು ಇರಾನ್ ಪರಮಾಣು ಮತ್ತು ಮಿಲಿಟರಿ ಕಟ್ಟಡಗಳಿಗೆ ಸೀಮಿತಗೊಳಿಸಿದ್ದು, ಪ್ರಮುಖ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡಿದೆ. ಕಳೆದ ರಾತ್ರಿಯಿಂದ ಇರಾನ್ ಹಲವಾರು ಬ್ಯಾರೇಜ್ಗಳಲ್ಲಿ ಇಸ್ರೇಲ್ನ ಮೇಲೆ ಸುಮಾರು 200 ಖಂಡಾಂತರ ಕ್ಷಿಪಣಿ ದಾಳಿ ನಡೆಸಿದ್ದು, ವಾಯು ರಕ್ಷಣೆಯಿಂದ ಹೆಚ್ಚಿನ ಕ್ಷಿಪಣಿ ದಾಳಿ ತಡೆಹಿಡಿಯಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ ಹೇಳಿದೆ.
ಇರಾನ್ ನಡೆಸಿದ ಸಣ್ಣ ಪ್ರಮಾಣದ ಕ್ಷಿಪಣಿ ದಾಳಿಯಿಂದ ಮಧ್ಯ ಇಸ್ರೇಲ್ನ ಟೆಲ್ ಅವಿವ್, ರಮತ್ ಗನ್ ಮತ್ತು ರಿಶನ್ ಲೆಜಿಯಾನ್ನ ವಸತಿ ಪ್ರದೇಶಗಳಲ್ಲಿ ಸಾವುನೋವುಗಳು ಮತ್ತು ಹಾನಿಯನ್ನುಂಟುಮಾಡಿದೆ . ಇರಾನಿನ ಕ್ಷಿಪಣಿ ದಾಳಿಯಲ್ಲಿ ಮೂವರು ಇಸ್ರೇಲಿಗಳು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 70 ಜನರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ತನ್ನ ಎಲ್ಲಾ ವಾಯು ನೆಲೆಗಳು ಸೇರಿದಂತೆ, ತಮ್ಮ ಕಾರ್ಯಚಟುವಟಿಕೆಗೆ ಯಾವುದೇ ಹಾನಿಯಾಗದಂತೆ ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಇಸ್ರೇಲ್ ರಕ್ಷಣಾ ಪಡೆ ತಿಳಿಸಿದೆ.