ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಯೇ ರಾಷ್ಟ್ರಧರ್ಮ: ಡಾ. ಅತುಲ್ ಜೈನ್

Protection of natural resources is national religion: Dr. Atul Jain

ಬೆಳಗಾವಿ 24: ಪಂಡಿತ ದೀನದಯಾಳ ಉಪಾಧ್ಯಾಯರ ಏಕಾತ್ಮ ಮಾನವ ತತ್ವದ ಅಡಿಯಲ್ಲಿ ಮಾನವ ತನ್ನ ಅವಶ್ಯ ಆಧಾರಿತವಾಗಿ ಜೀವನ ನಿರ್ವಹಣೆಗೆ ಮುಂದಾಗಿ ನೈಸರ್ಗಿಕ ಸಂಪನ್ಮೂಲಗಳ ಸದ್ಬಳಕೆಗೆ ಆದ್ಯತೆ ನೀಡುವ ಮೂಲಕ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗೆ ಮುಂದಾಗುವುದೆ ರಾಷ್ಟ್ರ ಧರ್ಮವಾಗಿದೆ ಎಂದು ನವದೆಹಲಿಯ ದೀನದಯಾಳ ಸಂಶೋಧನಾ ಕೇಂದ್ರದ ನಿರ್ದೇಶಕ ಅತುಲ್ ಜೈನ್ ಹೇಳಿದರು.  

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪಂಡಿತ ದೀನದಯಾಳ ಪೀಠ ಮತ್ತು ಬೆಳಗಾವಿಯ ಪ್ರಬುದ್ಧ ಭಾರತ ಸಹಯೋಗದಲ್ಲಿ ಮಂಗಳವಾರ ವಿವಿಯ ಕುವೆಂಪು ಸಭಾಭವನದಲ್ಲಿ “ಏಕಾತ್ಮ ಮಾನವದರ್ಶನ: ಎ ಹೊಲಿಸ್ಟಿಕ್ ವಿಜನ್ ಫಾರ್ ವಿಕಸಿತ ಭಾರತ” ವಿಷಯದ ಕುರಿತಾದ ಒಂದು ದಿನದ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

ಮಾನವನ ಬದುಕು ಪರಿಸರ, ನೈಸರ್ಗಿಕ ಸಂಪನ್ಮೂಲ ಈ ಎಲ್ಲದರ ಜೊತೆಗೆ ಬೆರೆತುಕೊಂಡಿದೆ. ಜಲ, ವಾಯು, ಅರಣ್ಯ ಸಂಪತ್ತು, ಜೀವ ವೈವಿಧ್ಯತೆ ಎಲ್ಲದರ ರಕ್ಷಣೆ ಮತ್ತು ಪ್ರಗತಿಗೆ ಮಾನವ ಶ್ರಮಿಸಬೇಕು. ತನ್ನ ಸವಲತ್ತು ಮತ್ತು ಆಸೆಗಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ಅತಿಯಾಗಿ ಬಳಸುವುದರಿಂದ ಮುಂದೊಂದು ದಿನ ಬಹು ದೊಡ್ಡ ಸಂಕಷ್ಟ ಎದುರಾಗುವುದು ಎಂದು ಭವಿಷ್ಯ ನುಡಿದರು.  

ಬೆಳಗಾವಿ ಸಹ್ಯಾದ್ರಿ ಬೆಟ್ಟ ಸರಣಿಗಳ ಹೊಂದಿಕೊಂಡಿರುವ ನಗರ. ಈ ನಗರದಲ್ಲಿ ಈ ಹಿಂದಿನಿಂದಲೂ ಪ್ರತಿ ಮನೆಗಳಲ್ಲಿ ಬಾವಿಗಳಿದ್ದಾವೆ. ಆ ಬಾವಿಗಳೆ ನಗರದ ಪ್ರಮುಖ ನೀರಿನ ಅವಶ್ಯಕತೆಗಳನ್ನು ನೀಗಿಸುತ್ತಿವೆ. ಆದರೆ, ಆಧುನಿಕ ಮನೆ ವಿನ್ಯಾಸದ ಇತ್ತೀಚಿನ ಬೇಡಿಕೆ ಅನುಸಾರ ಅನೇಕರು ಬಾವಿ ಮುಚ್ಚಿಸಿ, ಅತಿಯಾದ ಕೊಳವೆ ಬಾವಿ ನಿರ್ಮಾಣಕ್ಕೆ ಮುಂದಾಗಿ, ಅಂತರ್ಜಲ ಕುಸಿತಕ್ಕೆ ಕಾರಣವಾಗಿದೆ. ಮಾನವ ತನ್ನ ದಿನನಿತ್ಯದ ಉಪಯೋಗ ಸಂಪನ್ಮೂಲಗಳಲ್ಲಿ ದೇವರನ್ನು ಕಾಣುವುದು ಸಹಜ. ಆ ಕೃತಜ್ಞತಾ ಭಾವದ ಸಂಸ್ಕೃತಿಯು ಕೂಡಾ ಮರೆಯಾಗುತ್ತಿರುವುದು ಸೋಜಿಗದ ಸಂಗತಿ ಎಂದರು. 

ಗ್ರಾಮಗಳು ಬಡತನ, ನಿರುದ್ಯೋಗ, ದುಶ್ಚಟ, ಅಪೌಷ್ಟಿಕತೆಯಿಂದ ಮುಕ್ತವಾಗಿ ಸಬಲೀಕರಣಗೊಳ್ಳಲು ಅಲ್ಲಿ ಆಡಳಿತದ ವಿಕೇಂದ್ರಿಕರಣ ಮತ್ತು ಗ್ರಾಮೀಣ ಭಾಗದ ಯುವಕರು ಶ್ರಮಿಸಬೇಕು. ಗ್ರಾಮಗಳ ವಿಕಾಸದಿಂದ ಮಾತ್ರ ಭಾರತ ಸುಸ್ಥಿರ ಅಭಿವೃದ್ಧಿ ಸಾಧ್ಯ. ಆದ್ದರಿಂದ ಪಂಡಿತ ದೀನದಯಾಳ ಅವರು ತಿಳಿಸಿದ ಏಕಾತ್ಮ ಮಾನವ ತತ್ವಗಳನ್ನು ಎಲ್ಲರೂ ತಮ್ಮ ಜೀನವದಲ್ಲಿ ಅಳವಡಿಸಿಕೊಂಡು ದೇಶದ ಪ್ರಗತಿಗೆ ಸಹಕರಿಸಬೇಕು ಎಂದರು. 

ವಿಧಾನ ಪರಿಷತ್ ಸದಸ್ಯ ಡಾ. ತಳವಾರ ಸಾಬಣ್ಣ ಮಾತನಾಡಿ, ಭಾರತದ ಅರ್ಥಿಕತೆಯು ಇಲ್ಲಿನ ಕೌಟುಂಬಿಕ ವ್ಯವಸ್ಥೆ ಮೇಲೆ ಆಧಾರಿತವಾಗಿದೆ. ಕೃಷಿ, ವ್ಯಾಪಾರ ಮತ್ತು ಗುಡಿ ಕೈಗಾರಿಕೆ ಈ ಎಲ್ಲ ವೃತ್ತಿಗಳು ಒಬ್ಬ ವ್ಯಕ್ತಿ ಮೇಲೆ ನಡೆಯುವುದಿಲ್ಲ. ಒಂದು ಸಂಪೂರ್ಣ ಕುಟುಂಬವೆ ಆ ವೃತ್ತಿಯ ಕಾರ್ಯಗಳಲ್ಲಿ ತೊಡಗಿರುವದನ್ನು ಕಾಣುತ್ತೇವೆ. ಕೃಷಿಯಲ್ಲಿ ಸಹ ಪೂರ್ಣ ಕುಟುಂಬ ಮತ್ತು ಪರಿವಾರ, ಗುಡಿ ಕೈಗಾರಿಕೆಯಲ್ಲಿ ಕೂಡಾ ಸಂಪೂರ್ಣ ಕುಟಂಬ ತೊಡಗಿರುವುದರ ಈ ದೇಶದ ವಿಶೇಷತೆಯಾಗಿದೆ ಎಂದರು. 

ಪಾಶ್ಚಿಮಾತ್ಯದಲ್ಲಿ ಯಂತ್ರ ಆಧಾರಿತ ಅರ್ಥಿಕ ವ್ಯವಸ್ಥೆ ಚಾಲ್ತಿಯಲ್ಲಿದೆ. ಈ ಪರಿಣಾಮ ಅಲ್ಲಿ ಆಗಾಗ ಆರ್ಥಿಕ ಕುಸಿತ ಕಾಣಬಹುದು. 2008ರ ಬಹು ದೊಡ್ಡ ಆರ್ಥಿಕ ಕುಸಿತ ಅಮೆರಿಕಾದಲ್ಲಿ ಕಂಡಿತು. ಆದರೆ, ಭಾರತಕ್ಕೆ ಯಾವುದೇ ಸಮಸ್ಯೆ ಉಂಟಾಗಲಿಲ್ಲ. ಏಕೆಂದರೆ ಭಾರತದ ಜನ ಸಾಮಾನ್ಯರ ಕೌಟುಂಬಿಕ ವ್ಯವಸ್ಥೆಯು ಆರ್ಥಿಕ ವ್ಯವಸ್ಥೆಗೆ ಭದ್ರ ಬುನಾದಿ ಒದಗಿಸಿವೆ. ಗ್ರಾಮೀಣ ಪ್ರದೇಶಗಳ ಸ್ವಾವಲಂಬನೆ ಹೊಂದುವುದು ಮತ್ತು ಸಶಕ್ತಗೊಳ್ಳವುದು ಪಂಡಿತ್ ದೀನದಯಾಳ ಉಪಾಧ್ಯಾಯರ ಆಶಯವಾಗಿದೆ. ಆ ನಿಟ್ಟಿನಲ್ಲಿ ಪಂಡಿತ್ ದೀನ ದಯಾಳ ಪೀಠ ಕಾರ್ಯತತ್ಪರವಾಗಿರುವುದು ಸಂತಸದ ಸಂಗತಿ ಎಂದರು. 

ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಮಾತನಾಡಿ, ಮುಂಬರುವ ಸೆಪ್ಟೆಂಬರ್‌ನಲ್ಲಿ ಪಂಡಿತ್ ದೀನದಯಾಳ ಉಪಾಧ್ಯಾಯ ಅವರ ಜಯಂತಿ ಆಚರಣೆ ಸಂದರ್ಭದಲ್ಲಿ ಎರಡು ದಿನದ ರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಳ್ಳಲಾಗುವುದು. ಚಿತ್ರಕೂಟದಲ್ಲಿರುವ ದೀನದಯಾಳ ಸಂಶೋಧನಾ ಕೇಂದ್ರದ ಕೃತಿಗಳನ್ನು ಆರ್‌ಸಿಯು ಪ್ರಸಾರಂಗ ಅನುವಾದಿಸಿ, ಮುದ್ರಣಗೊಳಿಸುವ ಯೋಜನೆ ಹೊಂದಿದೆ ಎಂದರು.  

ಕುಲಸಚಿವ ಸಂತೋಷ ಕಾಮಗೌಡ, ಮೌಲ್ಯಮಾಪನ ಕುಲಸಚಿವ ಪ್ರೊ. ರವೀಂದ್ರನಾಥ ಕದಂ, ಪೀಠದ ಸಲಹಾ ಸಮಿತಿಯ ಸದಸ್ಯ ರಾಘವೇಂದ್ರ ಕಾಗವಾಡ, ಮತ್ತು ಪ್ರೊ. ಶಿವಾನಂದ ಗೋರನಾಳೆ ಪ್ರೊ. ಜೆ. ಮಂಜಣ್ಣ ಡಾ. ಕನಕಪ್ಪ ಪೂಜಾರ ಡಾ. ಶೈಲಜಾ ಹಿರೇಮಠ ಉಪಸ್ಥಿತರಿದ್ದರು.  

ರಾಷ್ಟ್ರೀಯ ವಿಚಾರ ಸಂಕಿರಣದ ಮೊದಲ ಗೋಷ್ಠಿಯಲ್ಲಿ ಡಾ. ಅಮೀತ ಗೋಸ್ವಾಮಿ “ ಎಕಾತ್ಮ ಮಾನವ ದರ್ಶನ” ಕುರಿತಾದ ವಿಚಾರಗಳನ್ನು ಪಂಡಿತ ದೀನದಯಾಳರವರ ಆಧಾರಗಳ ಜೋತೆಗೆ ಪ್ರಸ್ತುತಪಡಿಸಿದರು. 

ಎರಡನೇ ಗೋಷ್ಠಿಯಲ್ಲಿ ಸಂಶೋಧನಾ ಪ್ರಭಂಧ ಮಂಡನೆ ಮಾಡಲಾಯಿತು. ಸಮಾರೋಪ ಸಮಾರಂಭದಲ್ಲಿ ಬೆಳಗಾವಿಯ ಹಿರಿಯ ವಕೀಲರಾದ ಎಂ. ಬಿ. ಝೀರಲಿ ಸಮಾರೋಪ ಬಾಷಣ ಮಾಡಿದರು. ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಡಾ. ಸುರೇಶ ಅಂಗಡಿಯವರು ದೀನದಯಾಳರ ತತ್ವಾದರ್ಶಗಳನ್ನು ತಿಳಿಸಿದರು. 

 ಕುಮಾರಿ ಮಹೆಶ್ವರಿ ಮತ್ತು ಆಶಾ ಪ್ರಾರ್ಥಿಸಿದರು. ಪೀಠದ ನಿರ್ದೇಶಕರಾದ ಪ್ರೊ. ಬಿ. ಎಸ್‌. ನಾವಿ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು ಪೀಠದ ಸಹಾಯಕ ಪ್ರಾಧ್ಯಾಪಕ ಡಾ. ಶಿವಲಿಂಗಯ್ಯ ಗೋಠೆ ಪೀಠದ ಸಹಾಯಕ ಸಂಶೋಧಕ ಕು. ಯಲ್ಲಪ್ಪ ಮೂಡಲಗಿ 300 ಕ್ಕಿಂತ ಹೆಚ್ಚಿನ ವಿಧ್ಯಾರ್ಥಿಗಳು ಭಾಗವಹಿಸದ್ದರು. ಡಾ. ಪ್ರಕಾಶ ಕಟ್ಟಿಮನಿ ವಂದನಾರೆ​‍್ಣ ಮಾಡಿದರು ಮಹಾದೇವಿ. ಸಬೀನಾ ನಿರೂಪಣೆ ಮಾಡಿದರು.